ಪ್ರಾಣಿ ಬೇಟೆಗೆ ಇಟ್ಟಿದ್ದ ನಾಡ ಬಾಂಬ್ ತಿಂದು ಛಿದ್ರಗೊಂಡ ಹಸುವಿನ ಬಾಯಿ
ಕನಕಪುರ, ನವೆಂಬರ್ 1: ಕಾಡುಹಂದಿ ಬೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ತಿಂದು ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಎಳಗಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ, ಇಬ್ಬರ ಅಮಾನತು
ಎರಡು ದಿನಗಳ ಹಿಂದೆ ಗ್ರಾಮದ ಶಂಕರೇಗೌಡ ಎಂಬುವರಿಗೆ ಸೇರಿದ ನಾಟಿ ಹಸು ಪಾಳು ಜಮೀನೊಂದರಲ್ಲಿ ಮೇಯುತ್ತಿದ್ದಾಗ ಕಾಡುಹಂದಿ ಬೇಟೆಗೆ ಇಟ್ಟಿದ್ದ ಮದ್ದಿನ ಉಂಡೆಯನ್ನು ತಿಂದಿದೆ. ಮದ್ದಿನ ಉಂಡೆ ಸಿಡಿತದ ರಭಸಕ್ಕೆ ಹಸುವಿನ ಬಾಯಿ ಛಿದ್ರವಾಗಿದೆ. ಹಸು ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ಹಸುವಿನ ಮಾಲೀಕ ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಮತ್ತೆ ಸಂಜೆ ವೇಳೆಗೆ ಎರಡು ಮದ್ದಿನ ಉಂಡೆಗಳನ್ನು ಗ್ರಾಮಸ್ಥರು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ನಡೆದ ಜಮೀನಿನ ಸನಿಹದಲ್ಲೇ ಕಾವೇರಿ ವನ್ಯಜೀವಿ ವಲಯವಿದ್ದು ಕಳ್ಳ ಬೇಟೆಗಾರರು ಕಾಡುಹಂದಿ ಬೇಟೆಗೆ ಸ್ಫೋಟಕ ಕಬ್ಬಿಣ ಮತ್ತು ಗಾಜಿನ ಚೂರುಗಳನ್ನು ಬಳಸಿ ಮದ್ದಿನ ಉಂಡೆ ತಯಾರು ಮಾಡಿ ಕಾಡಾಂಚಿನ ಪಾಳು ಜಮೀನಿನಲ್ಲಿ ಇಡುತ್ತಾರೆ. ಇಂತಹ ಉಂಡೆ ಬಹಳ ಅಪಾಯಕಾರಿ ಯಾಗಿದ್ದು ಇದನ್ನು ಜಗಿದ ಪ್ರಾಣಿಗಳು ಸ್ಥಳದಲ್ಲೇ ಪ್ರಾಣಬಿಡುತ್ತವೆ.