ರಾಮನಗರದಲ್ಲಿ ಸಂಚರಿಸಲಿದೆ ಸಂಚಾರಿ ತಪಾಸಣಾ ವಾಹನ
ರಾಮನಗರ, ಮೇ 27: ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಂಚಾರಿ ಕ್ಲಿನಿಕ್ ಬಸ್ ಗೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಮಂಗಳವಾರ ಸಂಜೆ ಚಾಲನೆ ನೀಡಿದರು.
ಕೆ.ಎಸ್.ಆರ್.ಟಿ.ಸಿ ಬಸ್ನ್ನು ಕ್ಲಿನಿಕ್ ಆಗಿ ಪರಿವರ್ತಿಸಿದ್ದು, ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರಗಳಲ್ಲಿ ಸಂಚರಿಸಿ ಕೋವಿಡ್-19 ಲಕ್ಷಣವುಳ್ಳ ಜನರನ್ನು ಪರೀಕ್ಷಿಸುವಲ್ಲಿ ಈ ಸಂಚಾರಿ ವಾಹನ ಉಪಯುಕ್ತವಾಗಿದೆ.
KSRTC ಚಾಲಕನಿಗೆ ಕೊರೊನಾ: ಡಿಪೋ, ಕುಟುಂಬಕ್ಕೆ ಹೆಚ್ಚಿದ ಆತಂಕ
ಸಂಚಾರಿ ವಾಹನದಲ್ಲಿ ವೈದ್ಯರ ಯುನಿಟ್, ರೋಗಿಯ ತಪಾಸಣೆಗಾಗಿ ಹಾಸಿಗೆ ವ್ಯವಸ್ಥೆ, ಕೈ ತೊಳೆಯಲು ವಾಷ್ ಬೇಸನ್, ಸೋಂಕಿತರಿಂದ ಗಂಟಲು ದ್ರವ ಸಂಗ್ರಹಣೆ ಮಾಡುವ ವ್ಯವಸ್ಥೆ ಇದ್ದು, ಅಲ್ಲದೇ ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಹಾಗೂ ವಾಹನ ಚಾಲಕರು ಇದರಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಸಂಚಾರಿ ತಪಾಸಣಾ ವಾಹನವು ಹೆಚ್ಚಿನ ಜನಸಂದಣಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ರೇಷ್ಮೆ ಮಾರುಕಟ್ಟೆ, ಬಸ್ ನಿಲ್ದಾಣ, ಇನ್ನಿತರ ಪ್ರದೇಶಗಳಲ್ಲಿ ಸಂಚರಿಸಿ ಅಲ್ಲಿನ ಜನರ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಲಿದೆ.
ಕೋವಿಡ್-19 ರೋಗದ ಲಕ್ಷಣವುಳ್ಳವರು ಕಂಡುಬಂದಲ್ಲಿ ಸಂಚಾರಿ ವಾಹನದಲ್ಲೇ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಮಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಆರ್.ಸಿ.ಎಚ್ ಅಧಿಕಾರಿ ಡಾ. ಪದ್ಮ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.