ರಾಮನಗರ ಜನರ ಆಕ್ರೋಶಕ್ಕೆ ತೇಪೆ ಹಚ್ಚಲು ಮುಂದಾದ ಅಶ್ವತ್ಥ ನಾರಾಯಣ್
ರಾಮನಗರ, ಅಕ್ಟೋಬರ್ 10: ರಾಮನಗರ ಜಿಲ್ಲಾ ವ್ಯಾಪ್ತಿಯ ಪಕ್ಕದಲ್ಲೇ ಹಾದು ಹೋಗಿರುವ ನೈಸ್ ರಸ್ತೆ ಪರಿಶೀಲನೆ ನಡೆಸುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್, ತಾವು ಉಸ್ತುವಾರಿ ವಹಿಸಿಕೊಂಡಿರುವ ರಾಮನಗರಕ್ಕೆ ತಿಂಗಳು ಕಳೆದರೂ ತಿರುಗಿ ನೀಡದಿರುವುದು ಜಿಲ್ಲೆಯ ಜನತೆಯಲ್ಲಿ ಬೇಸರ ಮೂಡಿಸಿದೆ.
ಇದೀಗ ಜನರ ಆಕ್ರೋಶ ಗಮಸಿದ ಡಿಸಿಎಂ ಅಶ್ವತ್ಥ ನಾರಾಯಣ್ ಎಚ್ಚೆತ್ತು ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳನ್ನು ಬೆಂಗಳೂರಿನ ತಮ್ಮ ಕಚೇರಿಗೆ ಕರೆಸಿಕೊಂಡು ಜಿಲ್ಲೆಯ ಆಡಳಿತ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಗಳ ಕುರಿತು ಸಭೆ ನಡೆಸಿ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಆದೇಶ ಮಾಡಿದ್ದೇನೆ ಎಂದು ಪ್ರಕಟಣೆ ಹೊರಡಿಸಿ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಸಿಎಂ ಕೊಟ್ಟ ಜಿಲ್ಲೆಗೆ ಉಸ್ತುವಾರಿಯಾಗಿ ಡಿಸಿಎಂ ಕೊಟ್ಟಿದ್ದೇವೆ; ಸಿ.ಟಿ.ರವಿ
ಉಸ್ತುವಾರಿ ಸಚಿವರ ಈ ಪತ್ರಿಕಾ ಪ್ರಕಟಣೆಗೆ ಆಕ್ರೋಶ ವ್ಯಕ್ತಪಡಿಸಿರುವ ಜನರು, ಸಚಿವರು ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಗೆ ಭೇಟಿ ಕೊಡುವುದಿರಲಿ, ಜಿಲ್ಲಾ ಕೇಂದ್ರದಲ್ಲಿ ಕಚೇರಿ ತೆರೆದು, ಅಲ್ಲಿಗೆ ಅಗತ್ಯ ಸಿಬ್ಬಂದಿ ನೇಮಿಸಿ ಜನರ ಕುಂದು ಕೊರತೆ ಆಲಿಸುವ ಕೆಲಸಕ್ಕೆ ಮುಂದಾಗದೆ ಬೆಂಗಳೂರಿನಲ್ಲಿ ಕುಳಿತು ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರನ್ನು ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಮಾಡಿದಾಗ, "ಸಿಎಂ ಕೊಟ್ಟ ಜಿಲ್ಲೆಗೆ ಅಶ್ವತ್ಥ ನಾರಾಯಣ್ ರವರನ್ನು ಡಿಸಿಎಂ ಮಾಡಿ ಉಸ್ತುವಾರಿ ಮಾಡಿದ್ದೇವೆ, ಜಿಲ್ಲೆಯ ಜನರ ಅಪೇಕ್ಷೆಯನ್ನು ಅವರಿಗೆ ತಿಳಿಸುತ್ತೇನೆ" ಎಂದು ಹಾರಿಕೆ ಉತ್ತರ ನೀಡಿದ್ದರು.