ಚನ್ನಪಟ್ಟಣ: ಬಸ್ ನಲ್ಲಿ ಕೆಮ್ಮಿದ್ದಕ್ಕೆ ಆಕ್ಷೇಪ; ವ್ಯಕ್ತಿಗೆ ಕೊರೊನಾ ಪರೀಕ್ಷೆ
ರಾಮನಗರ, ಮಾರ್ಚ್ 21: ಚನ್ನಪಟ್ಟಣ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕೊರೊನಾ ಲಕ್ಷಣವಿರುವ ವ್ಯಕ್ತಿಯೊಬ್ಬರು ಇಂದು ಬೆಳಿಗ್ಗೆ ಕಂಡುಬಂದಿದ್ದು, ನಂತರ ಅವರಿಗೆ ಸ್ಕ್ರೀನಿಂಗ್ ನಡೆಸಲಾಗಿದೆ.
ಇವರು ಮೈಸೂರಿನ ನೆಸ್ಲೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ಅಮೆರಿಕಾದಿಂದ ಬೆಂಗಳೂರಿಗೆ ವಾಪಸ್ಸಾಗಿರುವುದಾಗಿ ತಿಳಿದುಬಂದಿದೆ. ವಿಮಾನ ನಿಲ್ದಾಣದಲ್ಲಿ ಇವರ ಸ್ಕ್ರೀನಿಂಗ್ ಕೂಡ ಮಾಡಲಾಗಿದೆ. ಜೊತೆಗೆ ಅಲ್ಲಿಂದ ಖಾಸಗಿ ವಾಹನ ಮಾಡಿಕೊಂಡು ತೆರಳಲು ಸಿಬ್ಬಂದಿ ಸೂಚಿಸಿದ್ದಾರೆ.
ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರಿಗೆ ಕೊರೊನಾ ಸೋಂಕು
ಕೊಂಚ ಕೆಮ್ಮಿನಿಂದ ಬಳಲುತ್ತಿದ್ದ ಈ ವ್ಯಕ್ತಿ ಕೆಎಸ್ ಆರ್ ಟಿಸಿ ಬಸ್ ಹತ್ತಿ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದಾರೆ. ಚನ್ನಪಟ್ಟಣದಲ್ಲಿ ಈತ ಕೆಮ್ಮುತ್ತಿದ್ದುದನ್ನು ನೋಡಿ ಬಸ್ ನಲ್ಲಿದ್ದ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಅವರನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಆತ ದಾಖಲು ಮಾಡಿ ಅಲ್ಲಿ ಸ್ಕ್ರೀನಿಂಗ್ ನಡೆಸಿದ ನಂತರ ಸಿಬ್ಬಂದಿ ನಂಜನಗೂಡಿಗೆ ಕಳುಹಿಸಿಕೊಟ್ಟಿದ್ದಾರೆ. ಈ ವ್ಯಕ್ತಿ ಮೂಲತಃ ಕೇರಳದವರು ಎನ್ನಲಾಗಿದೆ.
ಜೊತೆಗೆ ವಿಮಾನ ನಿಲ್ದಾಣದಲ್ಲಿ ಇವರ ಎಡಗೈ ಮೇಲೆ ಸೀಲ್ ಕೂಡ ಹಾಕಲಾಗಿದೆ.