ಎಚ್ ಡಿಕೆ, ಡಿಕೆಶಿಗೆ ಮಾಗಡಿಯಲ್ಲಿ ಟಾಂಗ್ ಕೊಟ್ಟ ಡಿಸಿಎಂ
ಮಾಗಡಿ (ರಾಮನಗರ), ಅಕ್ಟೋಬರ್ 20: "ರಾಮನಗರ ನನ್ನ ಜಿಲ್ಲೆ, ಭಾವನಾತ್ಮಕವಾಗಿ ನನಗೆ ಸಂಬಂಧವಿದೆ. ನಾನು ಹೊರಗಿನಿಂದ ಬಂದವನಲ್ಲ. ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಬಂದವರಲ್ಲ ನಾವು. ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಜಿಲ್ಲೆಯಲ್ಲಿ ಸದ್ಯದಲ್ಲೇ ನನ್ನ ಕಚೇರಿ ಪ್ರಾರಂಭವಾಗಲಿದೆ" ಎಂದು ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥನಾರಾಯಣ್ ಭಾನುವಾರ ಹೇಳಿದರು.
ಮಾಗಡಿಯ ಕೆಂಪಾಪುರದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.
ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಆದ ವಿಚಾರದ ಬಗ್ಗೆ ಮಾತನಾಡಿ, ನಮಗೆ ಅಧಿಕಾರ ಇದೆ ಅಂತ ಏನೇನೋ ಮಾಡುವುದಕ್ಕೆ ಆಗಲ್ಲ. ಶಕ್ತಿ ಇದೆ ಅಂತ ಎಲ್ಲವನ್ನೂ ನಮ್ಮ ಮನೆಗೆ ಎತ್ತಿಕೊಂಡು ಹೋಗೋಕೆ ಅಗುತ್ತೇನ್ರಿ? ಅಧಿಕಾರ ಯಾವುತ್ತೂ ಬಳಕೆಯಾಗಬೇಕು, ದುರ್ಬಳಕೆ ಆಗಬಾರದು. ರಾಮನಗರದಲ್ಲಿ ಅವರು ಏನು ಮಾಡಿಲ್ಲ, ಅದನ್ನು ನಾವು ಮಾಡ್ತೀವಿ ಎಂದು ಹೇಳಿದರು.
ಸಾವರ್ಕರ್ ಗೆ ಭಾರತ ರತ್ನ ಕೊಡುವ ವಿಚಾರವನ್ನು ಪ್ರಸ್ತಾಪಿಸಿದ ಅವರು, ಅವರು ಯಾವ ರೀತಿಯ ದೇಶ ಭಕ್ತರು ಅಂತ ಗೊತ್ತಿದೆ. ಆದರೆ ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಅವಹೇಳನ ಮಾಡೋದು ಯಾರಿಗೂ ಗೌರವ ತರಲ್ಲ. ಸಿದ್ದರಾಮಯ್ಯನವರು ಈ ರೀತಿ ಮಾತನಾಡೋದು ಅವರ ಸ್ಥಾನಕ್ಕೂ ಗೌರವ ತರಲ್ಲ. ಜನ ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ. ಕಣ್ಣಿಗೆ ಕಾಣದ ರೀತಿ ಆಗುವ ಮುನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದರು.
ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳ ಕೆಂಪಾಪುರ ಗ್ರಾಮಕ್ಕೆ ತೆರಳಿದ ನಂತರ ಹುಟ್ಟೂರು ಚಿಕ್ಕಕಲ್ಯಾ ಗ್ರಾಮಕ್ಕೆ ಕೂಡ ಭೇಟಿ ನೀಡಿದರು. ಕೆಂಪಾಪುರ ಗ್ರಾಮದಲ್ಲಿರುವ ಮಾಗಡಿ ಕೆಂಪೇಗೌಡರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಇಲ್ಲಿಯವರೆಗೂ ಅಧಿಕಾರ ನಡೆಸಿದ ಸರ್ಕಾರಗಳು ಯಾವುದೇ ಯೊಜನೆ ಮಾಡಿಲ್ಲ. ಕೆಂಪೇಗೌಡರ ಸಮಾಧಿ ಸ್ಥಳದ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರು ಮಾಡುತ್ತಿದ್ದೇವೆ ಎಂದು ಹೇಳಿದರು.
ಐಡೆಕ್ ಹೆಸರಿನ ಸಂಸ್ಥೆಗೆ ಈ ಯೋಜನೆಯನ್ನು ಒಪ್ಪಿಸಲಾಗುತ್ತದೆ. ಇದಕ್ಕಾಗಿ 150 ಕೋಟಿ ಕೂಡ ಮಂಜೂರಾಗಿದೆ. ಇಡೀ ನಾಡು ನೋಡುವ ರೀತಿಯಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಅಶ್ವಥನಾರಾಯಣ್ ತಿಳಿಸಿದರು.