ರಾಮನಗರ: 3ನೇ ಹಂತದ ಕೋವಿಡ್-19 ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ
ರಾಮನಗರ, ಮಾರ್ಚ್ 1: "ರಾಮನಗರ ಜಿಲ್ಲೆಯಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದಿನಿಂದ ಆರಂಭಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ'' ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಕರೆ ನೀಡಿದರು.
ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ""45 ವರ್ಷ ಮೇಲ್ಪಟ್ಟವರು ಹಾಗೂ 59 ವರ್ಷದೊಳಗಿನವರು ಕೊಮೊರ್ಬಿಡಿಟಿ ಕಾಯಿಲೆಯಿಂದ ಬಳಲುತ್ತಿದ್ದರೂ ಸಹ, ಆರ್.ಎಂ.ಪಿ ವೈದ್ಯರಿಂದ ಕಾಯಿಲೆ ಇರುವ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಿ ಲಸಿಕೆ ಪಡೆಯಲು ಹೆಸರು ನೊಂದಾಯಿಸಿಕೊಳ್ಳಬಹುದು'' ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೈಸೂರು; ಕೋವಿಡ್ ಲಸಿಕೆ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿ
ಲಸಿಕೆ ದೊರೆಯುವ ಸ್ಥಳಗಳು
"ಸಾರ್ವಜನಿಕ ರಜೆ ದಿನ ಹೊರತುಪಡಿಸಿ ರಾಮನಗರ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಹೆಸರು ನೊಂದಾಯಿಸಿಕೊಂಡು ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳಾದ ರಾಮಕೃಷ್ಣ ಆಸ್ಪತ್ರೆ ಹಾಗೂ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಪ್ರತಿ ಡೋಸ್ ಗೆ 250 ರೂ. ಪಾವತಿಸಿ ಲಸಿಕೆ ಪಡೆಯಬಹುದಾಗಿದೆ'' ಎಂದರು.
ನೋಂದಣಿ ವಿಧಾನ
"ಆರೋಗ್ಯ ಸೇತು ಆ್ಯಪ್ ಹಾಗೂ https://selfregistration.cowin.gov.in/ ವೆಬ್ ವಿಳಾಸದಲ್ಲಿ ಮೊಬೈಲ್ ಸಂಖ್ಯೆ ಹಾಗೂ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್ ಇನ್ನಿತರ ಭಾವಚಿತ್ರವಿರುವ ಗುರುತಿನ ಚೀಟಿ ಸಲ್ಲಿಸಿ ತಮಗೆ ಹತ್ತಿರವಿರುವ ಲಸಿಕಾ ಕೇಂದ್ರವನ್ನು ಸಹ ಆಯ್ಕೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು. ಆನ್ ಸ್ಪಾಟ್ ನೋಂದಣಿಗೂ ಸಹ ಅವಕಾಶ ಮಾಡಿಕೊಡಲಾಗಿದೆ. ಲಸಿಕೆ ಕೇಂದ್ರಗಳಿಗೆ ದಾಖಲೆಗಳನ್ನು ನೀಡಿ ಸ್ಥಳದಲ್ಲೇ ನೋಂದಣಿ ಸಹ ಮಾಡಿಕೊಂಡು ಲಸಿಕೆ ಪಡೆಯಬಹುದಾಗಿದೆ'' ಎಂದರು.
"ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. 3ನೇ ಹಂತದಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಲಸಿಕೆ ಪಡೆದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು'' ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಜನತೆಗೆ ಕರೆ ನೀಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಹಾಗೂ ಆರ್.ಸಿ.ಎಚ್ ಅಧಿಕಾರಿ ಡಾ.ಪದ್ಮ ಅವರು ಉಪಸ್ಥಿತರಿದ್ದರು.