ಸಿ.ಪಿ ಯೋಗೇಶ್ವರ್ ಎಂಎಲ್ಸಿ ಆಗಬೇಕು: ಡಿಸಿಎಂ ಅಶ್ವಥ್ ನಾರಾಯಣ್
ರಾಮನಗರ, ಜೂನ್ 1: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ವಿಧಾನ ಪರಿಷತ್ ಸದಸ್ಯರಾಗಬೇಕು, ಪಕ್ಷದಲ್ಲಿ ಅವರು ಹೆಸರು ಚಾಲ್ತಿಯಲ್ಲಿರುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ತಿಳಿಸಿದರು.
ರಾಮನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡಿಸಿ ಮಾತನಾಡಿದ ಡಿಸಿಎಂ ಡಾ.ಅಶ್ವಥ್ ನಾರಾಯಣ್, ಸಿಪಿವೈ ಹೆಸರು ರಾಜ್ಯಮಟ್ಟದಲ್ಲಿ ಚಾಲ್ತಿಯಲ್ಲಿದೆ, ಪಕ್ಷದ ವರಿಷ್ಠರು ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ, ಜಿಲ್ಲಾ ಮಟ್ಟದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಹೇಳಿದರು.
ರಾಮನಗರದ 'ಹೆಲ್ತ್ ಸಿಟಿ' ಕಾರ್ಯ ಈ ವರ್ಷವೇ ಆರಂಭ: ಡಿಸಿಎಂ ಅಶ್ವತ್ಥನಾರಾಯಣ
ಯೋಗೀಶ್ವರ್ ಎಂ.ಎಲ್.ಸಿ ಆಗಲಿ ಎಂಬುದೇ ನನ್ನ ಹಾಗೂ ಜಿಲ್ಲೆಯ ಎಲ್ಲಾ ನಾಯಕರ ಆಸೆಯಾಗಿದೆ. ಇದಕ್ಕೆ ಯಾರೂ ಕೂಡ ವಿರೋಧ ವ್ಯಕ್ತಪಡಿಸುವುದಿಲ್ಲ, ಸ್ವತಃ ಎಂಎಲ್ಸಿ ಸ್ಥಾನದ ಆಕಾಂಕ್ಷಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಕೂಡಾ ಒಪ್ಪುತ್ತಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ಎಂ.ಎಲ್.ಸಿ ಸ್ಥಾನಕ್ಕೆ ಎಲ್ಲರೂ ಕೂಡಾ ಆಕಾಂಕ್ಷಿಗಳೇ
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ಎಂ.ಎಲ್.ಸಿ ಸ್ಥಾನಕ್ಕೆ ಯಾರು ತಾನೇ ಆಕಾಂಕ್ಷಿಯಾಗಲ್ಲಾ, ಎಲ್ಲರೂ ಕೂಡಾ ಆಕಾಂಕ್ಷಿಗಳೇ ಎನ್ನುವ ಮೂಲಕ ತಾನೂ ಎಂ.ಎಲ್.ಸಿ ಸ್ಥಾನದ ಆಕಾಂಕ್ಷಿ ಎಂಬ ಆಸೆಯನ್ನು ರುದ್ರೇಶ್ ಬಹಿರಂಗ ಪಡಿಸಿದರು.
ವರಿಷ್ಠರು ಏನ್ ತೀರ್ಮಾನ ಮಾಡುತ್ತಾರೆ ನೋಡೋಣ
ಆದರೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ, ಜಿಲ್ಲೆಯ ಕಾರ್ಯಕರ್ತರು ಸಭೆಗಳನ್ನು ಮಾಡಿ ವರಿಷ್ಠರ ಮುಂದೆ ರುದ್ರೇಶ್ ಅವರಿಗೆ ಎಂ.ಎಲ್.ಸಿ ನೀಡಿ ಅಂತಾ ಒತ್ತಾಯ ಮಾಡುತ್ತಿದ್ದಾರೆ, ವರಿಷ್ಠರು ಏನ್ ತೀರ್ಮಾನ ಮಾಡುತ್ತಾರೆ ನೋಡೋಣ ಎನ್ನುವ ಮೂಲಕ ಎಂ.ಎಲ್.ಸಿ ರೇಸ್ ನಲ್ಲಿ ಇರುವ ಸಿ.ಪಿ ಯೋಗೀಶ್ವರ್ ಗೆ ಪರೋಕ್ಷ ಸವಾಲು ಹಾಕಿದರು.
ಉಪನ್ಯಾಸಕರ ವರ್ಗಾವಣೆಗೆ ಶೀಘ್ರ ಹೊಸ ನಿಯಮ ಜಾರಿ: ಅಶ್ವತ್ಥನಾರಾಯಣ
ಬೆಳಕು ನೀಡುತ್ತಿರುವುದು ಬಿಜೆಪಿ ಪಕ್ಷ
ಕೇಂದ್ರ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ದಿನವನ್ನು ಕರಾಳ ದಿನ ಎಂದು ಸಂಸದ ಡಿ.ಕೆ ಸುರೇಶ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್, ಕೆಲವರು ಕರಾಳವಾಗಿಯೇ ಬದುಕಿದ್ದಾರೆ, ಅವರ ಪಕ್ಷ ಕೂಡ ಕರಾಳವಾಗಿ ಬಿಟ್ಟಿದೆ ಎನ್ನುವ ಮೂಲಕ ಸಂಸದ ಡಿ.ಕೆ ಸುರೇಶ್ ಹೆಸರೇಳದೆ ಟಾಂಗ್ ನೀಡಿದರು. ಅಂತವರಿಗೆ ಪ್ರಗತಿ, ಬೆಳಕು ನೀಡುತ್ತಿರುವುದು ಬಿಜೆಪಿ ಪಕ್ಷ ಅಂತಾ ತಿಳಿಸಿದರು.
ರಾಮನಗರ ಜಿಲ್ಲೆಯ ಅಭಿವೃದ್ಧಿಗಾಗಿ ಬರುತ್ತಿದ್ದೇನೆ
ಡಿಕೆ ಸಹೋದರರು ಜಿಲ್ಲೆಯಲ್ಲಿ ಇದ್ದಾರೆ, ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಅಂತಾ ನಾನು ರಾಮನಗರ ಜಿಲ್ಲೆಗೆ ಬರುತ್ತಿಲ್ಲ. ಜಿಲ್ಲೆಯ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ ಹಾಗಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಬರುತ್ತಿದ್ದೇನೆ. ದೊಡ್ಡವರು ದೊಡ್ಡ ದೊಡ್ಡ ಕನಸು ಕಾಣುತ್ತಾರೆ. ಅವರು ದೊಡ್ಡ ಕನಸುಗಳನ್ನೇ ಕಾಣಲಿ ಎಂದು ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಡಿಸಿಎಂ ಅಶ್ವಥ್ ನಾರಾಯಣ್ ಮಾತಿನ ಮೂಲಕ ಕುಟುಕಿದರು.