ಚನ್ನಪಟ್ಟಣದಲ್ಲೇ ಯೋಗೇಶ್ವರ್ ಜನ್ಮ ಜಾಲಾಡಿದ ಸಿದ್ದರಾಮಯ್ಯ
ಚನ್ನಪಟ್ಟಣ, ಜನವರಿ 03: ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಅವರು ಕ್ಷೇತ್ರದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ಚನ್ನಪಟ್ಟಣದಲ್ಲಿ ಆಯೋಜಿಸಿದ್ದ ನವಕರ್ನಾಟಕ ನಿರ್ಮಾಣ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏತ ನೀರಾವರಿ ಯೋಜನೆ, ಕಣ್ವ ನೀರಾವರಿ ಯೋಜನೆಗೆ ಅನುದಾನ ನೀಡಿದ್ದು ನಾನು ಆದರೆ ಯೋಗೇಶ್ವರ್ ಅವರು ಬಿಜೆಪಿ ಸರ್ಕಾರ ಇದ್ದಾಗ ಯೋಜನೆ ಮಾಡಿಸಿದ್ದೇನೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ
ಸಿ.ಪಿ.ಯೋಗೇಶ್ವರ್ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು ಆದರೆ ಅವರು ಬೇಕೆಂದೇ ಬಂದಿಲ್ಲ, ಬಂದರೆ ಸುಳ್ಳು ಸಿಕ್ಕಿಹಾಕಿಕೊಳ್ಳತ್ತದೆ ಎಂದು ಅವರು ಗೈರಾಗಿದ್ದಾರೆ ಎಂದು ಅವರು ಹೇಳಿದರು.
ಸಿ.ಪಿ ಯೋಗೇಶ್ವರ್ ಅವರಿಗಿಂತಲೂ ಈ ಕ್ಷೇತ್ರಕ್ಕೆ ಹಾಗೂ ರಾಮನಗರ ಜಿಲ್ಲೆಗೆ ಹೆಚ್ಚಿನ ಕಾರ್ಯ ಮಾಡಿರುವುದು ಡಿ.ಕೆ.ಸುರೇಶ್ ಮತ್ತು ಶಿವಕುಮಾರ್ ಎಂದು ಸಿದ್ದರಾಮಯ್ಯ ಅವರು ಡಿಕೆಎಸ್ ಸೋದರರನ್ನು ಹೊಗಳಿದರು.
ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡ ಚನ್ನಪಟ್ಟಣ ಶಾಸಕ ಯೋಗೇಶ್ವರ್ ಅವರನ್ನು ಹಾಗೂ ಬಿಜೆಪಿ ಪಕ್ಷದ ಮೇಲೆ ಸಿದ್ದರಾಮಯ್ಯ ಅವರು ಹರಿಹಾಯ್ದರು.
ಒಂದು ಪ್ರಶ್ನೆಯನ್ನೂ ಕೇಳಿಲ್ಲ
ಸಿ.ಪಿ.ಯೋಗೇಶ್ವರ್ ಅವರು ವಿಧಾನಸಭೆ ಕಲಾಪಕ್ಕೆ ಬರುವುದೇ ಅಪರೂಪ ಎಂದ ಸಿದ್ದರಾಮಯ್ಯ ಯೋಗೇಶ್ವರ್ ಅವರು ಈ ವರೆಗೆ ಕಲಾಪದಲ್ಲಿ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಕನಿಷ್ಟ ಪಕ್ಷ ತಮ್ಮ ಕ್ಷೇತ್ರಕ್ಕೆ ಅನುದಾನವನ್ನೂ ಸಹ ಯೋಗೇಶ್ವರ್ ಅವರು ಕೇಳಿರಲಿಲ್ಲ ಎಂದು ಅವರು ಹೇಳಿದರು.
'ನಾನು ಬಿಜೆಪಿ ಸೇರಿದ ದಿನದಿಂದ ಕಾಂಗ್ರೆಸ್ಸಿನಿಂದ ಕಿರುಕುಳ ಹೆಚ್ಚಾಗಿದೆ'
ಜೈಲಿಗೆ ಬೀಗತನಕ್ಕೆ ಹೋಗಿದ್ರಾ
ಯಡಿಯೂರಪ್ಪ ಅವರ ಮೇಲೆ ಹರಿಹಾಯ್ದ ಸಿದ್ದರಾಮಯ್ಯ ಅವರು ಕರ್ನಾಟಕದ ಇತಿಹಾಸದಲ್ಲಿ ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬರೆ ಎಂದರು. ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಜನಾರ್ಧನ ರೆಡ್ಡಿ, ಹಾಲಪ್ಪ, ಆನಂದ್ ಸಿಂಗ್, ಸುರೇಶ್ ಪ್ರಭು ಇವರೆಲ್ಲರೂ ಜೈಲಿಗೆ ಹೋಗಿದ್ದರು, ಇವರೇನು ಜೈಲಿಗೆ ಬೀಗಸ್ತನ ಮಾಡಲು ಹೋಗಿದ್ದರಾ? ಎಂದು ಸಿದ್ದರಾಮಯ್ಯ ಅವರು ವ್ಯಂಗ್ಯ ಮಾಡಿದರು.
