ಕನಕಪುರ ನಗರಸಭೆ ಚುನಾವಣೆ; ಅಭ್ಯರ್ಥಿ ಒಬ್ಬರೇ, ಹೆಸರು ಎರಡು, ಒತ್ತಡ ಹಾಕಿದ್ದಾರಾ ಡಿಕೆ ಸಹೋದರರು?
ಕನಕಪುರ, ನವೆಂಬರ್ 30: ಸ್ಥಳೀಯ ಸಂಸ್ಥೆ ಚುನಾವಾಣೆಯಲ್ಲಿ ಚುನಾವಣಾಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ ಕನಕಪುರದಲ್ಲಿ ನಡೆದಿದೆ.
ಕಳೆದ ತಿಂಗಳು ಕನಕಪುರ ನಗರಸಭೆಯ 31 ವಾರ್ಡ್ ಗಳ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ಡಿಕೆ ಸಹೋದರರು 26 ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದರು. ಇದೀಗ 6ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿಷ್ಕಲ.ಕೆ.ವಿ ಎನ್ನುವವರು ಮತದಾರರ ಪಟ್ಟಿಯಲ್ಲಿ ಸೌಶಿತ.ಕೆ.ವಿ ಎಂದು ಇದ್ದರು ಚುನಾವಣಾ ಅಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದು, ಅಧಿಕಾರಿಗಳು ಡಿಕೆ ಸಹೋದರರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಪರಾಜಿತ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪ್ರತಿಭಾ ಆರೋಪಿಸಿದ್ದಾರೆ.
ಕನಕಪುರ, ಮಾಗಡಿ ಸ್ಥಳೀಯ ಸಂಸ್ಥೆ ಚುನಾವಣೆ; ಖಾತೆ ತೆರೆದ ಕಮಲ
ನಗರಸಭೆಯ 6ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದ ಪ್ರತಿಭಾಗೆ ಪಕ್ಷದ ಟಿಕೆಟ್ ಕೈತಪ್ಪಿ ಅದೇ ವಾರ್ಡ್ ನ ನಿಷ್ಕಲ ಕೆ.ವಿ ಎನ್ನುವವರಿಗೆ ಟಿಕೆಟ್ ಸಿಕ್ಕಿ, ಅವರು ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ ಕಾನೂನು ಬಾಹಿರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ಕೂಡ ಗಮನಹರಿಸಿಲ್ಲ, ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಚುನಾವಣಾಧಿಕಾರಿ ದಿವಾಕರ್ ಕರ್ತವ್ಯ ಲೋಪ ಎಸಗಿರುವ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ. ಚುನಾವಣಾಧಿಕಾರಿಗಳಿಗೆ ಮತದಾನದ ದಿನದಂದು ದೂರು ನೀಡಿದರು ಕೆಲ ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ದಿವಾಕರ್ ಕರ್ತವ್ಯ ಲೋಪ ಎಸಗಿದ್ದಾರೆ. ನಮ್ಮ ಕಾನೂನು ಹೋರಾಟಕ್ಕೆ ಡಿ.ಕೆ.ಸಹೋದರರು ಕೂಡ ಬೆಂಬಲ ಕೊಡಬೇಕೆಂದು 6ನೇ ವಾರ್ಡ್ ಕೈ ಮುಖಂಡರು ಡಿಕೆ ಸಹೋದರರಲ್ಲಿ ಮನವಿ ಮಾಡಿದರು.