ದೌರ್ಜನ್ಯ: ಡಿಕೆಶಿ ಬೆಂಬಲಿಗರ ವಿರುದ್ಧ ತನಿಖೆಗೆ ಕೋರ್ಟ್ ಆದೇಶ
ಕನಕಪುರ, ಮಾರ್ಚ್ 26: ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಬೆಂಬಲಿಗರು ಎನ್ನಲಾದ ಕನಕಪುರದ ಧನಂಜಯ, ಶ್ರೀನಿವಾಸ ಮತ್ತು ಕನಕಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಟರಾಜ ಅವರುಗಳ ವಿರುದ್ಧ ತನಿಖೆ ನಡೆಸುವಂತೆ ಕನಕಪುರ ಜೆಎಂಎಫ್ ನ್ಯಾಯಾಲಯ ಆದೇಶಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಡಿಕೆಶಿ ಬೆಂಬಲಿಗರು ಎಂದು ಗುರುತಿಸಿಕೊಳ್ಳುವ ಧನಂಜಯ ಮತ್ತಿತರರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಕನಕಪುರದ ರೂಪೇಶ ಮತ್ತು ಗೌರಮ್ಮ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ.
ಬಂಧನ ಭೀತಿಯಿಂದ ಡಿ.ಕೆ. ಶಿವಕುಮಾರ್, ಸುರೇಶ್ ಪಾರು
ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿ ಆದಾಗ ಧನಂಜಯ, ಸೀನ ಮತ್ತಿತರೆ ಕೆಲವರು ಹಣ ಮತ್ತು ಕೆಲವು ದಾಖಲೆಗಳನ್ನು ಗೌರಮ್ಮ ಹಾಗೂ ರೂಪೇಶ ಎಂಬುವರ ಮನೆಯಲ್ಲಿ ಇಟ್ಟಿದ್ದರು. ಆ ನಂತರ ಅದನ್ನು ವಾಪಾಸ್ಸು ಪಡೆಯುವ ವೇಳೆ ಲೆಕ್ಕ ತಪ್ಪಿದೆ ನೀವು ನಮ್ಮ ಹಣ ನುಂಗಿದ್ದೀರಿ ಎಂದು ಆರೋಪಿಸಿ ಗೌರಮ್ಮ ಹಾಗೂ ಅವರ ಕುಟುಂಬಸ್ಥರನ್ನು ರೆಸಾರ್ಟ್ ಒಂದಕ್ಕೆ ಕರೆದುಕೊಂಡು ಹೋಗಿ ಕೂಡಿಹಾಕಿ ಹೊಡೆದಿದ್ದರು ಎಂದು ಗೌರಮ್ಮ ದೂರು ನೀಡಿದ್ದಾರೆ.
ಗೌರಮ್ಮ ಅವರು ತಮ್ಮ ಮೇಲೆ ಹಲ್ಲೆ ಆಗಿರುವ ಬಗ್ಗೆ ಚಿತ್ರಗಳ ಸಮೇತ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಈ ಚಿತ್ರಗಳು ಈಗ ಸುದ್ದಿವಾಹಿನಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕನಕಪುರ ಪಿಎಸ್ಐ ನಟರಾಜ್ ಕೂಡಾ ಅವರೊಂದಿಗೆ ಶಾಮೀಲಾಗಿದ್ದು, ಅವರು ಕೂಡ ಠಾಣೆಗೆ ಕರೆದುಕೊಂಡು ಹೋಗಿ ಚೆನ್ನಾಗಿ ಹೊಡೆದಿದ್ದಾರೆ ಎಂದು ಗೌರಮ್ಮ ದೂರಿನಲ್ಲಿ ಹೇಳಿದ್ದಾರೆ. ರೂಪೇಶ್ ಅವರು ಕೂಡಾ ಇದೇ ರೀತಿಯ ದೂರನ್ನು ನ್ಯಾಯಲಯಕ್ಕೆ ಸಲ್ಲಿಸಿದ್ದು, ಅವರ ಮನವಿಯನ್ನು ಪುರಸ್ಕರಿಸಿರುವ ಕನಕಪುರ ಜೆಎಂಎಫ್ಸಿ ನ್ಯಾಯಾಲಯ ತನಿಖೆಗೆ ಆದೇಶಿಸಿದೆ.