ರಾಮನಗರ ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ
ರಾಮನಗರ, ಮೇ 20: ಇಂದು ನಡೆದ ರಾಮನಗರ ತಾಲ್ಲೂಕು ಪಂಚಾಯತಿ ಅಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಭದ್ರಯ್ಯ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದೆ.
Recommended Video
ಚನ್ನಮಾನಹಳ್ಳಿ ತಾ.ಪಂ ಕ್ಷೇತ್ರದ ಜೆಡಿಎಸ್ ಸದಸ್ಯ ಭದ್ರಯ್ಯ ಕಾಂಗ್ರೆಸ್ ಬೆಂಬಲಿತರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಭದ್ರಯ್ಯ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಭದ್ರಯ್ಯ ಅವಿರೋಧ ಆಯ್ಕೆಯಾಗಿದ್ದಾರೆಂದು, ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಘೋಷಿಸಿದರು.
ಮಂಡ್ಯದಲ್ಲಿ ಸೋಂಕು ಹೆಚ್ಚಳಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ: ಎಚ್ಡಿಕೆ
14 ಸದಸ್ಯ ಬಲದ ತಾ.ಪಂ ನಲ್ಲಿ 8 ಸ್ಥಾನದಲ್ಲಿ ಜೆಡಿಎಸ್ ಮತ್ತು 6 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇನ್ನು ಉಳಿಕೆ ಒಂದು ವರ್ಷದ ಅವಧಿಗೆ ನಡೆದ ಚುನಾವಾಣೆಯಲ್ಲಿ ಜೆಡಿಎಸ್ ನ ಸದಸ್ಯರುಗಳಾದ ಭದ್ರಯ್ಯ, ಜಗದೀಶ್ ರನ್ನ ತನ್ನತ್ತ ಸೆಳೆದು ತಾ.ಪಂ ಅಧಿಕಾರದ ಗದ್ದುಗೆ ಎರಲು ಯಶಸ್ವಿಯಾಗಿದೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಿಕ್ಕ ಅವಕಾಶಗಳೆಲ್ಲವನ್ನೂ ಕಾಂಗ್ರೆಸ್ ಬಳಸಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಸ್ಥಳೀಯ ಮಟ್ಟದ ಚುನಾವಾಣೆಗಳಲ್ಲೂ ಪ್ರಾಬಲ್ಯ ಮೆರೆಯಲು ಯಾವ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಸಾಬೀತುಪಡಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ತಾ.ಪಂ ಅಧ್ಯಕ್ಷ ಭದ್ರಯ್ಯ ಅವರನ್ನು, ಎಂಎಲ್ಸಿ ಸಿ.ಎಂ ಲಿಂಗಪ್ಪ, ಮಾಜಿ ಶಾಸಕ, ಎಚ್.ಸಿ ಬಾಲಕೃಷ್ಣ, ಜಿ.ಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಸೇರಿದಂತೆ ಎಲ್ಲಾ ಸದಸ್ಯರು ಮತ್ತು ಮುಖಂಡರು ಅಭಿನಂದಿಸಿದರು.