ಟಿಪ್ಪು ವಿಚಾರ ಪಠ್ಯದಲ್ಲಿರಲೇಬೇಕು ಎಂದ ಅಶ್ವತ್ಥ್ ನಾರಾಯಣ; ಕಾರಣ ಏನು?
ರಾಮನಗರ, ನವೆಂಬರ್ 1: "ಟಿಪ್ಪು ವಿಚಾರ ಪಠ್ಯದಲ್ಲಿರಬೇಕೆಂದು ನಾನು ಒತ್ತಾಯ ಮಾಡುತ್ತೇನೆ" ಎಂದಿದ್ದಾರೆ ಉಪ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್.
ಇಂದು ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಟಿಪ್ಪು ಸುಲ್ತಾನನ ಹೆಸರನ್ನು ಶಾಲಾ ಪಠ್ಯದಿಂದ ತೆಗೆದು ಹಾಕುವ ಪ್ರಸ್ತಾವದ ಕುರಿತು ಮಾತನಾಡಿದ ಅವರು, "ಟಿಪ್ಪು ವಿಚಾರ ಪಠ್ಯದಲ್ಲಿರಬೇಕು. ಆತನ ಕ್ರೌರ್ಯ ಸಮಾಜಕ್ಕೆ ತಿಳಿಯಬೇಕು. ನಾನು ಈ ಬಗ್ಗೆ ಒತ್ತಾಯ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ಟಿಪ್ಪು ಸುಲ್ತಾನ್ ಪಠ್ಯ ರದ್ಧತಿ ಬಗ್ಗೆ ಗೃಹ ಸಚಿವರು ಏನಂದರು?
"ಟಿಪ್ಪು ಬಗ್ಗೆ ಪಠ್ಯಪುಸ್ತಕದಲ್ಲಿ ಇರಬೇಕು. ಆತ ಮತಾಂಧನಾಗಿ ಮಾಡಿರುವ ಕ್ರೌರ್ಯ, ಇತಿಹಾಸದಲ್ಲಿ ಮಾಡಿರುವ ಕೆಲಸ ಜನರಿಗೆ ತಿಳಿಯಬೇಕು. ಪಠ್ಯದಿಂದ ತೆಗೆದರೆ ನಾವು ಮತ್ತೆ ಮತ್ತೆ ಅವರ ಬಗ್ಗೆ ಹೇಳುತ್ತಿರಬೇಕಾಗುತ್ತದೆ. ಹಾಗಾಗಿ ಜನರಿಗೆ ಅವರ ಬಗ್ಗೆ ತಿಳಿಯಬೇಕಾದ್ರೆ ಪಠ್ಯದಲ್ಲಿ ಇರಬೇಕು. ಮತ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಮಾಡಿದವರು ಕಾಂಗ್ರೆಸ್ ನವರು ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಿಸಿದ ಅವರು, "ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ಭಯದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ ಬೆಂಬಲಿಗರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ನಾವು ಯಾವುದೇ ಸಂದರ್ಭದಲ್ಲೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲ್ಲ. ಆದರೆ ನಮ್ಮ ಕಾರ್ಯಕರ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಾವಿದ್ದೇವೆ. ನಮ್ಮ ಸರ್ಕಾರ ಇದ್ದರೂ ಇಲ್ಲಿ ನಮ್ಮ ಕಾರ್ಯಕರ್ತರು ಭಯದಲ್ಲಿದ್ದಾರೆ" ಎಂದರು.