ಕೊರೊನಾ ವೈರಸ್ ಭೀತಿ: ಸ್ವಯಂ ಲಾಕ್ ಡೌನ್ ಗೆ ಶರಣಾದ ಮಾಗಡಿ
ರಾಮನಗರ, ಜುಲೈ 14: ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕೊರೊನಾ ವೈರಸ್ ಕಾಟಕ್ಕೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣವನ್ನು ಸ್ವಯಂ ಪ್ರೇರಿತ ಸಂಪೂರ್ಣ ಲಾಕ್ ಡೌನ್ ಗೆ ಶರಣಾಗಿದ್ದು, ಸಾರ್ವಜನಿಕರು ಮತ್ತು ವರ್ತಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜುಲೈ 23 ರವರೆಗೆ ಕರೆ ನೀಡಿರುವ ಸ್ವಯಂ ಪ್ರೇರಿತ ಲಾಕ್ ಡೌನ್ ಮಾಗಡಿ ಪಟ್ಟಣವನ್ನು ಸಂಪೂರ್ಣ ನಿಶ್ಯಬ್ಧವಾಗಿಸಿದೆ. ಹಾಲು, ಮೆಡಿಕಲ್ ಹಾಗೂ ಸುದ್ದಿ ಪತ್ರಿಕೆ ಹೊರತುಪಡಿಸಿ ಮಿಕ್ಕೆಲ್ಲ ಅಗತ್ಯ ವಸ್ತುಗಳ ಅಂಗಡಿಗಳಿಗೂ ಬೀಗ ಹಾಕಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಜು.13 ರಿಂದ 23ರವರೆಗೆ ಮಾಗಡಿ ಸಂಪೂರ್ಣ ಲಾಕ್ ಡೌನ್!
ರಾಮನಗರ ಜಿಲ್ಲೆಯಲ್ಲಿ 389 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳಿದ್ದು, ಮಹಾಮಾರಿ ರೋಗಕ್ಕೆ 8 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲೇ ಅತಿ ಹೆಚ್ಚು 136 ಕೊರೊನಾ ವೈರಸ್ ಪ್ರಕರಣಗಳು ಮಾಗಡಿ ತಾಲ್ಲೂಕಿನಲ್ಲಿ ಪತ್ತೆಯಾಗಿದ್ದು, 7 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮಾಗಡಿ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ನಾಗಲೋಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ನೇತೃತ್ವದಲ್ಲಿ ವರ್ತಕರು, ಸಾರ್ವಜನಿಕರು, ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸಭೆ ನಡೆಸಿ ಒಮ್ಮತದ ತೀರ್ಮಾನ ತೆಗೆದುಕೊಂಡ ಹಿನ್ನೆಲೆಯಲ್ಲಿ ಮಾಗಡಿ ಸ್ವಯಂ ಪ್ರೇರಿತ ಲಾಕ್ ಡೌನ್ ಯಶಸ್ವಿಯಾಗಿದೆ.