ಗ್ರಾ.ಪಂ. ಚುನಾವಣೆ ಪ್ರಚಾರ: ಡಿಸಿಎಂ ಅಶ್ವಥ್ ನಾರಾಯಣ್ರಿಂದ ನೀತಿ ಸಂಹಿತೆ ಉಲ್ಲಂಘನೆ?
ರಾಮನಗರ, ಡಿಸೆಂಬರ್ 18: ರಾಮನಗರ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಮತ ಕೋರಿಕೆಯ ಪ್ರಚಾರ ನಡೆಸಿದ್ದಕ್ಕಾಗಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮ ಪಂಚಾಯಿತಿ ಚುನಾವಣೆಯು ಸಂಪೂರ್ಣವಾಗಿ ರಾಜಕೀಯ ಪಕ್ಷಗಳಿಂದ ಮುಕ್ತವಾಗಿದ್ದು, ಇಲ್ಲಿ ಪಕ್ಷಗಳ ಭಾಗವಹಿಸುವಿಕೆ, ರಾಜಕೀಯ ನಾಯಕರ ಪ್ರಚಾರ ನಡೆಯುವಂತಿಲ್ಲ. ಆದರೆ ಅಶ್ವಥ್ ನಾರಾಯಣ್ ಅವರು ಶುಕ್ರವಾರ ಕಬ್ಬಾಳ ಮತ್ತು ಸಾತನೂರು ಗ್ರಾಮದಲ್ಲಿ ಪ್ರಚಾರ ನಡೆಸಿದ್ದಾರೆ.
ಅಶ್ವಥ್ ನಾರಾಯಣ್ ಅವರು ಗ್ರಾಮ ಪಂಚಾಯಿತಿ ಚುನಾವಣೆ ನಿಮಿತ್ತ ರಾಮನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶುಕ್ರವಾರ ಪ್ರಚಾರ ನಡೆಸಿದರು ಎಂದು ಸ್ವತಃ ಅವರ ಕಚೇರಿ ತಿಳಿಸಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಪಕ್ಷದ ಮುಖಂಡರಾದ ಎಚ್.ಎಂ.ಕೃಷ್ಣಮೂರ್ತಿ ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್, ಮಂಡಲಾಧ್ಯಕ್ಷ ಧನಂಜಯ ಸೇರಿದಂತೆ ಬಿಜೆಪಿಯ ಜಿಲ್ಲಾ ನಾಯಕರು, ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಕೂಡ ಜತೆಯಲ್ಲಿದ್ದರು. ಮುಂದೆ ಓದಿ.
ಡಿಸಿಎಂ ಪ್ರಚಾರ ಎಲ್ಲೆಲ್ಲಿ?
ಜಿಲ್ಲೆಯ ನಾಯಕರೊಂದಿಗೆ ವಿವಿಧ ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಅವರು ಪ್ರಚಾರ ನಡೆಸಿದರು. ಬಿಡದಿಯ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಗಳಿಗೆ ತೆರಳಿ ಅಭ್ಯರ್ಥಿಗಳ ಸಂವಾದ ನಡೆಸಿ ಶುಭ ಹಾರೈಸಿದರು. ವಂಡರ್ ಲಾ ಗೇಟ್, ಜಡೇನಹಳ್ಳಿ, ಬನ್ನಿಕುಪ್ಪೆ, ತಿಮ್ಮಪ್ಪನ ಪಾಳ್ಯ, ಕರೇನಹಳ್ಳಿ, ಮಂಚನಾಯ್ಕನಹಳ್ಳಿ, ಭೈರಮಂಗಲ, ಕಬ್ಬಾಳು, ಸಾತನೂರು ಮುಂತಾದ ಕಡೆ ಪ್ರಚಾರ ನಡೆಸಿದರು.
Recommended Video
ಹೇಳಿದ್ದನ್ನು ಮಾಡುತ್ತಿರುವ ಸರ್ಕಾರಗಳು
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಮನೆಗೂ ತಲುಪಿಸುವ ಕೆಲಸ ಮಾಡಲಾಗುವುದು. ಬಿಜೆಪಿ ಸರ್ಕಾರ ಕೇವಲ ಮಾತನಾಡುವ ಸರ್ಕಾರವಲ್ಲ. ಹೇಳಿದ್ದನ್ನು ಮಾಡಿ ತೋರಿಸುವ ಸರಕಾರ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಹೇಳಿದ್ದನ್ನು ಮಾಡುತ್ತಿವೆ. ಯೋಜನೆಗಳು ಈಗ ಬರೀ ಕಾಗದದ ಮೇಲೆ ಉಳಿದಿಲ್ಲ ಎಂದರು.
ರಾಜಕೀಯ ನಾಯಕರು ಪಾಲ್ಗೊಳ್ಳುವಂತಿಲ್ಲ
ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ನಾಯಕರು ಯಾವುದೇ ರೀತಿ ಪಾಲ್ಗೊಳ್ಳುವಿಕೆ ಮಾಡುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು. ಆದರೂ ಅಶ್ವಥ್ ನಾರಾಯಣ್ ಅವರು ಪಕ್ಷದ ಜತೆಗೆ ಗುರುತಿಸಿಕೊಂಡಿರುವ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.
ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷರಹಿತ ಚುನಾವಣೆಯಾಗಿದ್ದರೂ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವ, ಸಭೆ ಸಮಾರಂಭಗಳನ್ನು ನಡೆಸುವ ಹಾಗೂ ರಾಜಕೀಯ ನಾಯಕರ ಫೋಟೊಗಳಿರುವ ಕರಪತ್ರ ಹಂಚುವ ಸಾಧ್ಯತೆಗಳಿವೆ. ಆ ಬಗ್ಗೆ ಗಮನ ಹರಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗ ಚುನಾವಣಾ ಆಧಿಕಾರಿಗಳಿಗೆ ಸೂಚನೆ ನೀಡಿತ್ತು.