ಜು.13 ರಿಂದ 23ರವರೆಗೆ ಮಾಗಡಿ ಸಂಪೂರ್ಣ ಲಾಕ್ ಡೌನ್!
ರಾಮನಗರ, ಜುಲೈ 11: ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಾಗಡಿ ಪಟ್ಟಣವನ್ನು ಜುಲೈ 13ರ ಮಧ್ಯಾಹ್ನ 12 ಗಂಟೆಯಿಂದ ಜುಲೈ 23ರವರೆಗೆ ವೈದ್ಯಕೀಯ ಸೇವೆ ಹೊರತುಪಡಿಸಿ ಸಂಪೂರ್ಣ ಲಾಕ್ ಡೌನ್ ಮಾಡಲು ಜನಪ್ರತಿನಿಧಿಗಳ ಸಭೆ ನಿರ್ಧಾರ ಮಾಡಿದೆ ಎಂದು ಶಾಸಕ ಎ.ಮಂಜು ಘೋಷಿಸಿದರು.
Recommended Video
ಕ್ಷೇತ್ರದ ಶಾಸಕರಾದ ಎ. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಮಾಗಡಿ ಪುರಸಭಾ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಕೊರೊನಾ ನಿಯಂತ್ರಣ ಹಾಗೂ ಅಗತ್ಯ ಸೇವೆಗಳ ಬಗ್ಗೆ ಅಧಿಕಾರಿಗಳು ಹಾಗೂ ಪುರಸಭಾ ಸದಸ್ಯರು, ವರ್ತಕ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಲಾಕ್ ಡೌನ್ ಸಂಬಂಧ ಈ ನಿರ್ಣಯ ಕೈಗೊಂಡರು.
ಜಿಲ್ಲೆಯಲ್ಲಿ ಇಂದು ಕೂಡ 30 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ. ಮಾಗಡಿ 9, ಚನ್ನಪಟ್ಟಣ 14, ಕನಕಪುರ 3 ಮತ್ತು ರಾಮನಗರದಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.
ರಾಮನಗರ: ಕೊರೊನಾ ವೈರಸ್ ಗೆ ಟೊಯೊಟಾ ಕಾರ್ಮಿಕ ಬಲಿ, ಕಂಪನಿಯಲ್ಲಿ ಹೆಚ್ಚಿದ ಭೀತಿ
ಜುಲೈ 23ರವರೆಗೆ ಸ್ವಯಂ ಲಾಕ್ ಡೌನ್
ಜುಲೈ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ನಿಯಂತ್ರಣದ ಸಲುವಾಗಿ ಮಾಗಡಿ ಪಟ್ಟಣವನ್ನು ಜುಲೈ 13 ರಿಂದ ಜುಲೈ 23ರವರೆಗೆ ದಿನದ ಪೂರ್ಣ ಅವಧಿ ಸ್ವಯಂ ಲಾಕ್ ಡೌನ್ ಘೋಷಣೆಯನ್ನು ಮಾಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಜನರ ಆರೋಗ್ಯದ ದೃಷ್ಟಿಯಿಂದ ಜನಪ್ರತಿನಿಧಿಗಳು, ವರ್ತಕರು ಹಾಗೂ ಸಾರ್ವಜನಿಕರ ಸಭೆಯ ತೀರ್ಮಾನಕ್ಕೆ ದಯವಿಟ್ಟು ಸಾರ್ವಜನಿಕರು ಸ್ಪಂದಿಸಬೇಕು, ಅಂಗಡಿ ಮುಗ್ಗಟ್ಟುಗಳನ್ನು ತೆರೆಯಬಾರದು ಮತ್ತು ಸಾರಿಗೆ ವ್ಯವಸ್ಥೆ ಸ್ವಯಂಪ್ರೇರಣೆಯಿಂದ ಬಂದ್ ಮಾಡಿ ಸಹಕರಿಸಬೇಕಾಗಿ ಶಾಸಕ ಎ.ಮಂಜು ಜನರಲ್ಲಿ ಮನವಿ ಮಾಡಿದ್ದಾರೆ.
ಮಾಗಡಿಯಲ್ಲಿ ಸೋಂಕಿಗೆ 7 ಮಂದಿ ಬಲಿ
ರಾಮನಗರದ ಮಾಗಡಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿಗೆ 7 ಮಂದಿ ಬಲಿಯಾಗಿದ್ದು, 60 ಜನರಲ್ಲಿ ಸೋಂಕು ಪತ್ತೆಯಾಗಿದೆ. ತಾಲೂಕಿನಲ್ಲಿ ಮಿತಿ ಮೀರುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಬೇಕಾದರೆ ಜನರೇ ಸ್ವಯಂಪ್ರೇರಣೆಯಿಂದ ಲಾಕ್ ಡೌನ್ ಗೆ ಸಹಕಾರ ನೀಡಬೇಕೆಂದು ಶಾಸಕ ಎ.ಮಂಜುನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಟೊಯೋಟಾ ಕಂಪನಿ, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ ಕಾರ್ಮಿಕ ಸಂಘಟನೆ
ದಿನಸಿ, ತರಕಾರಿ ಅಂಗಡಿಗಳೂ ಕ್ಲೋಸ್
ಜುಲೈ 13 ಮಧ್ಯಾಹ್ನ 12 ಗಂಟೆಯೊಳಗೆ ದಿನಸಿ, ತರಕಾರಿಗಳನ್ನು ನಾಗರೀಕರು ಖರೀದಿಸಬಹುದು. ಮಿಕ್ಕಂತೆ 11 ದಿನಗಳ ಕಾಲ ದಿನಸಿ, ತರಕಾರಿ ಅಂಗಡಿ ಮುಗ್ಗಟ್ಟುಗಳು ಕೂಡ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಔಷಧಿ ಅಂಗಡಿಗಳು ಮತ್ತು ಕ್ಲಿನಿಕ್ ಗಳು ಮಾತ್ರ ತೆರೆದಿರುತ್ತವೆ ಎಂದು ಮಾಹಿತಿ ನೀಡಿದರು.
ಮಾಗಡಿಯಿಂದ ಹೊರ ಹೋಗುವಂತಿಲ್ಲ
ಜುಲೈ 13 ರಿಂದ ಮಾಗಡಿಯಿಂದ ಯಾರೊಬ್ಬರೂ ಬೇರೆಡೆ ಪ್ರಯಾಣ ಬೆಳೆಸುವಂತಿಲ್ಲ. ಬೇರೆಡೆಯಿಂದ ಬರುವವರು ಮಾಗಡಿಗೆ ಪ್ರವೇಶ ಮಾಡಲು ಅವಕಾಶವಿಲ್ಲ. ಈ ನಿರ್ಣಯಕ್ಕೆ ಎಲ್ಲರೂ ಸಹಕರಿಸಬೇಕೆಂದು ಶಾಸಕ ಎ.ಮಂಜುನಾಥ್ ಜನರಲ್ಲಿ ಮನವಿ ಮಾಡಿದ್ದಾರೆ.