ರಾಜಕೀಯವಾಗಿ ಯೋಗೇಶ್ವರ್ ನ ಬಗ್ಗುಬಡಿಯಲು ತಂತ್ರ ಶುರು!
ರಾಮನಗರ, ನವೆಂಬರ್ 29: ರಾಮನಗರ ಜಿಲ್ಲೆಯಲ್ಲಿ ಒಂದಷ್ಟು ಪ್ರಾಬಲ್ಯ ಹೊಂದಿರುವ ಶಾಸಕ ಸಿ.ಪಿ.ಯೋಗೇಶ್ವರ್ ಕಳೆದ ಕೆಲವು ವರ್ಷಗಳಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ತನ್ನ ವೈಯಕ್ತಿಕ ವರ್ಚಸ್ಸಿನಿಂದಲೇ ಗೆಲವು ಸಾಧಿಸುತ್ತಾ ಬಂದಿದ್ದಾರೆ. ಇದಕ್ಕೆ ಅವರು ಪಕ್ಷೇತರರಾಗಿ ಗೆಲುವು ಸಾಧಿಸಿದ್ದೇ ಸಾಕ್ಷಿ.
'ಚನ್ನಪಟ್ಟಣವನ್ನ ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ'
ಈ ಹಿಂದೆ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಯೋಗೇಶ್ವರ್ ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡು ಕುಳಿತುಕೊಂಡ ಉದಾಹರಣೆಗಳಿಲ್ಲ. ಪಕ್ಷದಲ್ಲಿ ತಮಗೆ ಅಸಮಾಧಾನವಾಯಿತು ಎಂದಾಕ್ಷಣ ಅದನ್ನು ಬಿಟ್ಟು ಮತ್ತೊಂದು ಪಕ್ಷದತ್ತ ಮುಖ ಮಾಡಿದ್ದಾರೆ. ಅದರಿಂದ ಲಾಭವನ್ನು ಪಡೆದುಕೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಮಂಡ್ಯದಲ್ಲಿ ಕಮಲ ಅರಳಿಸುವ ಯೋಗೇಶ್ವರ್ ತಂತ್ರ ಫಲ ನೀಡುವುದೆ?
ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದ ಅವರು ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ನತ್ತ ಮುಖ ಮಾಡಿದರೂ ಅಲ್ಲಿ ಯಾವುದೇ ಸ್ಥಾನಮಾನ ದಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮೇಲ್ನೋಟಕ್ಕೆ ಒಂದೇ ಪಕ್ಷದಲ್ಲಿದ್ದರೂ ಡಿಕೆಶಿ ಸಹೋದರರು ಮತ್ತು ಇವರ ನಡುವೆ ಹಗ್ಗಜಗ್ಗಾಟವಂತೂ ಮುಂದುವರೆದಿತ್ತು. ಇದೀಗ ಚುನಾವಣೆ ಹತ್ತಿರ ಬಂದಿರುವುದರಿಂದ ಕಾಂಗ್ರೆಸ್ ನ ಕೈ ಬಿಟ್ಟು ಕಮಲ ಹಿಡಿದುಕೊಂಡಿರುವ ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧಿಸೋದು ಖಚಿತ.
ಯೋಗೇಶ್ವರ್ ಹಣಿಯಲು ತಂತ್ರ
ಜತೆಗೆ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬ ಸಂಕಲ್ಪ ತೊಟ್ಟಿರುವುದು ಇದೀಗ ಜಟಾಪಟಿಗೆ ಕಾರಣವಾಗಿದೆ. ಹೀಗಾಗಿ ರಾಮನಗರ ಸೇರಿದಂತೆ ಹಲವೆಡೆ ತಮ್ಮ ಪ್ರಾಬಲ್ಯವನ್ನು ಮೆರೆದು ರಾಜಕೀಯ ಪಟ್ಟು ಬಳಸಿ ಯೋಗೇಶ್ವರ್ ಅವರನ್ನು ಹಣಿಯಲು ತಂತ್ರ ರೂಪಿಸಲಾಗುತ್ತಿದೆ. ಇದಕ್ಕೆ ಜೆಡಿಎಸ್ ನ ಸಹಕಾರ ಪಡೆಯುವ ಪ್ರಯತ್ನವೂ ನಡೆಯುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಯೋಗೇಶ್ವರ್ ಪ್ರತಿಸ್ಪರ್ಧಿ ಯಾರು?
