ಹಳ್ಳಿಹಕ್ಕಿ ಮಾತಿಗೆ ತಿರುಗೇಟು ನೀಡಿದ ಸಿ.ಪಿ.ಯೋಗೇಶ್ವರ್
ರಾಮನಗರ, ಡಿಸೆಂಬರ್ 1: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ನೀಡುವುದು ಖಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ ಬೆನ್ನಲೇ, ಹಳ್ಳಿಹಕ್ಕಿ ಎಚ್.ವಿಶ್ವನಾಥ್ ವಿರುದ್ಧ ಸೈನಿಕ ಟಾಂಗ್ ಕೊಟ್ಟಿದ್ದಾರೆ.
ತಮ್ಮ ವಿರುದ್ಧ ಈ ಹಿಂದೆ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್ ವಿರುದ್ಧ ರಾಮನಗರದಲ್ಲಿ ಮಂಗಳವಾರ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ತಿರುಗೇಟು ನೀಡಿದರು.
ಎಚ್.ವಿಶ್ವನಾಥ್ ಅನರ್ಹ ವಿಚಾರ: ರಮೇಶ್ ಜಾರಕಿಹೊಳಿ ಮಹತ್ವದ ಹೇಳಿಕೆ
ರಾಮನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ವೇಳೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ""ಮನುಷ್ಯನಿಗೆ ಕೆಲವೊಮ್ಮೆ ಬುದ್ಧಿ ಕಂಟ್ರೋಲ್ ಇರಲ್ಲ, ಅವರಿಗೆ ಅಂತಿಮ ದಿನಗಳಲ್ಲಿ ಮಂತ್ರಿಯಾಗುವ ಆಸೆ ಇತ್ತು, ಹಾಗಾಗಿ ಹತಾಶರಾಗಿದ್ದಾರೆ'' ಎಂದು ಎಚ್.ವಿಶ್ವನಾಥ್ ಅವರನ್ನು ಲೇವಡಿ ಮಾಡಿದರು.
ಎಚ್.ವಿಶ್ವನಾಥ್ ರವರು ಹಿರಿಯರಿದ್ದಾರೆ, ನ್ಯಾಯಾಲಯದಲ್ಲಿ ಅವರ ವಿರುದ್ಧ ವಿರುದ್ಧ ತೀರ್ಪು ಬಂದಿದೆ. ನಾವು ಅವರ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ನಿಲ್ಲುತ್ತೇವೆ, ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಇನ್ನು ಇದೇ ಸಂದರ್ಭದಲ್ಲಿ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅವರ ಬಿಜೆಪಿ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಕೆಲವರು ಅವರವರ ಅಭಿಪ್ರಾಯ ಹೇಳುತ್ತಾರೆ. ಅವರು ಹಿರಿಯರು, ಬೇರೆಯವರಿಗೆ ಅವಕಾಶ ಬೇಕಿದೆ, ಹಾಗಾಗಿ ಇವರಿಗೆ ತಪ್ಪಿಸಲು ನೋಡ್ತಾರೆ. ಆದರೆ ಪಕ್ಷ ಹಾಗೂ ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಮಾಡ್ತಾರೆ ಎಂದು ಸಿ.ಪಿ.ಯೋಗೇಶ್ವರ್ ಪರವಾಗಿ ಡಿಸಿಎಂ ಬ್ಯಾಟಿಂಗ್ ಮಾಡಿದರು.