ರಾಮನಗರದ ಈ ಆಸ್ಪತ್ರೆಗೆ 20 ವೆಂಟಿಲೇಟರ್ ಒದಗಿಸಲು ಡಿಸಿಎಂ ಸೂಚನೆ
ರಾಮನಗರ, ಏಪ್ರಿಲ್ 27: ಕೋವಿಡ್ ಎರಡನೇ ಅಲೆಯಿಂದ ಬಹತೇಕ ಸುರಕ್ಷಿತ ಸ್ಥಿತಿಯಲ್ಲಿರುವ ರಾಮನಗರದಲ್ಲಿ ಸೋಂಕು ಹೆಚ್ಚದಂತೆ ತಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಸೋಮವಾರ ರಾಜರಾಜೇಶ್ವರಿ ಆಸ್ಪತ್ರೆ ಹಾಗೂ ದಯಾನಂದ ಸಾಗರ್ ಮೆಡಿಕಲ್ ಕಾಲೇಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡೂ ಆಸ್ಪತ್ರೆಗಳಲ್ಲಿ ಬೆಡ್ಗಳ ಲಭ್ಯತೆ, ವೆಂಟಿಲೇಟರ್, ಆಮ್ಲಜನಕ, ರೆಮ್ಡೆಸಿವಿರ್ ಬಗ್ಗೆ ತೀವ್ರ ಪರಿಶೀಲನೆ ನಡೆಸಿದ ಸಚಿವರು, ದಯಾನಂದ ಸಾಗರ್ ಆಸ್ಪತ್ರೆ ವೈದ್ಯಾಧಿಕಾರಿಗಳು ಇಪ್ಪತ್ತು ವೆಂಟಿಲೇಟರ್ಗಳ ಅಗತ್ಯವಿದೆ ಎಂದು ಬೇಡಿಕೆ ಇಟ್ಟ ಕೂಡಲೇ ಸ್ಪಂದಿಸಿದ ಡಿಸಿಎಂ, ಕೂಡಲೇ ಅವುಗಳನ್ನು ಒದಗಿಸುವಂತೆ ವೈದ್ಯಕೀಯ ಆಯುಕ್ತರಿಗೆ ಸೂಚಿಸಿದರು.
ರಾಜ್ಯಾದ್ಯಂತ ಇಂದಿನಿಂದ ರಾತ್ರಿಯಿಂದ 14 ದಿನ "ಕೊರೋನಾ ಕರ್ಫ್ಯೂ' ಜಾರಿ ಮಾಡಲಾಗಿದ್ದು, ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅಶ್ವಥ್ ನಾರಾಯಣ, ಮುಂದಿನ 14 ದಿನ ಜನರೇ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಅದಕ್ಕಿಂತ ಉತ್ತಮ ಕೆಲಸ ಬೇರೊಂದಿಲ್ಲ ಎಂದರು.
ಇನ್ನೊಂದೆಡೆ ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ಚುರುಕಾಗಬೇಕು. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತಿದೆ. ಎಲ್ಲೆಲ್ಲಿ ಲಸಿಕೆ ಹಾಕಲಾಗುತ್ತದೆ? ಎಲ್ಲೆಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.