ಸಿಎಂ ಕೊಟ್ಟ ಜಿಲ್ಲೆಗೆ ಉಸ್ತುವಾರಿಯಾಗಿ ಡಿಸಿಎಂ ಕೊಟ್ಟಿದ್ದೇವೆ; ಸಿ.ಟಿ.ರವಿ
ರಾಮನಗರ, ಅಕ್ಟೋಬರ್ 9: "ನಾಡಿಗೆ ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆಗೆ, ನಾವು ಉಪ ಮುಖ್ಯಮಂತ್ರಿಗಳನ್ನು ಉಸ್ತುವಾರಿಯಾಗಿ ಮಾಡಿದ್ದೇವೆ" ಎಂದರು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ.
ರಾಮನಗರದ ಜಾನಪದ ಲೋಕದಲ್ಲಿ ಸಿರಿ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಯೋಜನೆಗೊಂಡ ಡಿಸಿಎಂ ಅಶ್ವಥ್ ನಾರಾಯಣ್ ರಾಮನಗರ ಜಿಲ್ಲೆಗೆ ಒಂದು ಬಾರಿಯೂ ಭೇಟಿ ಕೊಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಅಶ್ವಥ್ ನಾರಾಯಣ್ ನನಗೆ ಮಿತ್ರರು, ಇವತ್ತು ಸಿಗುತ್ತಾರೆ. ವೈಯಕ್ತಿಕವಾಗಿ ಮಾತನಾಡುತ್ತೇನೆ. ಕೆಲಸದ ಒತ್ತಡದಿಂದ ಬರದಿರಬಹುದು. ಆದರೆ ಜಿಲ್ಲೆಯ ಜನರ ಅಪೇಕ್ಷೆಯನ್ನು ಅವರಿಗೆ ತಿಳಿಸುತ್ತೇನೆ" ಎಂದು ಹೇಳಿದರು.
"ನಾವು 5 ಲಕ್ಷ ನೆರೆ ಪರಿಹಾರ ಕೊಡುತ್ತಿದ್ದೇವೆ, ಅದೇ ತಪ್ಪಾ ನಮ್ಮದು?"
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಪಕ್ಷ ಸೇರುವ ವಿಚಾರವಾಗಿ ಮಾತನಾಡಿದ ಅವರು, "ಈ ವಿಷಯವನ್ನು ನಾನು ಮಾಧ್ಯಮಗಳಲ್ಲೇ ನೋಡಿರುವುದು. ಅವರು ಬಿಜೆಪಿ ಪಕ್ಷ ಸೇರುವ ವಿಚಾರ ನನಗೆ ಗೊತ್ತಿಲ್ಲ. ಅವರು ಬಿಜೆಪಿ ಪಕ್ಷಕ್ಕೆ ಬರೋದಾದರೆ ಸ್ವಾಗತಿಸುತ್ತೇವೆ. ನಾವು ಯಾರನ್ನೂ ದೂರ ತಳ್ಳುವ ಪ್ರಶ್ನೆ ಇಲ್ಲ. ಬಿಜೆಪಿಗೆ ಸಿದ್ದರಾಮಯ್ಯ, ದೇವೇಗೌಡರು ಬಂದರೂ ಸ್ವಾಗತ ಮಾಡ್ತೇವೆ" ಎಂದರು.
ಇನ್ನು ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, "ಪಕ್ಷದ ವಿಚಾರವನ್ನು ಅವರಂತೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ. ಎಲ್ಲವನ್ನು ಅವರೇ ಸೃಷ್ಟಿಸಿಕೊಂಡು ಮಾತನಾಡಿದ್ದಾರೆ. ಯಡಿಯೂರಪ್ಪನವರಿಗೆ ಅಪಮಾನ ಮಾಡುವಂಥ ಕೆಲಸ ಯಾರೂ ಮಾಡಿಲ್ಲ, ಯತ್ನಾಳ ಈ ರೀತಿ ಮಾತನಾಡುವ ಮೂಲಕ ಅಪಮಾನ ಮಾಡಿದ್ದಾರೆ" ಎಂದರು.