ರಾಮನಗರಕ್ಕೆ 4000 ರ್ಯಾಪಿಡ್ ಆ್ಯಂಟಿಜೆನ್ ಕಿಟ್; 24x7 ಪರೀಕ್ಷೆ
ರಾಮನಗರ, ಜುಲೈ 25: ಪ್ರಾರಂಭದಲ್ಲೇ ಕೊರೊನಾ ಸೋಂಕನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯ ಜನರ ಜೀವವನ್ನು ಉಳಿಸಲು ಹೆಚ್ಚು ಹೆಚ್ಚು ಕೋವಿಡ್-19 ಟೆಸ್ಟ್ ನಡೆಸುವಂತೆ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಜಿಲ್ಲಾಡಳಿತಕ್ಕೆ ತಾಕೀತು ಮಾಡಿದ್ದಾರೆ.
Recommended Video
ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಿನ್ನೆ ಜಿಲ್ಲಾಡಳಿತದೊಂದಿಗೆ ಸಂವಾದ ನಡೆಸಿರುವ ಡಿಸಿಎಂ ಅಶ್ವಥ್ ನಾರಾಯಣ್ ಅವರು, ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಅಧಿಕ ಸಂಖ್ಯೆಯಲ್ಲಿ ಕೋವಿಡ್-19 ಪರೀಕ್ಷೆಗಳನ್ನು ನಡೆಸಿ, ಆದಷ್ಟು ಬೇಗ ಪರೀಕ್ಷಾ ಫಲಿತಾಂಶವನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 780 ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗಿದೆ.
ಚನ್ನಪಟ್ಟಣದಲ್ಲಿ 500 ಜನರ ಚಿಕಿತ್ಸೆಗೆ ವ್ಯವಸ್ಥೆ: ಡಿಸಿಎಂ ಅಶ್ವಥ್ ನಾರಾಯಣ್
ರಾಜ್ಯ ಸರ್ಕಾರದಿಂದ ಇದುವರೆಗೆ 4000 ಆ್ಯಂಟಿಜೆನ್ ಪರೀಕ್ಷಾ ಕಿಟ್ಗಳನ್ನು ನೀಡಲಾಗಿದೆ. ದಿನದ 24 ಗಂಟೆಗಳ ಕಾಲವೂ ಕೋವಿಡ್-19 ಟೆಸ್ಟ್ ನಡೆಸಲು ಸಿದ್ಧವಾಗಿರಬೇಕು. ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಟಿಜೆನ್ ಕಿಟ್ಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಉಪಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಟ್ರೂನಾಟ್ ಪರೀಕ್ಷೆ
ಜಿಲ್ಲೆಯಲ್ಲಿ ಆರಂಭಿಸಿರುವ ಕೋವಿಡ್-19 ಪರೀಕ್ಷಾ ಪ್ರಯೋಗಾಲಯದಲ್ಲಿ ನಾಲ್ಕು ಟ್ರೂನಾಟ್ ಪರೀಕ್ಷಾ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಪ್ರತಿದಿನ 80ಕ್ಕೂ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ನಡೆಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಶ್ವಥ್ ನಾರಾಯಣ್ ಅವರಿಗೆ ಮಾಹಿತಿ ನೀಡಿದರು. ಪ್ರಯೋಗಾಲಯದ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿ ಇನ್ನಷ್ಟು ಫಲಿತಾಂಶಗಳು ಆಯಾ ದಿನವೇ ದೊರಕುವಂತೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ತಕ್ಷಣವೇ ಅವರನ್ನು ಐಸೊಲೇಷನ್ ನಲ್ಲಿ ಇರಿಸಿ, ಉತ್ತಮ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಸಿಬ್ಬಂದಿ ಭರ್ತಿಗೆ ಕ್ರಮ
ಜಿಲ್ಲೆಯಲ್ಲಿ ಕೊರತೆಯಿರುವ ಪ್ರಯೋಗಾಲಯ ಪರೀಕ್ಷಕರು ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಆದ್ಯತೆ ಮೇರೆಗೆ ಭರ್ತಿ ಮಾಡಿಕೊಳ್ಳುವ ಮೂಲಕ ಉತ್ತಮ ರೀತಿಯ ಚಿಕಿತ್ಸೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಡಿಸಿಎಂ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಕೊರೊನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ; ಡಿಸಿಎಂ ಅಶ್ವಥ್ ನಾರಾಯಣ್
ಆಕ್ಸಿಜನ್ ಗೆ ವ್ಯವಸ್ಥೆ
ಪ್ರತಿ ತಾಲೂಕಿನಲ್ಲಿ ಇರುವ ಆಸ್ಪತ್ರೆಗಳಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡಿಕೊಳ್ಳಬೇಕು. ಅಗತ್ಯ ಸಂದರ್ಭದಲ್ಲಿ ಜೀವ ರಕ್ಷಕದಂತೆ ಇದು ಕೋವಿಡ್ ರೋಗಿಗಳಿಗೆ ನೆರವಾಗಲಿದೆ. ಹೀಗಾಗಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ತಿಳಿಸಿದರು.
4 ಆಂಬುಲೆನ್ಸ್ ಗಳ ಖರೀದಿ
ನಿರ್ಮಿತಿ ಕೇಂದ್ರದ ವತಿಯಿಂದ ಈಗಾಗಲೇ 4 ಆಂಬುಲೆನ್ಸ್ಗಳನ್ನು ಖರೀದಿಸಲಾಗಿದೆ. ಇನ್ನು ಒಂದು ವಾರದ ಒಳಗೆ ಇವುಗಳು ಬಳಕೆಗೆ ಲಭ್ಯವಾಗಲಿವೆ. ಹಾಗೆಯೇ, ಟೆಂಪೋ ಟ್ರಾವಲರ್ ಗಳನ್ನು ಆಂಬ್ಯುಲೆನ್ಸ್ಗಳಾಗಿ ಪರಿವರ್ತಿಸಿ ಅವುಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ಟ್ರಾವೆಲ್ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.