ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ಸಚಿವರು ಮತ್ತು ಶಾಸಕರ ರಹಸ್ಯ ಸಭೆ; ಡಿಸಿಎಂ ಸ್ಪಷ್ಟನೆ
ರಾಮನಗರ, ಜುಲೈ 4: "ಸಚಿವರು, ಶಾಸಕರು ಸಭೆ ನಡೆಸಿದರೆ ತಪ್ಪೇನಿದೆ? ಅದರಲ್ಲಿ ಅನುಮಾನ ಪಡುವಂಥದ್ದು ಏನೂ ಇಲ್ಲ" ಎಂದು ಕಂದಾಯ ಸಚಿವರು ಮತ್ತು ಶಾಸಕರು ಮುಳ್ಳಯ್ಯನಗಿರಿ ಬಳಿಯ ರೆಸಾರ್ಟ್ ನಲ್ಲಿ ರಹಸ್ಯ ಸಭೆ ನಡೆಸಿದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ ಡಿಸಿಎಂ ಡಾ.ಅಶ್ವಥ್ ನಾರಾಯಣ್.
ನಿನ್ನೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ ಪರಿಶೀಲನೆಗೆಂದು ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, "ನನಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಸಚಿವರು ಶಾಸಕರು ಕಂದಾಯ ಸಚಿವ ಆರ್.ಅಶೋಕ್ ಅವರ ಹುಟ್ಟುಹಬ್ಬದ ಕಾರಣ ಶುಭ ಕೋರಲು ಒಂದು ಕಡೆ ಸೇರಿದ್ದಾರೆ ಅಷ್ಟೇ. ಮತ್ತೇನಿಲ್ಲ" ಎಂದು ಸ್ಪಷ್ಟಪಡಿಸಿದರು.
ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ಸಚಿವರು, ಶಾಸಕರ ಗುಪ್ತ್-ಗುಪ್ತ್ ಸಭೆ
ಮಾಜಿ ಡಿಸಿಎಂ ಅಶೋಕ್ ರವರು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು. ಹಾಗಾಗಿ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಿದ್ದರು. ಅಲ್ಲಿ ಅವರ ಸ್ನೇಹಿತರು, ಹಿತೈಷಿಗಳು, ಸಹೋದ್ಯೋಗಿಗಳು ಸಚಿವರಿಗೆ ಶುಭಕೋರಿ ಆತ್ಮೀಯತೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಅನುಮಾನ ಪಡುವಂಥದ್ದು ಏನೂ ಇಲ್ಲ" ಎಂದರು.