ಡಿಕೆ ಶಿವಕುಮಾರ್ ಗೆ ಮಗ್ಗಲು ಮುಳ್ಳಾದ ಯೋಗೇಶ್ವರ್?
ರಾಮನಗರ, ಅಕ್ಟೋಬರ್ 24: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ 48 ದಿನಗಳ ತಿಹಾರ್ ಜೈಲು ವಾಸದಿಂದ ನಿನ್ನೆಯಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ ಜೈಲು ವಾಸ ಮುಗಿಯಿತು ಅನ್ನುವಷ್ಟರಲ್ಲಿ ಡಿಕೆಶಿಯನ್ನು ಲಾಕ್ ಮಾಡಲು ಸಿಬಿಐ ರಾಜ್ಯ ಸರ್ಕಾರದ ಅನುಮತಿ ಪಡೆದು ಸಿದ್ಧವಾಗಿದೆ.
'ಡಿಕೆ ಶಿವಕುಮಾರ್ ಬಿಡುಗಡೆಯಿಂದ ಸಿದ್ದರಾಮಯ್ಯಗೆ ಸಂಕಟ'
ಇದರ ನಡುವೆ ರಾಜ್ಯ ಹೈಕೋರ್ಟ್ ನವೆಂಬರ್ 30ರ ಒಳಗೆ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಅರಣ್ಯ ಭೂಮಿ ಒತ್ತುವರಿ ಸಂಬಂಧ ಯು.ವಿ.ಸಿಂಗ್ ನೀಡಿರುವ ವರದಿಯನ್ನು ಕೋರ್ಟ್ ಗೆ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶ ಮಾಡಿರುವುದು ಡಿಕೆಶಿಗೆ ಉರುಳಾಗುವ ಸಾಧ್ಯತೆಯನ್ನು ತೋರುತ್ತಿದೆ. ಜೊತೆಗೆ ಸಿಪಿ ಯೋಗೇಶ್ವರ್ ಕೂಡ ಡಿಕೆಶಿಗೆ ಮಗ್ಗಲು ಮುಳ್ಳಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Recommended Video
ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
ಯಾಕೆ ಸಿಪಿವೈ ಮಗ್ಗಲಿನ ಮುಳ್ಳು?
ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದ ನಂತರ ಪೂರ್ಣಪ್ರಮಾಣದ ಅಧಿಕಾರ ಹಿಡಿದ ಬಿಜೆಪಿಯಲ್ಲಿ ಅರಣ್ಯ ಮಂತ್ರಿಯಾಗಿದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ರಾಶಿರಾಶಿ ದಾಖಲೆಗಳನ್ನು ಕೇಂದ್ರ ಬಿಜೆಪಿ ನಾಯಕರ ಮೂಲಕ ಇಡಿ, ಐಟಿ ಮತ್ತು ಸಿಬಿಐಗೆ ಸಲ್ಲಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಮೂಲಕ ಡಿಕೆಶಿಗೆ ಸಿಪಿವೈ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ ಎನ್ನಲಾಗಿದೆ.
ತೆರೆಮರೆಯಲ್ಲೇ ನಿಂತು ಡಿಕೆ ಸಹೋದರರಿಗೆ ಸ್ಕೆಚ್?
ಸಿಪಿವೈ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಮಂತ್ರಿ ಯಾಗಿದ್ದ ಸಮಯದಲ್ಲಿ ಕನಕಪುರ ವ್ಯಾಪ್ತಿಯ ನಡೆಯುತ್ತಿದ್ದ ಡಿಕೆಶಿಗೆ ಸೇರಿದ ಮತ್ತು ಡಿಕೆಶಿ ಬೆಂಬಲಿಗರಿಗೆ ಸೇರಿದ ಕಲ್ಲುಗಣಿಗಾರಿಗೆಗಳ ಮೇಲೆ ದಾಳಿ ಮಾಡಿ ಹಲವು ಕಲ್ಲುಗಣಿಗಾರಿಕೆಗಳನ್ನ ನಿಲ್ಲಿಸಿದ್ದರು. ಈ ಪ್ರಕರಣದ ಎಲ್ಲಾ ದಾಖಲೆಗಳನ್ನ ಇಡಿ ಅಧಿಕಾರಿಗಳಿಗೆ ಯೋಗೇಶ್ವರ್ ನೀಡಿ, ತೆರೆಮರೆಯಲ್ಲೇ ನಿಂತು ಡಿ.ಕೆ.ಬ್ರದರ್ಸ್ ಮುಗಿಸಲು ಸಿ.ಪಿ.ಯೋಗೇಶ್ವರ್ ಮಾಸ್ಟರ್ ಪ್ಯ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಡಿಕೆಶಿ ಕನವರಿಸುತ್ತಾರೆ ಎಂದಿದ್ದ ಸಿಪಿವೈ
ಇತ್ತೀಚೆಗಿನ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಪಿ ಯೋಗೇಶ್ವರ್ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿದ್ದರು. "ಡಿಕೆಶಿ ನಮ್ದು, ಅವರದ್ದು ಎಲ್ಲರ ಫೋನ್ ಟ್ಯಾಪ್ ಅನ್ನು ಸಿಬಿಐಗೆ ವಹಿಸಲಿ ಎಂದಿದ್ದರು. ಪಾಪ ಅವರು ಬಹಳ ಕನವರಿಸುತ್ತಿದ್ದಾರೆ, ಸಿಬಿಐಗೆ ವಹಿಸಲಿ, ನಾನು ಜೈಲಿಗೆ ಹೋಗ್ತೀನಿ ಅಂತ. ನೋಡೋಣ ಮುಂದಿನ ದಿನಗಳಲ್ಲಿ ಏನಾಗುತ್ತೆ" ಎಂದಿದ್ದರು.
ಉರುಳಾಗುವುದೇ ಯು.ವಿ ಸಿಂಗ್ ವರದಿ?
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಕನಕಪುರ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಅರಣ್ಯ ಭೂಮಿ ಒತ್ತುವರಿ ಪತ್ತೆ ಮಾಡಲು ಯು.ವಿ.ಸಿಂಗ್ ರನ್ನ ನೇಮಕ ಮಾಡಿದ್ದರು. ಅದರಂತೆ ಕನಕಪುರ ಸುತ್ತಮುತ್ತ ಕಲ್ಲುಗಣಿ ಪ್ರದೇಶ, ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಅವರು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಬಿಜೆಪಿ- ಜೆಡಿಎಸ್ ಸರ್ಕಾರದ ನಂತರ ಬಂದ ಎಲ್ಲಾ ಸರ್ಕಾರಗಳು ಯು.ವಿ.ಸಿಂಗ್ ವರದಿಯನ್ನು ಪರಿಗಣಿಸಿಲ್ಲ, ಈಗ ರಾಜ್ಯ ಸರ್ಕಾರಕ್ಕೆ, ರಾಜ್ಯ ಹೈಕೋರ್ಟ್ ನವೆಂಬರ್ 30 ರೊಳಗೆ ಯು.ವಿ.ಸಿಂಗ್ ವರದಿ ಒಪ್ಪಿಸುವಂತೆ ಸೂಚನೆ ನೀಡಲಾಗಿದೆ. ಇದು ಡಿಕೆಶಿಗೆ ಸಂಕಷ್ಟ ತರುವ ಸಾಧ್ಯತೆ ಇದೆ.