ಭಾರೀ ಟಕ್ಕರ್ ಇರುವ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕುಕ್ಕರ್ ವಶ
ರಾಮನಗರ, ಏಪ್ರಿಲ್ 10: ಇಲ್ಲಿನ ಕನಕಪುರ ತಾಲೂಕಿನ ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಗಳನ್ನು ವಶಪಡಿಸಿಕೊಂಡಿರುವ ಜಾಗೃತ ದಳದ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಮನಗರದಲ್ಲಿ ಕುಮಾರಸ್ವಾಮಿ ವಿರುದ್ಧ ತೇಜಸ್ವಿನಿ ಸ್ಪರ್ಧೆ?
ಚುನಾವಣಾ ಕಂಟ್ರೋಲ್ ರೂಂಗೆ ಬಂದ ಕರೆಯನ್ನು ಆಧರಿಸಿ ಮಧ್ಯರಾತ್ರಿಯಲ್ಲಿ ಚುನಾವಣಾ ಸಂಚಾರಿ ಜಾಗೃತಿ ದಳ ದಾಳಿ ನಡೆಸಿ, ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ಗಳನ್ನು ವಶಪಡಿಸಿಕೊಂಡಿದೆ. ಕಾರ್ಯಾಚರಣೆಯಲ್ಲಿ ದೊರೆತಿರುವ ಕುಕ್ಕರ್ ಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣಾ ಅಕ್ರಮಗಳಿಗೆ ಸಾಕ್ಷಿ ಒದಗಿಸಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಮರಳವಾಡಿ ಹೋಬಳಿಯ ಸುಂಡಗಟ್ಟ ಮತ್ತು ಬೆಟ್ಟೆಗೌಡನದೊಡ್ಡಿ ಗ್ರಾಮಗಳ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಕುಕ್ಕರ್ ಗಳನ್ನು ತಂಡ ವಶಪಡಿಸಿಕೊಂಡಿದೆ. ಇನ್ನು ಕುಕ್ಕರ್ ಹಂಚುತ್ತಿದ್ದವರು ಅಧಿಕಾರಿಗಳನ್ನು ಕಂಡು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ಕುರಿತು ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದ ಹಾಗೆ, ಈ ದಾಳಿ ಕಾರ್ಯಾಚರಣೆಯಲ್ಲಿ ಸಂಚಾರಿ ಜಾಗೃತ ದಳದ ಅಧಿಕಾರಿ ರಾಜೇಶ್ ಬಾಬುರಾವ್ ಚಂದರಗಿ, ತಹಸೀಲ್ದಾರ್ ಮಾರುತಿ ಪ್ರಸನ್ನ ಮುಂತಾದವರು ಭಾಗವಹಿಸಿದ್ದರು.