ಯೋಗೇಶ್ವರ್ಗೆ ಅದ್ಧೂರಿ ಸ್ವಾಗತ; ಸೇಬು ಹಣ್ಣಿಗಾಗಿ ಕಿತ್ತಾಟ!
ರಾಮನಗರ, ಜನವರಿ 18: ಕಳೆದ ಬುಧವಾರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಬಂದ ನಾಯಕ ಸಿ.ಪಿ ಯೋಗೇಶ್ವರ್ಗೆ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೆಂಗಲ್ ಆಂಜನೇಯ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ಬಂದು ಯೋಗೇಶ್ವರ್ ಪೂಜೆ ಸಲ್ಲಿಸಿದರು. ಪತ್ನಿ ಶೀಲಾ, ಪುತ್ರಿ ನಿಶಾ, ಪುತ್ರರಾದ ಶ್ರವಣ್ ಮತ್ತು ಧ್ಯಾನ್ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಚನ್ನಪಟ್ಟಣಕ್ಕೆ ಸಚಿವ ಯೋಗೇಶ್ವರ್ ಆಗಮನ; ಅದ್ದೂರಿ ಸ್ವಾಗತ
ಪೂಜೆ ಮುಗಿದ ಬಳಿಕ ಸಾವಿರಾರು ಬೈಕ್ ಗಳ ಮುಂದೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಚನ್ನಪಟ್ಟಣಕ್ಕೆ ಆಗಮಿಸಿದರು. ಇನ್ನು ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಗಳಿಂದ ಪುಷ್ಪಾರ್ಚನೆ ಮಾಡಿ ತಮ್ಮ ಅಭಿಮಾನವನ್ನು ತೋರಿಸಿದರು.
ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ
ಮೆರವಣಿಗೆಯ ದಾರಿಯಲ್ಲಿ ಸುಮಾರು 10 ಕಡೆ ಜೆಸಿಬಿ ಮೇಲೆ ನಿಂತ ಅಭಿಮಾನಿಗಳು ಹೂಮಳೆಗರೆದರು. ಹೋದ ಕಡೆಯಲ್ಲೆಲ್ಲಾ ಹೂವಿನ ಹಾರ ಹಾಕಿ ಸಿ.ಪಿ ಯೋಗೇಶ್ವರ್ ರನ್ನು ಮಾತನಾಡಿಸಿ ಶುಭ ಹಾರೈಸಿದರು. ಇನ್ನು ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಪಿ.ವೈ, ನಾನು ಇದೀಗ ಖಾತೆ ರಹಿತವಾಗಿ ತಾಲ್ಲೂಕಿಗೆ ಬಂದಿದ್ದೇನೆ. ಖಾತೆ ಹಂಚಿಕೆಯ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು, ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಮುಂದಿನ ದಿನಗಳಲ್ಲಿ ಬೇರೆ ವಿಚಾರಗಳ ಬಗ್ಗೆ ಗಮನಹರಿಸುತ್ತೇನೆ ಎಂದರು.
ಸಚಿವರಿಗೆ ಬೃಹತ್ ಸೇಬಿನ ಹಾರ
ಇನ್ನೂ ಮೆರವಣಿಗೆಯ ಮೂಲಕ ಅಗಮಿಸಿದ ಸಚಿವ ಸಿ.ಪಿ.ಯೋಗೇಶ್ವರ್ ರವರಿಗೆ ಅಭಿಮಾನಿಗಳು ಪಟ್ಟಣದ ಬಸ್ ನಿಲ್ದಾಣದಲ್ಲಿ ಕ್ರೇನ್ ಮೂಲಕ ಸುಮಾರು 500 ಕೆಜಿಯ ಬೃಹತ್ ಸೇಬಿನ ಹಾರವನ್ನು ಹಾಕಿ ಅಭಿಮಾನ ಮೆರೆದರು. ಸಚಿವರಿಗೆ ಹಾಕಿದ ಬೃಹತ್ ಸೇಬಿನ ಹಾರದಲ್ಲಿ ಸೇಬಿನ ಹಣ್ಣು ಕಿತ್ತುಕೊಳ್ಳಲು ಅಭಿಮಾನಿಗಳು ಮುಗಿಬಿದ್ದು, ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಸೇಬು ಕಿತ್ತುಕೊಂಡ ಪ್ರಸಂಗ ನೆರೆದಿದ್ದವರಿಗೆ ಮುಜುಗರ ತರಿಸುವಂತಿತ್ತು.
