ಬೆಟ್ಟಿಂಗ್ ನಡೆಯಲೆಂದು ಸುದ್ದಿಗೋಷ್ಠಿಯಲ್ಲಿ ಸುಳ್ಳು ಹೇಳಿದರಾ ಯೋಗೇಶ್ವರ್?
ರಾಮನಗರ, ಮೇ 20: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬರುವ ಹಿಂದಿನ ದಿನ ಸುದ್ದಿಗೋಷ್ಠಿ ನಡೆಸಿದ್ದ ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ 'ನಾನು ಚುನಾವಣೆ ಸೋಲುತ್ತೇನೆ' ಎಂದಿದ್ದರು ಆದರೆ ಅವರು ಹೀಗೇಕೆ ಹೇಳಿದ್ದರು ಎಂಬುದು ಈಗ ಬಹಿರಂಗವಾಗಿದೆ.
ಜೆಡಿಎಸ್ ಪಕ್ಷದವರು ಬೆಟ್ಟಿಂಗ್ಗೆ ಬರಲಿ ಎಂಬ ಉದ್ದೇಶದಿಂದಲೇ ಸಿಪಿ ಯೋಗೀಶ್ವರ್ ಅವರು ಈ ರೀತಿ ಸುದ್ದಿಗೋಷ್ಠಿ ನಡೆಸಿ ಸೋಲುವುದಾಗಿ ಹೇಳಿದ್ದರು ಎನ್ನಲಾಗುತ್ತಿದ್ದು, ಇದಕ್ಕೆ ಫುಷ್ಠಿ ನೀಡುವಂತೆ ಸಿಪಿ ಯೋಗೇಶ್ವರ್ ಅವರು ಮಾತನಾಡಿರುವುದು ಎನ್ನಲಾದ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ.
ನಾನು ಕಡಿಮೆ ಅಂತರದಿಂದ ಸೋಲಬಹುದು: ಸಿ.ಪಿ.ಯೋಗೇಶ್ವರ್
ಯೋಗೇಶ್ವರ್ ಅವರು ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರನೊಬ್ಬನ ಬಳಿ ದೂರವಾಣಿ ಮೂಲಕ ಮಾತನಾಡಿರುವ ಆಡಿಯೋ ಎನ್ನಲಾಗಿರುವ ಆ ಕ್ಲಿಪ್ನಲ್ಲಿ ಯೋಗೇಶ್ವರ್ ಅವರಿಗೆ ಬಿಜೆಪಿ ಕಾರ್ಯಕರ್ತನೇ 'ಸುದ್ದಿಗೋಷ್ಠಿ ಮಾಡಿ ಸೋಲುತ್ತಿರುವುದಾಗಿ ಪ್ರಕಟಿಸಿ ಆಗ ಬೆಟ್ಟಿಂಗ್ಗೆ ಬರುತ್ತಾರೆ' ಎಂದು ಸಲಹೆ ಕೊಡುತ್ತಾನೆ.
ಅದಕ್ಕೆ ಒಪ್ಪಿಕೊಳ್ಳುವ ಯೋಗೇಶ್ವರ್ ಅವರು ಸರಿ ನಾಳೆಯೇ ಸುದ್ದಿಗೋಷ್ಠಿ ಕರೆದು ಸೋಲುವುದಾಗಿ ಹೇಳುತ್ತೇನೆ ಎಂದು ಒಪ್ಪಿಗೆ ಸೂಚಿಸುತ್ತಾರೆ. 'ನಾನು ಗೆಲ್ಲುವುದು ಖಾಯಂ, ಆದರೆ ಸೋಲುತ್ತೇನೆ ಎಂದು ಮಾಧ್ಯಮವರ ಮುಂದೆ ಹೇಳುತ್ತೇನೆ' ಎಂದು ಸಿಪಿ ಯೋಗೇಶ್ವರ್ ಅವರದ್ದು ಎನ್ನಲಾಗುತ್ತಿರುವ ಧ್ವನಿ ಹೇಳುತ್ತಾರೆ.
ಆಡಿಯೋದಲ್ಲಿ ಕ್ಲಿಪ್ನಲ್ಲಿ ಹೇಳಿದಂತೆ ಯೋಗೇಶ್ವರ್ ಅವರು ಮೇ 14ರಂದು ಸುದ್ದಿಗೋಷ್ಠಿ ನಡೆಸಿ ಈ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲುತ್ತಿದ್ದೇನೆ ಎಂದು ಹೇಳುತ್ತಾರೆ. ಕಳೆದ ಚುನಾವಣೆಯಲ್ಲೂ ಯೋಗೇಶ್ವರ್ ಅವರು ಸೋಲುವುದಾಗಿ ಹೇಳಿದ್ದರು ಆದರೆ ಫಲಿತಾಂಶ ಹೊರಬಂದಾಗ ಅವರು ಗೆದ್ದಿದ್ದರು.
ರಾಮನಗರಕ್ಕೆ ಎಚ್ಡಿಕೆ ರಾಜೀನಾಮೆ: ಮುಂದಿನ ಅಭ್ಯರ್ಥಿ ಯಾರು?
ಆದರೆ ಈ ಬಾರಿ ಅವರ ಎಣಿಕೆ ಉಲ್ಟಾ ಹೊಡೆದದ್ದು ಅವರು ಸುಳ್ಳೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ವಿಷಯವೇ ಸತ್ಯವಾಗಿ ಅವರು ಕುಮಾರಸ್ವಾಮಿ ಅವರು ವಿರದ್ಧ ಸೋತಿದ್ದಾರೆ. ಆದರೆ ಇದೀಗ ಯೋಗೇಶ್ವರ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಬೇಕೆಂದೇ ಯೋಗೀಶ್ವರ್ ಅವರು ಹೀಗೆ ಸುದ್ದಿಗೋಷ್ಠಿ ಮಾಡಿದ್ದಾರೆ ಎನ್ನಲಾಗುತ್ತಿದೆ.