ರಾಮನಗರದಲ್ಲಿ ಅನುಮಾನ ಹುಟ್ಟಿಸಿದ ಕೈ ನಾಯಕ ಲಿಂಗಪ್ಪ ನಡೆ!
ರಾಮನಗರ, ಅಕ್ಟೋಬರ್ 15: ಅದ್ಯಾಕೋ ಗೊತ್ತಿಲ್ಲ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾಕುಮಾರಸ್ವಾಮಿಗೆ ಇತ್ತೀಚೆಗಿನ ವರ್ಷಗಳಲ್ಲಿ ರಾಜಕೀಯ ಹಾದು ಬಂದಂತೆ ಕಾಣುತ್ತಿಲ್ಲ ಪರಿಣಾಮ ಗೆಲುವು ಮರೀಚಿಕೆಯಾಗುತ್ತಿದೆ.
ಅನಿತಾ ಕುಮಾರಸ್ವಾಮಿ ಗೆಲುವಿಗಾಗಿ 'ಬಿ' ಫಾರಂಗೆ ಪೂಜೆ ಸಲ್ಲಿಸಿದ ರೇವಣ್ಣ
ರಾಮನಗರ ಕ್ಷೇತ್ರದಿಂದ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸುಲಭವಾಗಿ ಗೆಲ್ಲಬಹುದು ಎಂಬ ಅವರ ಬಯಕೆ ಈಡೇರುವ ಲಕ್ಷಣಗಳು ಸದ್ಯಕ್ಕೆ ಕಂಡು ಬರುತ್ತಿಲ್ಲ. ಕಾರಣ ಕಾಂಗ್ರೆಸ್ನ ಮುಖಂಡ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪಾಲಿಗೆ ವಿಲನ್ ಆಗಿದ್ದಾರೆ.
ರಾಮನಗರ ಮತ್ತು ಚನ್ನಪಟ್ಟಣದಿಂದ ಸ್ಪರ್ಧಿಸಿ ಎರಡು ಕಡೆಯಲ್ಲಿಯೂ ಜಯಭೇರಿ ಸಾಧಿಸಿರುವ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮತ್ತೆ ನಡೆಯುವ ಉಪಚುನಾವಣೆಗೆ ಪತ್ನಿ ಅನಿತಾಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಸುಲಭವಾಗಿ ಗೆಲ್ಲಿಸಬಹುದು ಎಂಬ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಮುಖಂಡ ಲಿಂಗಪ್ಪ ಅವರು ಎಳ್ಳುನೀರು ಬಿಡಲು ಸಿದ್ದರಾಗಿದ್ದಾರೆ.
ಈಗಾಗಲೇ ಅವರ ಪುತ್ರ ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರೋದ್ರಿಂದ ಪುತ್ರನ ಗೆಲುವಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಾಂಗ್ರೆಸ್ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಂದು ಒತ್ತಾಯ ಮಾಡಿದ್ದರು ಆದರೆ ಕಾಂಗ್ರೆಸ್ ವರಿಷ್ಠರು ಅವರ ಮಾತಿಗೆ ಸೊಪ್ಪು ಹಾಕಿದಂತೆ ಕಾಣುತ್ತಿಲ್ಲ. ಹೀಗಾಗಿ ತಾನೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳುತ್ತಾ ಬರುತ್ತಿದ್ದು, ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಅವರ ನಿಲುವಿನ ಬಗ್ಗೆ ಕಾದು ನೋಡಬೇಕಾಗಿದೆ.
ರಾಮನಗರ ಉಪ ಚುನಾವಣೆ : ಕೊನೆ ಕ್ಷಣದಲ್ಲಿ ಬಿಜೆಪಿ ತಂತ್ರ ಬದಲು!
