ರಾಮನಗರದಲ್ಲಿ ಜೂನ್1ಕ್ಕೆ ರಾಜೀವ್ ಗಾಂಧಿ ವಿವಿ ಕ್ಯಾಂಪಸ್ ಶಂಕುಸ್ಥಾಪನೆ
ರಾಮನಗರ, ಜನವರಿ 26: ಕಳೆದ 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ, ಜಿಲ್ಲೆಯ ಜನರ ಬಹುದಿನದ ಕನಸಾದ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಜೂನ್ 1ರಂದು ಶಂಕುಸ್ಥಾಪನೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಡಿಸಿಎಂ ಡಾ.ಅಶ್ವಥ್ ನಾರಾಯಣ್, "ಜೂನ್ 1 ರಂದು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ 25ನೇ ವರ್ಷದ ಬೆಳ್ಳಿಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅಂದೇ ರಾಮನಗರದಲ್ಲಿ ರಾಜೀವ್ ಗಾಂಧಿ ವಿವಿ ಕ್ಯಾಂಪಸ್ ಶಂಕುಸ್ಥಾಪನೆ ನೆರವೇರಿಸಲಾಗುವುದು" ಎಂದರು.
ಸಂಪುಟ ವಿಸ್ತರಣೆ ವಿಳಂಬವಾಗಿರುವುದು ನಿಜ: ಡಾ. ಅಶ್ವಥ್ನಾರಾಯಣ
ರಾಜೀವ್ ಗಾಂಧಿ ವಿವಿ ಜೊತೆಗೆ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಮಾಡುವ ಮೂಲಕ ಜಿಲ್ಲೆಯನ್ನು ಹೆಲ್ತ್ ಸಿಟಿಯಾಗಿ ನಿರ್ಮಾಣ ಮಾಡುವ ಗುರಿ ಇದೆ. ಈ ಕೆಲಸದಿಂದ ಸಾವಿರಾರು ಜನರಿಗೆ ಉದ್ಯೋಗ, ಶಿಕ್ಷಣ ಸಿಗಲಿದೆ ಎಂದರು.
ಇದೇ ಸಂದರ್ಭ, ಚನ್ನಪಟ್ಟಣ ಗೊಂಬೆಗಳ ಉದ್ಯಮ ನಶಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ್, "ರಾಮನಗರ - ಚನ್ನಪಟ್ಟಣದ ಮಧ್ಯೆ ಆರ್ಟ್ ಅಂಡ್ ಕ್ರಾಫ್ಟ್ ವಿಲೇಜ್ ನಿರ್ಮಿಸುವ ಬಗ್ಗೆ ಜಿಲ್ಲಾಧಿಕಾರಿಗಳೂಂದಿಗೆ ಚರ್ಚೆ ನಡೆದಿದೆ. ಕ್ರಾಫ್ಟ್ ವಿಲೇಜ್ ನಿರ್ಮಾಣದಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಜಿಲ್ಲೆಯ ಕುಶಲಕರ್ಮಿಗಳ ಕಲಾಕೌಶಲ್ಯ ಉಳಿಯಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಬೊಂಬೆ ಉದ್ಯಮಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ" ಎಂದರು.