ರಾಮನಗರ ಜೈಲಿನಲ್ಲಿ ಆತಂಕ, ಕೈದಿಗಳಿಂದ ಪ್ರತಿಭಟನೆ, ರೋಗಿಗಳು ವಿಕ್ಟೋರಿಯಾಗೆ ಶಿಫ್ಟ್
ರಾಮನಗರ, ಏಪ್ರಿಲ್ 24: ರಾಮನಗರ ಜೈಲಿಗೆ ಬೆಂಗಳೂರಿನಿಂದ ಕರೆತಂದಿದ್ದ ಪಾದರಾಯನಪುರ ಪುಂಡರಲ್ಲಿ ಇಬ್ಬರು ಕೈದಿಗಳಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೋನಾ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ಸೋಂಕು ಇರುವ ಇಬ್ಬರು ಆರೋಪಿಗಳನ್ನು ಮಧ್ಯರಾತ್ರಿ ಸುಮಾರು 1 ಗಂಟೆಗೆ ಆಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಕೈದಿಗಳಲ್ಲಿ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ನಾಯಕರು ವಿರೋಧಿಸಿದ್ದರು. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದರು. ಅಂತಯೇ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.
ರಾಮನಗರಕ್ಕೆ ಕೊರೊನಾ ಲಗ್ಗೆ ಇಡಲು ಸರ್ಕಾರವೇ ಕಾರಣ ಎಂದ ಎಚ್ ಡಿಕೆ
ವ್ಯಾಪಕ ವಿರೋಧದಿಂದ ತಡರಾತ್ರಿ ತುರ್ತು ಸಭೆ ನಡೆಸಿದ ಜಿಲ್ಲಾಢಳಿತ ಇಂದು ಉಳಿದ ಎಲ್ಲಾ ಆರೋಪಿಗಳನ್ನ ಹಜ್ ಭವನಕ್ಕೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಂಡಿದ್ದು ಬೆಳಂಬೆಳಿಗ್ಗೆ ಜೈಲಿನ ಮುಂಭಾಗದಲ್ಲಿ ಪಾದರಾಯನಪುರದ ಆರೋಪಿಗಳನ್ನು ಕರೆದೊಯ್ಯಲು ಸಿದ್ದವಾಗಿ ನಿಂತಿವೆ.
ಜೈಲಿನ ಬಳಿ ರಸ್ತೆ ಬಂದ್
ಪಾದರಾಯನಪುರ ಕೈದಿಗಳಲ್ಲಿ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ತುರ್ತು ಸಭೆ ನಡೆಸಿದ ಡಿಸಿ ಅರ್ಚನಾ, ಎಸ್ಪಿ ಅನೂಪ್ ಶೆಟ್ಟಿ, ಡಿಎಚ್ಒ ನಿರಂಜನ್ ಯಾರನ್ನೆಲ್ಲಾ ಕ್ವಾರೆಂಟೈನ್ ಮಾಡಬೇಕು ಎಂದು ಚರ್ಚೆ ನಡೆಸಿದರು. ಕೈದಿಗಳಲ್ಲಿ ಸೋಂಕು ಪಾಸಿಟಿವ್ ಹಿನ್ನೆಲೆಯಲ್ಲೆ ಜೈಲಿನ ಬಳಿ ರಸ್ತೆ ಮುಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೈದಿಗಳು ಪ್ರತಿಭಟನೆ
ಪಾದರಾಯನಪುರ ಗಲಭೆ ಕೋರರನ್ನು ರಾಮನಗರ ಜೈಲಿಗೆ ಕರೆತಂದಿರುವುದಕ್ಕೆ ಜೈಲು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈದಿಗಳಲ್ಲಿ ಕೋವಿಡ್-19 ದೃಢಪಟ್ಟ ಹಿನ್ನಲೆಯಲ್ಲಿ ಜೈಲು ಸಿಬ್ಬಂದಿಗಳು ಜೈಲಿನ ಮುಂಭಾಗದಲ್ಲಿ ಗಲಾಟೆ ಮಾಡಿದ್ದಾರೆ ನಮ್ಮ ಜೀವ ತಗೆಯಲು ಕೈದಿಗಳನ್ನು ಇಲ್ಲಿ ತಂದು ಹಾಕಿದ್ದಾರೆ. ಆರೋಪಿಗಳು ಕರೆತರುವಾಗ ಯಾವುದೇ ಮುಂಜಾಗ್ರತಾ ಕ್ರಮ ತಗೆದುಕೊಂಡಿಲ್ಲ ಎಂದು ಜೈಲಿನ ಪಕ್ಕದಲ್ಕಿರುವ ಕ್ವಾರ್ಟರ್ಸ್ ನಲ್ಲಿ ಉಳಿದಿರುವ ಸಿಬ್ಬಂದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವೈದ್ಯರ ಹಲ್ಲೆ ಮಾಡಿದ್ದ ಪಾದರಾಯನಪುರ ಪುಂಡರಲ್ಲಿ ಕೊರೊನಾ ಸೋಂಕು ಪತ್ತೆ!
ಜೈಲು ಅಧಿಕಾರಿಗಳ ಕ್ವಾರಂಟೈನ್ ಸಾಧ್ಯತೆ
ಪಾದರಾಯನಪುರ ಮೂಲದ ಕೈದಿಗಳಿಗೆ ಸೋಂಕು ದೃಢವಾದ ಹಿನ್ನೆಲೆ ಜೈಲಿನ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡುವ ಬಹುತೇಕ ಸಾಧ್ಯತೆ. ಈ ಕುರಿತು ಎಸ್ಪಿ, ಡಿಸಿ, ಡಿ ಎಚ್ ಓ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಸೋಂಕಿತರ ಪರೀಕ್ಷೆಗೆ ತೆರಳಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನ ಕ್ವಾರಂಟೈನ್ ಗೆ ಒಳಪಡಿಸುವ ಚಿಂತನೆಯೂ ಇದೆ. ಜೈಲಧಿಕಾರಿಗಳ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ.
ಜೈಲಿಗೆ ಬಂದಿದ್ದ ಸಿಬ್ಬಂದಿಗಳಿಗೂ ಕ್ವಾರೆಂಟೈನ್?
ರಾಮನಗರ ನಗರಸಭೆ ಸಿಬ್ಬಂದಿಗಳು ಕೆಲವರು ಜೈಲಿಗೆ ಹೋಗಿದ್ದರು. ಮಾಸ್ಕ್, ಸ್ಯಾನಿಟೈಜರ್ ಕೊಡಲು ಹೋಗಿದ್ದರು. ಅವರನ್ನು ಕೂಡ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಒಟ್ಟು 150 ಕ್ಕೂ ಹೆಚ್ಚು ಜನರನ್ನ ಹೋಂ ಕ್ವಾರಂಟೈನ್ ಗೆ ಒಳಪಡಿಸುವ ಅಂದಾಜಿದೆ. 20ಕ್ಕೂ ಹೆಚ್ಚು ಜನ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅಡುಗೆ ಭಟ್ಟರನ್ನ ಸೇರಿ ಎಲ್ಲರನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ.