ನಿತ್ಯಾನಂದನ ಆಸ್ತಿ ಪರಿಶೀಲನೆ ಮಾಡಲು ಸಿಐಡಿಗೆ ಸೂಚಿಸಿದ ನ್ಯಾಯಾಲಯ
ರಾಮನಗರ, ಮಾರ್ಚ್ 04: ರಾಸಲೀಲೆ ಪ್ರಕರಣದಲ್ಲಿ ಬಿಡದಿಯ ನಿತ್ಯಾನಂದ ಸ್ವಾಮಿ ರಾಮನಗರ ನ್ಯಾಯಾಲಯದ ವಿಚಾರಣೆಗೆ ಬಹುಕಾಲದಿಂದ ಗೈರಾಗಿರುವ ಹಿನ್ನೆಲೆಯಲ್ಲಿ ಆತನಿಗೆ ಸೇರಿದ ಆಸ್ತಿಗಳನ್ನು ಪರಿಶೀಲನೆ ಮಾಡಿ ಮುಟ್ಟಗೋಲು ಹಾಕಿಕೊಳ್ಳಲು ಸಿಐಡಿ ಅಧಿಕಾರಿಗಳಿಗೆ ರಾಮನಗರ ನ್ಯಾಯಾಲಯ ಸೂಚನೆ ನೀಡಿದೆ.
ನಿತ್ಯಾನಂದನ ಆಸ್ತಿಗಳನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸಲು ರಾಮನಗರ 3ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ಸೂಚನೆ ನೀಡಿದ್ದಾರೆ.
ನಿತ್ಯಾನಂದ ಸ್ವಾಮಿ ವಿರುದ್ಧ ಸರ್ಚ್ ವಾರಂಟ್ ಹೊರಡಿಸಿದ ರಾಮನಗರ ನ್ಯಾಯಾಲಯ
ಇಂದು ನಿತ್ಯಾನಂದನ ರಾಸಲೀಲೆ ಪ್ರಕರಣದ ವಿಚಾರಣೆಗೆ ಒಂದನೇ ಆರೋಪಿ ನಿತ್ಯಾನಂದ, ಎರಡನೇ ಆರೋಪಿ ಗೋಪಾಲ ಶೀಲಂ ರೆಡ್ಡಿ ಇಬ್ಬರು ಸೇರಿದಂತೆ ಎಲ್ಲಾ ಅರೋಪಿಗಳು ಗೈರಾಗಿದ್ದರು. ದೂರುದಾರ ಲೆನಿನ್ ನ್ಯಾಯಾಲಯದಲ್ಲಿ ಹಾಜರಿದ್ದರು. ನ್ಯಾಯಾಲಯಕ್ಕೆ ಆರೋಪಿಗಳು ಗೈರಾದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಇದೇ ತಿಂಗಳ 23 ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಒಂದನೇ ಹಾಗೂ ಎರಡನೇ ಆರೋಪಿಗಳನ್ನು ಹೂರತುಪಡಿಸಿ ಇನ್ನುಳಿದ ನಾಲ್ಕು ಮಂದಿ ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ವಿನಾಯಿತಿ ಕೋರಿದ ಹಿನ್ನೆಲೆಯಲ್ಲಿ ನಾಲ್ಕು ಆರೋಪಿಗಳ ಹಾಜರಿಗೆ ವಿನಾಯಿತಿ ನೀಡಿದೆ.
ಈಗಾಗಲೇ ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದ ಮೇರೆಗೆ ನಿತ್ಯಾನಂದ ಸ್ವಾಮಿಯ ಜಾಮೀನು ರದ್ದುಗೊಳಿಸಿ, ಅತನ ವಿರುದ್ಧ ಬಂಧನ ವಾರೆಂಟ್ ಹಾಗೂ ಸರ್ಚ್ ವಾರೆಂಟ್ ಹೊರಡಿಸಿರುವ ರಾಮನಗರ ನ್ಯಾಯಾಲಯ ಮುಂದುವರೆದು, ಇಂದು ನಿತ್ಯಾನಂದನ ಆಸ್ತಿಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬಿಡದಿ ನಿತ್ಯಾನಂದ ಸ್ವಾಮಿ ವಿರುದ್ಧ ರಾಮನಗರ ಜಿಲ್ಲಾ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್
ಅಧಿಕಾರಿಗಳು ಆಸ್ತಿಗಳನ್ನು ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ನ್ಯಾಯಾಲಯ, ಜಿಲ್ಲಾಧಿಕಾರಿಗಳಿಗೆ ನಿತ್ಯಾನಂದ ಸ್ವಾಮಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಲಿದೆ ಎಂದು ಸರ್ಕಾರಿ ಅಭಿಯೋಜಕ ಎಂ.ಡಿ ರಘು ಮಾಹಿತಿ ನೀಡಿದರು.