ಅನಂತ್ ಕುಮಾರ್ ಹೆಗಡೆ ಗೆಲ್ಲಬಾರದು
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮೇಲೂ ಹರಿಹಾಯ್ದ ಸಿದ್ದರಾಮಯ್ಯ ಅವರು ಅಮಿತ್ ಶಾ ಕರ್ನಾಟಕ್ಕೆ ಬರುವುದು ಇಲ್ಲಿ ಬೆಂಕಿ ಹಚ್ಚಲಷ್ಟೆ, ಅವರು ಈಗಾಗಲೇ ಮಂಗಳೂರು, ದಕ್ಷಿಣ ಕನ್ನಡ, ಹುಣಸೂರಿನಲ್ಲಿ ಕೋಮು ಬೆಂಕಿ ಹಚ್ಚಿಬಿಟ್ಟಿದ್ದಾರೆ ಎಂದರು. ಚುನಾವಣೆ ಗೆಲ್ಲಲು ಗಲಭೆ ಮಾಡಲು ತಮ್ಮ ಬಿಜೆಪಿ ಸಂಸದರಿಗೆ, ಶಾಸಕರಿಗೆ ಅಮಿತ್ ಶಾ ಹೇಳಿಕೊಟ್ಟಿದ್ದಾರೆ, ಇವರೆಂಥಾ ರಾಷ್ಟ್ರಾಧ್ಯಕ್ಷ ಎಂದು ಅವರು ಪ್ರಶ್ನೆ ಮಾಡಿದರು. ಅನಂತ್ ಕುಮಾರ್ ಹೆಗಡೆ ಅಂತ ಕೋಮುವಾದಿ ಮನಸ್ಸುಗಳನ್ನು ಚುನಾವಣೆಯಲ್ಲಿ ಸೋಲಿಸಿ ಬುದ್ಧಿ ಕಲಿಸಬೇಕು ಎಂದು ಅವರು ಹೇಳಿದರು.
ನಾಡಗೀತೆಯ ಸಾಲುಗಳನ್ನು ಹಾಡಿದ ಸಿದ್ದರಾಮಯ್ಯ
ತಮ್ಮ ಭಾಷಣದಲ್ಲಿ ಬಿ.ಆರ್.ಅಂಬೇಡ್ಕರ್ ಹಾಗೂ ಕುವೆಂಪು ಅವರನ್ನು ಮುಖ್ಯಮಂತ್ರಿಗಳು ನೆನೆಸಿಕೊಂಡರು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆಗಳ ಬಗ್ಗೆ ಹೇಳಿದ್ದಾರೆ ಆದರೆ ಬಿಜೆಪಿಯವರು ಅಂಬೇಡ್ಕರ್ ಅವರ ಆದರ್ಶಗಳನ್ನು ಗಾಳಿಗೆ ತೂರಿದ್ದಾರೆ ಎಂದರು. ಕುವೆಂಪು ಅವರು ನಾಡಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಾಲುಗಳನ್ನು ಬರೆದಿದ್ದಾರೆ ಈ ಸಾಲುಗಳನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದ ಸಿದ್ದರಾಮಯ್ಯ ಅವರು ನಾಡಗೀತೆಯ ಕೆಲವು ಸಾಲುಗಳನ್ನು ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.
100% ಭರವಸೆ ಈಡೇರಿಸಿದ್ದೇವೆ
ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ನಾವು ನೀಡಿದ್ದ 165 ಭರವಸೆಗಳಲ್ಲಿ ಈಗಾಗಲೇ 155 ಭರವಸೆಗಳನ್ನು ಈಡೇರಿಸಿದ್ದೇವೆ. ಇನ್ನುಳಿದ ಭರವಸೆಗಳನ್ನು ಮಾರ್ಚ್ ಒಳಗೆ ಪೂರ್ಣಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಪ್ರತಿ ಬಾರಿ ಬಜೆಟ್ ತಯಾರಿ ಮಾಡಬೇಕಾದರೆ ಪ್ರಣಾಳಿಕೆ ಪಕ್ಕದಲ್ಲಿಟ್ಟುಕೊಂಡೇ ಬಜೆಟ್ ಮಾಡುತ್ತೇನೆ, ಈ ಬಾರಿ ಫೆಬ್ರುವರಿಯಲ್ಲಿ 6ನೇ ಬಜೆಟ್ ಮಂಡನೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.