ಒಂದು ವೇಳೆ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸಿದರೆ ಅಲ್ಲಿ ಅವರ ಮುಂದೆ ನಿಂತು ಗೆಲ್ಲುವ ಪ್ರಬಲ ಅಭ್ಯರ್ಥಿಗಳು ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಇಲ್ಲ ಎಂದೇ ಹೇಳಬೇಕಾಗುತ್ತದೆ. ಹೀಗಾಗಿ ಅವರಿಗೆ ಪ್ರಬಲ ಪೈಪೋಟಿ ನೀಡಬೇಕಾದರೆ ಅದು ಡಿ.ಕೆ.ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರಿಂದ ಮಾತ್ರ ಸಾಧ್ಯ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣಾ ಕಣಕ್ಕೆ ಡಿ.ಕೆ.ಸುರೇಶ್ ಅವರೇ ಕಣಕ್ಕಿಳಿಯಲು ಹುಮ್ಮಸ್ಸು ತೋರಿದ್ದಾರೆ. ಆದರೆ ಇದಕ್ಕೆ ಹೈಕಮಾಂಡ್ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಮಾತ್ರ ನಿಗೂಢವಾಗಿದೆ.
ಜೆಡಿಎಸ್ ಜೊತೆ ಒಳ ಒಪ್ಪಂದ?!
ಕಾರಣ ಲೋಕಸಭಾ ಚುನಾವಣೆಗೆ ಇನ್ನೆರಡು ವರ್ಷಗಳು ಬಾಕಿ ಇರುವುದರಿಂದ ಹೈಕಮಾಂಡ್ ಸಂಸದನನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲ ಈ ನಿರ್ಧಾರಕ್ಕೆ ಒಪ್ಪದೆಯೂ ಇರಬಹುದು. ಆದರೂ ಅದ್ಯಾಕೋ ಡಿ.ಕೆ.ಸುರೇಶ್ ಅವರಿಗೆ ಕೇಂದ್ರ ರಾಜಕೀಯಕ್ಕಿಂತ ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಆಸಕ್ತಿ ಬಂದಿದೆ. ಅಷ್ಟೇ ಅಲ್ಲದೆ, ಸಿ.ಪಿ.ಯೋಗೇಶ್ವರ್ ಗೆ ಸೆಡ್ಡು ಹೊಡೆಯಲೇ ಬೇಕೆಂಬ ಹಠಕ್ಕೂ ಬಿದ್ದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕಾಗಿ ಜೆಡಿಎಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ದೇವೇಗೌಡರೊಂದಿಗೆ ಆಪ್ತರಾಗುತ್ತಿರುವ ಡಿಕೆಶಿ ಸಹೋದರರು!
ದೇವೇಗೌಡರ ಕುಟುಂಬದೊಂದಿಗೆ ಡಿಕೆಶಿ ಸಹೋದರರು ಹತ್ತಿರವಾಗುತ್ತಿರುವುದನ್ನು ಗಮನಿಸಿದರೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸುವ ತಂತ್ರವೂ ಕಂಡು ಬರುತ್ತಿದೆ. ಒಂದು ಯೋಗೇಶ್ವರ್ ಅವರ ವಿರುದ್ಧ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರೀತಿಯ ತಂತ್ರಗಳನ್ನು ಬಳಸಿ ರಾಜಕೀಯವಾಗಿ ಬಗ್ಗು ಬಡಿಯಲು ಅಖಾಡಗಳನ್ನು ಸೃಷ್ಠಿ ಮಾಡುವುದು. ಮತ್ತೊಂದು ಮುಂದಿನ ಚುನಾವಣೆಯಲ್ಲಿ ರಾಜಕೀಯ ಅಂತತ್ರ ಸ್ಥಿತಿ ಎದುರಾದರೆ ಜೆಡಿಎಸ್ ನೊಂದಿಗೆ ಮೈತ್ರಿ ಬೆಳೆಸುವುದಾಗಿದೆ. 2018ವಿಧಾನಸಭಾ ಚುನಾವಣೆ ಬಹಳ ಹತ್ತಿರದಲ್ಲಿದೆ. ಹೀಗಾಗಿ ರಾಜಕೀಯಪಕ್ಷಗಳ ನಾಯಕರ ತಂತ್ರಗಳು ಏನೆಲ್ಲ ಇದೆಯೋ ಎಂಬುದಂತು ಸದ್ಯಕ್ಕೆ ಗೊತ್ತಾಗದೆ ಹೋದರೂ ಮುಂದಿನ ದಿನಗಳಲ್ಲಿ ಅದು ಬಹಿರಂಗವಾಗಲೇ ಬೇಕು.