ಪಟಾಕಿ ಹೊಗೆಯಲ್ಲಿ ಮಿಂದೆದ್ದ ನಗರ
ಸಚಿವ ಸಿ.ಪಿ.ಯೋಗೇಶ್ವರ್ ರವರಿಗೆ ಅಭಿಮಾನ ತೋರುವ ಬರದಲ್ಲಿ ಅಭಿಮಾನಿಗಳು ಸಿಡಿಸಿದ ಪಟಾಕಿ ಹೊಗೆಯಲ್ಲಿ ಚನ್ನಪಟ್ಟಣ ನಗರ ಮಿಂದೇಳಿತು. ಸುಮಾರು 7 ಕಿ.ಮೀ ನಡೆದ ಸಚಿವರ ಮೆರವಣಿಗೆಯಲ್ಲಿ ಸ್ಪರ್ಧೆಗೆ ಬಿದ್ದವರಂತೆ ಅಭಿಮಾನಿಗಳು ಪಟಾಕಿ ಸಿಡಿಸಿದರು. ಅದರಲ್ಲೂ ಬಸ್ ನಿಲ್ದಾಣದ ಬಳಿ ನೆರದಿದ್ದ ಜನರನ್ನು ಹಿಡಿದಿಡಲು ಸಿಪಿವೈ ಅಭಿಮಾನಿಗಳು ಒಂದರ ಹಿಂದೆ ಮತ್ತೊಂದು ಪಟಾಕಿ ಸರಕ್ಕೆ ಬೆಂಕಿ ತಾಗಿಸುತ್ತಿದ್ದರು, ಇದರಿಂದ ಬಸ್ ನಿಲ್ದಾಣದ ಬಳಿ ದಟ್ಟ ಹೊಗೆ ಅವರಿಸಿಕೊಂಡಿತ್ತು. ಅಲ್ಲದೇ ರಸ್ತೆಯ ಓಡಾಡುತ್ತಿದ್ದ ವಾಹನಗಳು ತಮ್ಮ ಮೇಲೆ ಪಟಾಕಿ ಸಿಡಿಯುತ್ತವೆ ಎಂಬ ಆತಂಕದಲ್ಲೇ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.
Recommended Video
ಪರದಾಡಿದ ಅಂಬ್ಯುಲೆನ್ಸ್
ನೂತನ ಸಚಿವರ ಮೆರವಣಿಗೆಯ ಹಿನ್ನೆಲೆಯಲ್ಲಿ ಪೊಲೀಸರು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಏಕಮುಖ ಸಂಚಾರವನ್ನಾಗಿ ಮಾಡಿಕೊಂಡಿದ್ದರು. ಏಕಮುಖ ಸಂಚಾರದಿಂದ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಮೆರವಣಿಗೆ ಚನ್ನಪಟ್ಟಣದ ಶೇರು ಸರ್ಕಲ್ ಬಳಿ ಬರುತ್ತಿದ್ದಂತೆ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು, ಇದರಿಂದಾಗಿ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಅಂಬ್ಯುಲೆನ್ಸ್ ಒಂದು ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ಸಮಸ್ಯೆ ಎದುರಿಸಿದರು. ವಾಹನಗಳ ನಡುವೆ ಸಿಲುಕಿ ಹತ್ತು ನಿಮಿಷ ಕಳೆದರು ಅಂಬ್ಯುಲೆನ್ಸ್ ಗೆ ಯಾರೊಬ್ಬರೂ ಸಹ ದಾರಿ ಮಾಡಿಕೊಡಲು ಮುಂದಾಗಲಿಲ್ಲ. ಬಳಿಕ ಎಚ್ಚೆತ್ತುಕೊಂಡ ಪೊಲೀಸ್ ಸಿಬ್ಬಂದಿಗಳು ಅಂಬ್ಯುಲೆನ್ಸ್ ವಾಹನ ಹೋಗಲು ಅವಕಾಶ ಮಾಡಿಕೊಟ್ಟರು.