ಜೋಡೆತ್ತಿಗೆ ಟಾಂಗ್ ಕೊಟ್ಟರಾ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್?
ರಾಮನಗರ, ಡಿಸೆಂಬರ್.12: ನಾನೂ ಕೂಡ ಈ ಜಿಲ್ಲೆಯವನೆ. ಈ ಜಿಲ್ಲೆಯ ಮನೆ ಮಗನಾಗಲು ಪ್ರಯತ್ನ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಆಶ್ವಥ್ ನಾರಾಯಣ್ ಹೇಳಿದ್ದಾರೆ. ಆ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಹೇಳದೇ ಟಾಂಗ್ ನೀಡಿದರು.
ರಾಮನಗರ ಜಿಲ್ಲೆ ಮಾಗಡಿಯ ಕೋಟೆ ಮೈದಾನದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಡಿಸಿಎಂ, ಜಿಲ್ಲೆಯ ಅಭಿವೃದ್ಧಿ ವಿಚಾರವನ್ನು ನಾವು ಕಡೆಗಣನೆ ಮಾಡುವುದಿಲ್ಲ ಎಂದರು.
ಡಿಕೆಶಿ, ಎಚ್ಡಿಕೆ ಪ್ರಾಬಲ್ಯ ಮುರಿಯಲು ಬಿಎಸ್ ವೈ ಅಸ್ತ್ರ ಪ್ರಯೋಗ
ಈ ಹಿಂದೆ ಅಧಿಕಾರ ನಡೆಸಿದವರಿಗೆ ಜನರು ಅಶೀರ್ವಾದ ಮಾಡಿದ್ದರು. ಇದೀಗ ನಮಗೆ ಅಧಿಕಾರ ಕೊಟ್ಟಿದ್ದಾರೆ ನಾವು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂಗೆ ಟಾಂಗ್ ನೀಡಿದರು.
ಉಪ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಅದಕ್ಕಾಗಿ ಹಾಲಿ ಸಚಿವರ ಸ್ಥಾನ ಬದಲಾಗುತ್ತೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಾ.ಅಶ್ವಥ್ ನಾರಾಯಣ, ರಾಜಕೀಯದಲ್ಲಿ ಯಾವುದು ಸೇಫ್ ಜೋನ್ ಇರೋದಿಲ್ಲ ಎಂದರು. ಮುಖ್ಯಮಂತ್ರಿಗಳು ಯಾವುದೇ ನಿರ್ಣಯ ತಗೆದುಕೊಂಡರೂ, ನಾವು ಅದಕ್ಕೆ ಬದ್ದವಾಗಿರುತ್ತೇವೆ ಎಂದು ಹೇಳಿದರು.
ಇನ್ನು, ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್,ವಿಶ್ವನಾಥ್ ಸೋಲಿಗೆ ಉಸ್ತುವಾರಿ ಹೊತ್ತಿದ್ದ ಸಿ.ಪಿ.ಯೋಗೀಶ್ವರ್ ಕಾರಣ ಎಂದು ಜಿ.ಟಿ.ದೇವೇಗೌಡ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ, ವಿಶ್ವನಾಥ್ ಗೆಲುವಿಗೆ ಯೋಗೀಶ್ವರ್ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಪ್ರಾಮಾಣಿಕವಾಗಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಯೋಗೀಶ್ವರ್, ನಮ್ಮ ನಾಯಕರು ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ದೊರೆಯುತ್ತದೆ ಎಂದು ಹೇಳಿದರು.