ಟೊಯೋಟಾ ನೌಕರರ ಧರಣಿ 6ನೇ ದಿನಕ್ಕೆ, ಸರ್ಕಾರ ಮಧ್ಯ ಪ್ರವೇಸುವಂತೆ ಕಾರ್ಮಿಕರ ಆಗ್ರಹ
ರಾಮನಗರ, ನವೆಂಬರ್ 14: ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ.
ಕಂಪನಿಯ ಮ್ಯಾನೇಜ್ಮೆಂಟ್ ಹಾಗೂ ಕಾರ್ಖಾನೆ ನೌಕರರ ನಡುವೆ ಉಲ್ಬಣಗೊಂಡಿರುವ ಸಮಸ್ಯೆ ತಾರಕಕ್ಕೆರಿದ್ದರೂ, ಸರ್ಕಾರ ಮಾತ್ರ ಇನ್ನು ಮಧ್ಯ ಪ್ರವೇಶ ಮಾಡದೆ ನಿರಾಸಕ್ತಿ ತೋರುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.
ಟೊಯೊಟಾ ಕಾರ್ಮಿಕರ ಪ್ರತಿಭಟನೆಗೆ ರಾಜ್ಯ ರೈತ ಸಂಘದ ಸಾಥ್
ಆಡಳಿತ ಮಂಡಳಿಯ ದೌರ್ಜನ್ಯದ ವಿರುದ್ಧ ಪ್ರತಿಭಟಿಸುತ್ತಿರುವ ಕಂಪನಿಯ ಸುಮಾರು 3500 ಕಾರ್ಮಿಕರು ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಕೋವಿಡ್-19 ಆರಂಭದಿಂದಲೂ ಕಂಪನಿ ಕಾರ್ಮಿಕರನ್ನು ಪಶುಗಳಂತೆ ನಡೆಸಿಕೊಳ್ಳುತ್ತಿದೆ. ಕೆಲಸ ಮಾಡಲು ಅಸಾಧ್ಯವಾದ ರೀತಿಯಲ್ಲಿ ಕಾರ್ಮಿಕರ ಮೇಲೆ ಒತ್ತಡ ಹೇರಿ, ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿ ದುಡಿಸಿಕೊಳ್ಳುತ್ತಿದೆ ಎಂದು ಕಾರ್ಮಿಕರು ಆರೋಪಗಳ ಸುರಿಮಳೆಗೆಯ್ಯುತ್ತಿದ್ದಾರೆ.
ಕಾರ್ಮಿಕ ಕಷ್ಟದಲ್ಲಿ ನರಳಾಡುತ್ತಿದ್ದರೂ ಕೇಳಿಸಿಕೊಳ್ಳುತ್ತಿಲ್ಲ
ಬಹುರಾಷ್ಟ್ರೀಯ ಕಂಪನಿಗಳನ್ನು ದೇಶಕ್ಕೆ ಕರೆತಂದು ತೆರಿಗೆ, ಕಂದಾಯ ರಹಿತ ಭೂಮಿ, ಸಕಲ ಸೌಲಭ್ಯಗಳನ್ನು ನೀಡುವ ಆಳುವ ವರ್ಗ ಒಂದು ಕಡೆಯಾದರೆ, ಅದೇ ಬ್ಯಾಂಕುಗಳು ಆತನ ಸಾಲವನ್ನು ಮನ್ನಾ ಮಾಡಿ ಮತ್ತೆ ಹೊಸ ಸಾಲ ನೀಡಲು ಹಾತೊರೆಯುತ್ತಿವೆ. ಆದರೆ ಅದೇ ಕಾರ್ಮಿಕ ಕಷ್ಟದಲ್ಲಿ ನರಳಾಡುತ್ತಿದ್ದರೂ, ಅವರ ಧ್ವನಿ ಕೇಳಿಸಿಕೊಳ್ಳುವ ಸಾಮಾನ್ಯ ಪ್ರಜ್ಞೆಯೂ ಯಾರಿಗೂ ಇರುವುದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಸದ್ಯ ಟೊಯೋಟಾ ಕಾರ್ಖಾನೆಯಲ್ಲಿ ಉದ್ಭವವಾಗಿರುವ ಅರಾಜಕತೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಪಾನ್ ಮೂಲದ ಕಂಪನಿ
ಕಂಪನಿಯಲ್ಲಿ ಮಲ-ಮೂತ್ರ ವಿಸರ್ಜನೆಗೆ ಹೋದರೂ ಸಂಬಳ ಕಟ್, ಅಕ್ಕ-ಪಕ್ಕ ತಿರುಗಿದರೂ ಸಂಬಳ ಕಟ್, ಒಂದೆರಡು ನಿಮಿಷ ತುರ್ತು ಪೋನ್ ಕರೆಗೆ ಓಗೊಟ್ಟರೂ ಸಂಬಳ ಕಟ್. ಒಟ್ಟಿನಲ್ಲಿ ಟೊಯೊಟಾ ಕಾರ್ಖಾನೆಯಲ್ಲಿ ನಿಂತರೂ ಸಂಬಳ ಕಟ್, ಕುಳಿತರೂ ಸಂಬಳ ಕಟ್. ತಮ್ಮದು ಜಪಾನ್ ಮೂಲದ ಕಂಪನಿಯಾಗಿದ್ದು, ತಾವೂ ಅಲ್ಲಿನ ನಿಯಮವನ್ನಷ್ಟೇ ಪಾಲಿಸಬೇಕು ಎಂಬ ಉದ್ಧಟತನದ ವರ್ತನೆಗಳು ಕಾರ್ಖಾನೆಯ ಆಡಳಿತ ಮಂಡಳಿಯಿಂದ ವ್ಯಕ್ತವಾಗುತ್ತಿರುವುದು ಕೂಡ ಟಿಕೆಎಂಇ ಯೂನಿಯನ್ ಪ್ರತಿಭಟನೆಗೆ ಕಾರಣವಾಗಿದೆ.
ಕಾರ್ಮಿಕ ಧರಣಿಗೆ ಹಲವು ಸಂಘಟನೆಗಳ ಬೆಂಬಲ
ಒಂದು ಕಡೆ ಕಾರ್ಮಿಕರ ಹೋರಾಟಕ್ಕೆ ಹೀಗಾಗಲೇ ರೈತ ಸಂಘ ಹಾಗೂ ಸಿಐಟಿಯು ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿ ಹೋರಾಟದಲ್ಲೂ ಪಾಲ್ಗೊಂಡಿವೆ. ಆದರೆ ಜಿಲ್ಲೆಯ ಘಟಾನುಘಟಿ ರಾಜಕಾರಣಿಗಳು ಮತ್ತು ಸರ್ಕಾರ ನಿದ್ರೆಗೆ ಜಾರಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದರು.
ದೌರ್ಜನ್ಯ ಇತರ ಕಂಪನಿಗಳಲ್ಲಿ ಹೆಚ್ಚಾಗುತ್ತದೆ
ರಾಜ್ಯ ಸರ್ಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆದು, ನೆಲದ ಕಾನೂನಿಗೆ ಗೌರವ ಕೊಡದೇ ನೌಕರರನ್ನು ಹಿಂಸಿಸುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿಗೆ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವರ್ಗ ಬಿಸಿ ಮುಟ್ಟಿಸದೇ ಹೋದರೆ, ಮುಂದಿನ ದಿನಗಳಲ್ಲಿ ಇಂತಹ ದೌರ್ಜನ್ಯ ಇತರ ಕಂಪನಿಗಳಲ್ಲಿ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ.
Recommended Video