ಮಕ್ಕಳೊಂದಿಗೆ ಗಣ ವೇಷದಲ್ಲಿ ಸೈನಿಕ, ಸಿಪಿವೈ ಹೊಸ ಅವತಾರಕ್ಕೆ ಅಚ್ಚರಿ
ಚನ್ನಪಟ್ಟಣ, ಫೆಬ್ರವರಿ 08: ಮೊನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸಚಿವರಾಗುತ್ತಾರೆ ಎನ್ನುವ ಅದಮ್ಯ ವಿಶ್ವಾಸದಲ್ಲಿ ಬೆಂಬಲಿಗರು ಸಂಪುಟ ವಿಸ್ತರಣೆಗೆ ಎರಡು ದಿನಗಳ ಮೊದಲೇ ಪಟ್ಟಣದ ತುಂಬೆಲ್ಲ ಶುಭಾಶಯ ಕೋರುವ ಬ್ಯಾನರ್ ಗಳನ್ನು ಕಟ್ಟಿ ಸಂಭ್ರಮಾಚರಣೆಗೆ ಸಿದ್ಧರಾಗಿದ್ದರು.
ಆದರೆ ಸಿಪಿವೈ ಬೆಂಬಲಿಗರಿಗೆ ಕೊನೆ ಕ್ಷಣದಲ್ಲಿ ಮಂತ್ರಿಗಿರಿ ಕೈತಪ್ಪಿ ನಿರಾಶೆ ಮೂಡಿತ್ತು. ಸಿಪಿವೈ ಶ್ರಮದಿಂದಲೇ ಕೈ-ತೆನೆ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು, ಹಾಗಾಗಿ ಸಚಿವ ಸ್ಥಾನ ಫಿಕ್ಸ್ ಎಂದು ಬಲವಾಗಿ ನಂಬಿದ ಸಿಪಿವೈ ಬೆಂಬಲಿಗರಿಗೆ ಮೂಲ ಬಿಜೆಪಿಗರ ಅಸಮಾಧಾನದಿಂದ ಕೊನೆ ಕ್ಷಣದಲ್ಲಿ ಮಂತ್ರಿ ಗಿರಿ ಕೈತಪ್ಪಿತು.
ಸಂಪುಟ ವಿಸ್ತರಣೆಗೆ ಮುನ್ನವೇ ಚನ್ನಪಟ್ಟಣದಲ್ಲಿ ರಾರಾಜಿಸುತ್ತಿವೆ ಸಿಪಿವೈ ಪರ ಬ್ಯಾನರ್
ಇದೀಗ ಸಿ.ಪಿ.ಯೋಗೇಶ್ವರ್ ಅವರು ಗಣ ವೇಷದಲ್ಲಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘ ಪರಿವಾರದ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ. "ದೇಶ ಮೊದಲು ಅಧಿಕಾರವಲ್ಲ" ಎಂಬ ಟ್ಯಾಗ್ ಲೈನ್ ಹಾಕಿ ಸಿ.ಪಿ.ಯೋಗೇಶ್ವರ್ ತಮ್ಮ ಮಕ್ಕಳಾದ ಶ್ರವಣ್ ಮತ್ತು ಧ್ಯಾನ್ ಅವರೊಂದಿಗೆ ಗಣವೇಷದಲ್ಲಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಬಿಜೆಪಿ ಸರ್ಕಾರದಲ್ಲಿ ಒಂದು ಬಾರಿ ಮಂತ್ರಿಯಾಗಿ ಎರಡನೇ ಬಾರಿಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿಪಿವೈ ಒಮ್ಮೆಯೂ ಗಣವೇಷದಲ್ಲಿ ಕಾಣಿಸಿರಲಿಲ್ಲ ಎನ್ನುತ್ತಾರೆ ಸಿಪಿವೈ ಅವರನ್ನು ಬಲ್ಲವರು. ಇನ್ನು ಸಿಪಿವೈ ಸಚಿವ ಸಂಪುಟದಲ್ಲಿ ಮಂತ್ರಿಸ್ಥಾನ ವಂಚಿತರಾಗಿ ಎರಡು ದಿನ ಕಳೆದ ಮೇಲೆ, ಎರಡನೇ ಬಾರಿಗೆ ನೂತನ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಶುಭಾಶಯಗಳು ಎಂದು ನಗರದ ತುಂಬೆಲ್ಲ ರಾರಾಜಿಸುತ್ತಿದ್ದ ಬ್ಯಾನರ್ ಗಳನ್ನು ನಗರಸಭೆ ಸಿಬ್ಬಂದಿ ತೆರವು ಮಾಡಿದರು.