ಹೆಚ್. ಸಿ. ಬಾಲಕೃಷ್ಣರನ್ನು ಬಿಜೆಪಿಗೆ ಆಹ್ವಾನಿಸಿದ ಸಿ. ಪಿ. ಯೋಗೀಶ್ವರ್!
ರಾಮನಗರ, ಮೇ 27: ನನಗೆ ವಿಧಾನ ಸಭೆ ಚುನಾವಣೆಯ ಟಿಕೆಟ್ ಬೇಡ ಮಾಜಿ ಸಚಿವ ಹೆಚ್. ಎಂ. ರೇವಣ್ಣರಿಗೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ಮಾಗಡಿಯ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಹೆಚ್. ಸಿ. ಬಾಲಕೃಷ್ಣ ಪತ್ರ ಬರೆದಿದ್ದರು. ಈಗ ಬಾಲಕೃಷ್ಣ ಬಿಜೆಪಿಗೆ ಬಂದರೆ ಸ್ವಾಗತಿಸುವುದಾಗಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಹೇಳಿದರು.
ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಯದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರಾಮನಗರ ಜಿಲ್ಲೆಯಲ್ಲಿ ಹೆಚ್. ಸಿ. ಬಾಲಕೃಷ್ಣ ಪ್ರಥಮ ಬಾರಿಗೆ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ದಿನಗಳಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು" ಎಂದರು.
ಮಾಗಡಿ ತಾಲ್ಲೂಕಿನ ಸಾವನದುರ್ಗದಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರೇವಣ್ಣ, ಜೆಡಿಎಸ್ ಶಾಸಕ ಎ. ಮಂಜುನಾಥ್ರನ್ನು ಹೊಗಳಿದ್ದರು. ಇದಕ್ಕೆ ಬಾಲಕೃಷ್ಣ ಮತ್ತು ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರು.
ಮಾಗಡಿ ಕಾಂಗ್ರೆಸ್ನಲ್ಲಿ ಭಿನ್ನಮತ; ಡಿಕೆಶಿಗೆ ಬಾಲಕೃಷ್ಣ ಪತ್ರ
ಕಳೆದ 25 ವರ್ಷದಿಂದ ನನ್ನ ಹಾಗೂ ರೇವಣ್ಣ ನಡುವೆ ರಾಜಕೀಯ ಜಿದ್ದಾಜಿದ್ದಿ ಇತ್ತು. ನಾನು ಕಾಂಗ್ರೆಸ್ ಸೇರಿದ ಬಳಿಕವೂ ಅವರು ನನ್ನನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡುವಂತೆ ತಮ್ಮ ಕೆಲವು ಬೆಂಬಲಿಗರಿಗೆ ಕರೆ ಕೊಟ್ಟಿದ್ದರು ಎಂದು ಬಾಲಕೃಷ್ಣ ಕೆಪಿಸಿಸಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.
ಬಿಜೆಪಿಗೆ ಬರುವಂತೆ ಹಿಂದೆಯೇ ಆಹ್ವಾನ
"ಮಾಗಡಿ ಮಾಜಿ ಶಾಸಕ ಹೆಚ್. ಸಿ. ಬಾಲಕೃಷ್ಣರನ್ನು ಬಿಜೆಪಿಗೆ ಬರುವಂತೆ 2-3 ಬಾರಿ ಆಹ್ವಾನ ಮಾಡಿದ್ದೆ. ಅವರು ನಾನು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯುವುದಾಗಿ ನನ್ನ ಆಹ್ವಾನವನ್ನು ನಿರಾಕರಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪಕ್ಷದ ಗೊಂದಲದ ಬಗ್ಗೆ ನನಗೆ ಮಾಹಿತಿ ಇಲ್ಲ, ಬಾಲಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿಗೆ ಬರುವುದಾದರೆ ಸಂತೋಷದಿಂದ ಸ್ವಾಗತ ಮಾಡುತ್ತೇನೆ. ಬಿಜೆಪಿ ಪಕ್ಷದಲ್ಲಿ ಒಳ್ಳೆಯ ಅವಕಾಶ ಇದೇ, ಅವರು ಮನಸ್ಸು ಮಾಡಬೇಕು" ಎಂದು ಸಿ. ಪಿ. ಯೋಗೀಶ್ವರ್ ತಿಳಿಸಿದರು. ಈ ಮೂಲಕ ಆಪರೇಷನ್ ಕಮಲದ ಬಗ್ಗೆ ಸುಳಿವು ನೀಡಿದರು.