ಇದೀಗ ಕಾಂಗ್ರೆಸ್ನ ವರಿಷ್ಟರಿಗೆ ಸೆಡ್ಡು ಹೊಡೆದಿರುವ ಲಿಂಗಪ್ಪ ಅವರು ಪಕ್ಷದ ವರಿಷ್ಠರು ಜರುಗಿಸುವ ಕ್ರಮವನ್ನು ಎದುರಿಸಲು ಸಿದ್ಧರಿರುವುದಾಗಿಯೂ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ವರಿಷ್ಠರು ನಿರ್ಧರಿಸಿದ್ದಾರೆ, ಆದರೆ, ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಪಕ್ಷದ ಮತಗಳನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ವ್ಯಕ್ತಿಯೊಬ್ಬರು ಅಭ್ಯರ್ಥಿಯಾಗುವುದು ಅಗತ್ಯವಿದೆ, ಹೀಗಾಗಿ ಪಕ್ಷದ ವರಿಷ್ಠರು ನನ್ನ ವಿರುದ್ಧ ಯಾವುದೇ ಕ್ರಮಕೈಗೊಂಡರೂ ಬೇಸರವಿಲ್ಲ. ನೋಟಿಸ್ ನೀಡಿದರೆ ಸ್ವೀಕರಿಸುತ್ತೇನೆ. ಕಾರ್ಯಕರ್ತರ ಹಿತ ಕಾಪಾಡುವುದೇ ತಪ್ಪು ಎನ್ನುವುದಾದರೆ ಶಿಸ್ತು ಕ್ರಮ ಜರುಗಿಸುವಂತೆ ನೋಟಿಸ್ಗೆ ಉತ್ತರ ನೀಡುತ್ತೇನೆ.
ರಾಮನಗರ ಉಪ ಚುನಾವಣೆ : ನಿಟ್ಟುಸಿರು ಬಿಟ್ಟ ಕಾಂಗ್ರೆಸ್, ಜೆಡಿಎಸ್!
ಜೆಡಿಎಸ್ ಅಭ್ಯರ್ಥಿ ಪರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಚುನಾವಣೆಯಲ್ಲಿ ಪ್ರಚಾರ ಮಾಡಲ್ಲ, ಮತವೂ ಹಾಕಲ್ಲ ಎಂದಿದ್ದಾರೆ. ಇನ್ನೂ ಕೆಲವರು ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದು, ಪಕ್ಷ ತೊರೆಯಲೂ ಸಿದ್ಧರಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಮನೆಯಲ್ಲಿಯೇ ಒಡಕು ಶುರುವಾಗಿದೆ. ನನ್ನ ಹಿತವಚನಗಳನ್ನು ಮೀರಿ ನನ್ನ ಮಗ ಬಿಜೆಪಿ ಸೇರಿದ್ದಾನೆ.
ಪಕ್ಷ ದ ನಾಯಕರಾದ ವೇಣುಗೋಪಾಲ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ನಾವು ಎಲ್ಲಿಯೂ ಮಾತನಾಡಿಲ್ಲ. ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅನಿವಾರ್ಯತೆಯನ್ನು ಹೇಳುತ್ತಿದ್ದೇವೆ. ಇದನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೀಗಾಗಿ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸಿದರೆ ಅದು ಕಾಂಗ್ರೆಸ್ ಬಂಡಾಯ ಆಗುವುದಿಲ್ಲ. ಯಾವುದೇ ರಾಜಕೀಯ ಪಕ್ಷ ಸ್ಟ್ರಾಂಗು, ವೀಕ್ ಎನ್ನುವುದು ಕಾರ್ಯಕರ್ತರ ಶಕ್ತಿ ಮೇಲೆ ಅವಲಂಬಿಸಿರುತ್ತದೆ. ರಾಜಕೀಯ ಬೇಳೆ ಬೇಯಿಸಿಕೊಂಡಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದ ಎಂಬುದನ್ನು ಯಾರೂ ಮರೆಯಬಾರದು ಎಂದಿದ್ದಾರೆ.
ಸದ್ಯಕ್ಕೆ ಲಿಂಗಪ್ಪ ಅವರ ಮಾತು ಮತ್ತು ವರ್ತನೆ ಸದ್ಯಕ್ಕೆ ಅರ್ಥವಾದಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.