ಕೊರೊನಾ ಲಾಕ್ ಡೌನ್: ಚನ್ನಪಟ್ಟಣದಲ್ಲಿ ಅತಂತ್ರರಾದ ಕಾರ್ಮಿಕರು
ರಾಮನಗರ, ಮಾರ್ಚ್ 27: ಕೆಲಸಕ್ಕಾಗಿ ಚನ್ನಪಟ್ಟಣ ನಗರಕ್ಕೆ ವಲಸೆ ಬಂದ ಸುಮಾರು 2000 ಕಾರ್ಮಿಕರು ಕೊರೊನಾ ಎಪೆಕ್ಟ್ ನಿಂದಾಗಿ ಇತ್ತ ದಿನಗೂಲಿ ಇಲ್ಲದೇ, ಒಂದೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ನಮ್ಮನ್ನು ಊರಿ ಕಳಿಸಿಕೊಡಿ ಎಂದು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ನಗರದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಳ್ಳಾರಿ ಮೂಲದ ಜನರು ವಲಸೆ ಬಂದು ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಒಂದೆಡೆ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಊರಿಗೆ ವಾಪಸು ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ, ಮತ್ತೊಂದೆಡೆ ಕೆಲಸ ಇಲ್ಲದೇ ತಮ್ಮ ತಮ್ಮ ಜೊಪಡಿಗಳಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಲಿ ಇಲ್ಲದ ಕಾರಣ ಒಂದೊತ್ತಿನ ಊಟಕ್ಕೂ ಇವರು ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇದನ್ನೆಲ್ಲ ಮನಗಂಡ ಕೆಲ ಸಂಘಟನೆ ಮತ್ತು ಸಂಘ ಸಂಸ್ಥೆಗಳು ಉತ್ತರ ಕರ್ನಾಟಕದ ಕಾರ್ಮಿಕರ ಸಂಕಷ್ಟಕ್ಕೆ ಆಹಾರ ಧಾನ್ಯ ವಿತರಿಸಿ ಆಸರೆಯಾಗಿದ್ದಾರೆ. ಆದರೂ ನಾಳಿನ ಊಟಕ್ಕೆ ಏನು ಮಾಡುವುದು ಎಂಬ ಚಿಂತೆ ಕೂಲಿ ಕಾರ್ಮಿಕರಿಗಿದೆ.
ಇಂದು ಚನ್ನಪಟ್ಟಣ ನಗರಸಭೆ ಆಯುಕ್ತ ಶಿವನಾಂಕರೀಗೌಡ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಕಷ್ಟ ಅವಲೋಕಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ಮೂಲದವರು ತಮ್ಮನ್ನು ನಮ್ಮ ಊರಿಗೆ ಕಳಿಸಿಬಿಡಿ ಎಂದರು.
ನಾವು ನಮ್ಮ ಊರಿಗೆ ಹೋಗಿ ಬದುಕು ನಡೆಸುತ್ತೇವೆ ಎಂದು ನಗರಸಭೆ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಇತ್ತ ನಗರಸಭೆ ಕಮಿಷನರ್ ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಭರವಸೆ ನೀಡಿದರು.