ಹಳೇ ಮೈಸೂರು ಪ್ರಾಂತ್ಯದ ಹಲವು ನಾಯಕರಿಗೆ ಆಹ್ವಾನ
"ಬಿಜೆಪಿ ವರಿಷ್ಠರು ನನಗೆ ಕೆಲವು ಜವಾಬ್ದಾರಿ ನೀಡಿದ್ದಾರೆ. ಹಳೆ ಮೈಸೂರು ಪ್ರಾಂತ್ಯದ ಹಲವು ಮುಖಂಡರನ್ನು ಬಿಜೆಪಿಗೆ ಆಹ್ವಾನ ಮಾಡಿದ್ದೇನೆ. ಅಲ್ಲದೇ ಮಂಡ್ಯ ಸಂಸದೆ ಸುಮಾಲತಾರನ್ನು ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಬಿಜೆಪಿ ಸೇರುತ್ತಾರೆ" ಎಂದು ಹೇಳಿದ ಸಿ. ಪಿ. ಯೋಗೀಶ್ವರ್ ಬಾಲಕೃಷ್ಣರನ್ನು ಬಹಿರಂಗವಾಗಿ ಮಾಧ್ಯಮಗಳ ಮೂಲಕ ಬಿಜೆಪಿಗೆ ಆಹ್ವಾನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ
"ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ. ಹಾಗಾಗಿ ಹೆಚ್. ಸಿ. ಬಾಲಕೃಷ್ಣ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ನಲ್ಲೇ ಸಿಎಂ ಕುರ್ಚಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಗದ್ದಲ ನಡೆಯುತ್ತಿದೆ ಎಂದು ಆರೋಪಿಸಿದರು. ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನರಾಗ ಕೇಳುತ್ತಿದೆ. ಡಿ. ಕೆ. ಶಿವಕುಮಾರ್ ನಾನು ಪಕ್ಷಕ್ಕಾಗಿ ದುಡಿದೆ, ಆದರೆ ತೊಂದರೆಯಾಗುತ್ತಿದೆ ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದುಕೊಂಡೆ ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದವರು, ಇಬ್ಬರೂ ಸಹ ಪ್ರಬಲರಾಗಿದ್ದಾರೆ, ಏನಾಗಬಹುದು ಎಂದು ಕಾದು ನೋಡೋಣ" ಎಂದು ಸಿ. ಪಿ. ಯೋಗೀಶ್ವರ್ ಮಾರ್ಮಿಕವಾಗಿ ನುಡಿದರು.
ಅಪರೇಷನ್ ಕಮಲಕ್ಕೆ ಸಿದ್ಧತೆ
ಮಾಗಡಿ ಮಾಜಿ ಶಾಸಕರನ್ನು ಬಿಜೆಪಿಗೆ ಆಹ್ವಾನ ನೀಡುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಅಪರೇಷನ್ ಕಮಲ ನಡೆಯಬಹುದು ಎಂಬ ಸುಳಿವನ್ನು ಯೋಗೀಶ್ವರ್ ನೀಡಿದ್ದಾರೆ. ಈಗಾಗಲೆ ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಹಲವು ನಾಯಕರು ಬಿಜೆಪಿಗೆ ಸೇರಿದ್ದಾರೆ. ಜೆಡಿಎಸ್ನಲ್ಲಿ 2 ದಶಕ ಕಳೆದಿದ್ದ ಬಸವರಾಜ ಹೊರಟ್ಟಿ, ಕಾಂಗ್ರೆಸ್ ಆಡಳಿತದಲ್ಲಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ಬಿಜೆಪಿ ಸೇರಿಕೊಂಡಿದ್ದಾರೆ. ಇನ್ನೂ ಮೈಸೂರಿನ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಜೆಡಿಎಸ್ನ ಜಿ. ಟಿ. ದೇವೇಗೌಡರನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶತಪ್ರಯತ್ನ ಮಾಡುತ್ತಿವೆ.