ರಾಮನಗರ ನಗರಸಭೆ 'ಕೈ' ವಶ, ಚನ್ನಪಟ್ಟಣ 'ತೆನೆ' ಪಾಲು: ಬಿಜೆಪಿಗೆ ಮುಖಭಂಗ
ರಾಮನಗರ, ಏಪ್ರಿಲ್ 30: ರಾಮನಗರ ಮತ್ತು ಚನ್ನಪಟ್ಟಣ ಎರಡು ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಮನಗರ ನಗರಸಭೆ ಕಾಂಗ್ರೆಸ್ ವಶವಾದರೆ, ಚನ್ನಪಟ್ಟಣ ನಗರಸಭೆ ಜೆಡಿಎಸ್ ಪಾಲಾಗಿದೆ.
ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಚುನಾವಣೆ 3 ರಾಜಕೀಯ ಪಕ್ಷಗಳ ಮುಖಂಡರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿತು. ಇಂದು ಫಲಿತಾಂಶ ಹೊರ ಬಂದಿದ್ದು, ರಾಮನಗರ ನಗರಸಭೆಯ 31 ವಾರ್ಡ್ಗಳ ಪೈಕಿ ಕಾಂಗ್ರೆಸ್ 19, ಜೆಡಿಎಸ್ 11, ಪಕ್ಷೇತರ -1 ಸ್ಥಾನಗಳಲ್ಲಿ ಅಭ್ಯರ್ಥಿಗಳು ಗೆಲವು ಸಾದಿಸಿದ್ದಾರೆ.
ಸಿಎಂ ತವರು ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ
ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ಪಕ್ಷ ಒಂದೂ ಸ್ಥಾನವನ್ನು ಗಳಿಸದೇ, ಕೆಲವು ವಾರ್ಡ್ಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಸ್ವತಃ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಚುನಾವಣಾ ಪ್ರಚಾರ ನಡೆಸಿದರೂ ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ.
ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಂಗವಾಗಿದ್ದು, ಹಾಲಿ ಶಾಸಕಿಯಾಗಿ ಅನಿತಾ ಕುಮಾರಸ್ವಾಮಿ ಇದ್ದರೂ, ಜೆಡಿಎಸ್ ಪಕ್ಷ ಕೇವಲ 11 ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಇನ್ನೂ ಚನ್ನಪಟ್ಟಣ ನಗರಸಭೆ ಜೆಡಿಎಸ್ ಪಾಲಾಗಿದ್ದು, 31 ವಾರ್ಡ್ಗಳ ಪೈಕಿ 16 ವಾರ್ಡ್ಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಾಂಗ್ರೆಸ್-7, ಬಿಜೆಪಿ-7 ಓರ್ವ ಪಕ್ಷೇತರ ಅಭ್ಯರ್ಥಿ ಗೆಲವು ಪೆಡೆದಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ ಯೋಗೇಶ್ವರ್ ಕೂಡ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಡೊಂಕಕಟ್ಟಿ ನಿಂತಿದ್ದರು. ಆದರೆ 7 ಸ್ಥಾನಕ್ಕಷ್ಟೇ ತೃಪ್ತಿಪಡಬೇಕಾಗಿದೆ.
ಇನ್ನು ಚುನಾವಣೆಯ ವಿಪರ್ಯಾಸವೆಂದರೆ ಕೊರೊನಾದಿಂದ ನಿಧನ ಹೊಂದಿದ ನಾಲ್ಕನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಗೆಲುವು ಸಾಧಿಸಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ಲೀಲಾ ಅವರು, ಮತ ಏಣಿಕೆಗೆ ಒಂದು ದಿನ ಇರುವಂತೆ ನಿಧನ ಹೊಂದಿದ್ದರು.
Recommended Video
ನಿರೀಕ್ಷೆಯಂತೆ ಚುನಾವಣೆಯಲ್ಲಿ ಲೀಲಾವರು ಪ್ರತಿ ಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ವಿರುದ್ದ 810 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಂಭ್ರಮಾಚರಣೆ ನಡೆಯಬೇಕಿದ್ದ ಮನೆಯಲ್ಲಿ ಲೀಲಾ ಅವರನ್ನು ಕಳೆದುಕೊಂಡು ಶೋಕ ಆವರಿಸಿದೆ.