ರಾಜ್ಯಾದ್ಯಂತ ಕಾಲೇಜುಗಳು ಓಪನ್; ರಾಮನಗರದಲ್ಲಿ ಕಾಲೇಜಿನತ್ತ ಮುಖ ಮಾಡದ ವಿದ್ಯಾರ್ಥಿಗಳು
ರಾಮನಗರ, ನವೆಂಬರ್ 17: ಕೊರೊನಾ ಸೋಂಕಿನ ಕಾರಣವಾಗಿ ಕಳೆದು ಏಳು ತಿಂಗಳುಗಳಿಂದ ಮುಚ್ಚಿದ್ದ ಕಾಲೇಜುಗಳು ರಾಜ್ಯಾದ್ಯಂತ ಮಂಗಳವಾರದಿಂದ ಆರಂಭವಾಗಿವೆ. ಆರಂಭಿಕವಾಗಿ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ.
Recommended Video
ರಾಜ್ಯದಲ್ಲಿ ಕೆಲವು ದಿನಗಳಿಂದೀಚೆ ಕೊರೊನಾ ಪ್ರಕರಣಗಳು ಇಳಿಮುಖವಾಗಿದ್ದು, ಈ ನಡುವೆ ಕಾಲೇಜುಗಳೂ ಆರಂಭಗೊಳ್ಳುತ್ತಿವೆ. ಕಾಲೇಜು ಆಡಳಿತ ಮಂಡಳಿಗಳು ಕೊರೊನಾ ಮಾರ್ಗಸೂಚಿಯಂತೆ ಸಿದ್ಧತೆ ಮಾಡಿಕೊಂಡಿವೆ. ಪ್ರತಿ ಬೆಂಚ್ ಗಳ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಾಲೇಜು ಆವರಣ, ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
ಕಾಲೇಜುಗಳು ಪುನರಾರಂಭ: ಬೆಂಗಳೂರಿನ 450 ಕಡೆ ಗಂಟಲು ದ್ರವ ಮಾದರಿ ಸಂಗ್ರಹ ತಂಡ ನಿಯೋಜನೆ
ಆದರೆ ರಾಮನಗರದಲ್ಲಿ ಮಂಗಳವಾರ ಕಾಲೇಜು ತೆರೆದಿದ್ದರೂ ವಿದ್ಯಾರ್ಥಿಗಳು ಕಾಲೇಜಿನತ್ತ ಮುಖ ಮಾಡಿಲ್ಲ. ವಿದ್ಯಾರ್ಥಿಗಳಿಲ್ಲದೇ ಚನ್ನಪಟ್ಟಣ ಪ್ರಥಮ ದರ್ಜೆ ಕಾಲೇಜು ಬಿಕೋ ಎನ್ನುತ್ತಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿರುವ ಈ ಕಾಲೇಜಿಗೆ ಮಂಡ್ಯ ಜಿಲ್ಲೆಯ ಮದ್ದೂರು, ಕುಣಿಗಲ್ ತಾಲೂಕಿನ ಕೆಲ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಇಂದು ಕಾಲೇಜಿಗೆ ವಿದ್ಯಾರ್ಥಿಗಳು ಬಂದಿಲ್ಲ. ಕಾಲೇಜಿನಲ್ಲಿ ಎಲ್ಲಾ ಸುರಕ್ಷಿತ ಕ್ರಮ ವಹಿಸಿದ್ದರೂ ವಿದ್ಯಾರ್ಥಿಗಳು ಬರಲು ಆಸಕ್ತಿ ವಹಿಸಿಲ್ಲ.
ಜೊತೆಗೆ ಕಾಲೇಜುಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ರಾಮನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಗರಸಭೆ ಸಿಬ್ಬಂದಿ ಸ್ಯಾನಿಟೈಸ್ ಮಾಡುವ ಕಾರ್ಯವನ್ನು ಕೈಗೊಂಡಿದ್ದಾರೆ. ತಲಾ ಒಂದು ಡೆಸ್ಕ್ ಗೆ ಇಬ್ಬರು ವಿದ್ಯಾರ್ಥಿಗಳಿಗೆ ಕೂರಲು ಅವಕಾಶ ಮಾಡಿಕೊಟ್ಟಿದೆ. ಆದರೆ ನಿರೀಕ್ಷಿಸಿದಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿಲ್ಲ.
ರಾಮನಗರದಲ್ಲಿ ಕೊರೊನಾ ಪ್ರಕರಣಗಳು: ರಾಮನಗರದಲ್ಲಿ ಸೋಮವಾರದ ವರದಿಯಂತೆ, ಇದುವರೆಗೂ 7089 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6894 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 120 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ ಒಟ್ಟು 75 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.