ಪಿಪಿಇ ಕಿಟ್ ಧರಿಸಿ ಆಸ್ಪತ್ರೆ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್
ರಾಮನಗರ, ಏಪ್ರಿಲ್ 23: ಜಿಲ್ಲೆಯ ಕಂದಾಯ ಭವನದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸಿ ಕೊರೋನಾ ಸೋಂಕಿತರು ಪ್ರತಿಭಟನೆ ನಡೆಸಿದ ಬೆನ್ನಲೇ ಇಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ರವರು ಸ್ವತಃ ತಾವೇ ಪಿಪಿಇ ಕಿಟ್ ಧರಿಸಿ, ಸಿಇಓ ಇಕ್ರಂ ಅವರೊಂದಿಗೆ ಕೋವಿಡ್ ಆಸ್ವತ್ರೆಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.
ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಎಲ್ಲಾ ಮೂಲಭೂತ ವ್ಯವಸ್ಥೆಗಳು ಹಾಗೂ ಔಷಧೋಪಚಾರ ಸುವ್ಯವಸ್ಥಿತವಾಗಿ ದೊರೆಯಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್.ಕೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿಗಳು ಹಾಗೂ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೀರಿನ ವ್ಯವಸ್ಥೆ, ಸ್ವಚ್ಛತೆ, ಔಷಧಿಯ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆಯನ್ನು ಪರಿಶೀಲಿಸಿಲನೆ ನಡೆಸಿ ನಂತರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಕೋವಿಡ್ ರೋಗಿಗಳಿಗೆ ಭಯ ಬೇಡ, ವೈದ್ಯರು ತಿಳಿಸುವ ರೀತಿ ಔಷಧಿಗಳನ್ನು ಪಡೆಯಿರಿ ಶೀಘ್ರವಾಗಿ ಗುಣಮುಖರಾಗುತ್ತೀರಿ ಸ್ಥೈರ್ಯ ತುಂಬಿದರು.
ಕಂದಾಯ ಭವನದ ಕೋವಿಡ್ ಆಸ್ಪತ್ರೆಯಲ್ಲಿ ನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಜನರೇಟರ್ ವ್ಯವಸ್ಥೆ, ಸಿಸಿ ಕ್ಯಮರಾ, ಶೌಚಾಲಯ ವ್ಯವಸ್ಥೆ ಸೇರಿದಂತೆ ವೈದ್ಯಕೀಯೇತರ ವ್ಯವಸ್ಥೆಗಳನ್ನು ನೋಡಿಕೊಳ್ಳಲು ನಿರ್ಮಿತಿ ಕೇಂದ್ರ ದ ಯೋಜನ ವ್ಯವಸ್ಥಾಪಕ ಗೋವಿಂದ್ ರಾಜು ಅವರನ್ನು ನೋಡಲ್ ಅಧಿಕಾರಿಯಾಗಿ ಮತ್ತು ನಗರಸಭೆ ಪೌರಾಯುಕ್ತ ನಂದ ಕುಮಾರ್ ಅವರನ್ನು ಸಮನ್ವಯ ಅಧಿಕಾರಿಯಾಗಿ ಜಿಲ್ಲಾಧಿಕಾರಿಗಳು ಡಾ.ಕೆ.ರಾಕೇಶ್ ಕುಮಾರ್ ನೇಮಕ ಮಾಡಿದರು.
ವೈದ್ಯರೊಂದಿಗೆ ಚರ್ಚೆ ನಡೆಸಿದ ಡಿಸಿ ಡಾ.ಕೆ.ರಾಕೇಶ್ ಕುಮಾರ್ ಮತ್ತು ಸಿಇಓ ಇಕ್ರಂ ಚಿಕಿತ್ಸೆಗೆ ಸಂಬಂಧಿಸದಂತೆ ಯಾವುದೇ ರೀತಿ ತೊಂದರೆ ಇದ್ದಲ್ಲಿ ತಕ್ಷಣವೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದರು. ಪರಿಶೀಲನೆಯ ಸಂದರ್ಭದಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ ಪದ್ಮ, ಕೋವಿಡ್ ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.
ರಾಮನಗರದಲ್ಲಿ 217 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ರಾಮನಗರ 48, ಚನ್ನಪಟ್ಟಣ 75, ಕನಕಪುರ 87, ಮಾಗಡಿ 07 ಜನರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯೆ ಪ್ರಕರಣಗಳ ಸಂಖ್ಯೆ 937 ಆಗಿದೆ. ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 84, ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9357 ಆಗಿದೆ.