ಸಾಮಾಜಿಕ ಜಾಲತಾಣದಲ್ಲಿ ರಂಗೇರಿದ ಎಚ್ಡಿಕೆ-ಸಿಪಿವೈ ಅಭಿಮಾನಿಗಳ ಮಾತಿನ ಸಮರ
ರಾಮನಗರ, ಮಾರ್ಚ್ 2: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಹಾಲಿ ಸಚಿವ ಸಿಪಿ ಯೋಗೇಶ್ವರ್ ನಡುವಿನ ಮಾತಿನ ಸಮರ ಮುಗಿಯುವ ಹಂತ ಕಾಣಿಸುತ್ತಿಲ್ಲ. ವಾಕ್ ಸಮರ ಎರಡನೇ ಹಂತದ ನಾಯಕರನ್ನು ದಾಟಿ ಇದೀಗ ಇಬ್ಬರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಆರೋಪ-ಪ್ರತ್ಯಾರೋಪದ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ಮಾಜಿ ಸಿಎಂ ಹಾಲಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಎಚ್.ಡಿ ಕುಮಾರಸ್ವಾಮಿ ಹಾಗೂ ಹಾಲಿ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ನಡುವಿನ ಮಾತಿನ ಸಮರ, ಅವರ ಪಕ್ಷದ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರ ಮಟ್ಟಕ್ಕೆ ಇಳಿದು ಬಿಟ್ಟಿದೆ.
"ಮಾಜಿ ಸಿಎಂ ಎಚ್ಡಿಕೆ ಮಾತು ಮನಸ್ಸಿಗೆ ಘಾಸಿ ಮಾಡಿತ್ತು, ಅದಕ್ಕೆ ಟೀಕಿಸಿದೆ''
ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಹಾಗೂ ಟಿ.ಎ ಶರವಣ ಅವರು ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಾರೆ. ಇದು ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಕಣ್ಣು ಕೆಂಪಾಗುವಂತೆ ಮಾಡಿದೆ. ಜೆಡಿಎಸ್ ನಾಯಕರ ಮಾತಿನಿಂದ ಕೆಂಡಾಮಂಡಲವಾಗಿರುವ "ಸೈನಿಕನ' ಅಭಿಮಾನಿಗಳು, ಫೇಸ್ಬುಕ್ನಲ್ಲಿ ಸಾ.ರಾ ಮಹೇಶ್ ಹಾಗೂ ಶರವಣ ವಿರುದ್ಧ ತಿರುಗಿ ಬಿದ್ದಿದ್ದಾರೆ.
ನಮ್ಮ ನಾಯಕರ ವಿರುದ್ಧ ಮಾತನಾಡಲು ಅವರು ಯಾರು, ಅವರಿಗೆ ಅನೈತಿಕತೆ ಏನಿದೆ ಅಂತಾ ಪ್ರಶ್ನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾಲಿಗೆ ಹರಿಬಿಟ್ಟರೆ ಅವರ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ.
"ಇನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಸಿಪಿ ಯೋಗೇಶ್ವರ್ ಮಾತನಾಡುತ್ತಿರುವುದನ್ನು ನಿಲ್ಲಿಸಬೇಕು. ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅವರ ಬಗ್ಗೆ ಲಘುವಾಗಿ ಮಾತನಾಡಬಾರದು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಹೀಗೆ ಮುಂದೆ ನಮ್ಮ ನಾಯಕರ ವಿರುದ್ಧ ಸಿಪಿವೈ ನಾಲಿಗೆ ಹರಿಬಿಟ್ಟರೆ ತಾಲ್ಲೂಕಿನಲ್ಲಿ ಅವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ'' ಎಂದು ಎಚ್ಡಿಕೆ ಅಭಿಮಾನಿಗಳು ಗುಡುಗಿದ್ದಾರೆ.
Recommended Video
ಬೊಂಬೆನಗರಿ ಚನ್ನಪಟ್ಟಣ ರಾಜಕೀಯ ಕಚ್ಚಾಟ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇಬ್ಬರು ನಾಯಕರ ಬೆಂಬಲಕ್ಕೆ ನಿಂತು ಬೇರೆ ಬೇರೆ ನಾಯಕರು ನಾಲಿಗೆ ಹರಿಬಿಡುತ್ತಿದ್ದಾರೆ. ಇದರ ಜತೆಗೆ ಕ್ಷೇತ್ರದ ಕಾರ್ಯಕರ್ತರು ಕೂಡ ತಮ್ಮ ತಮ್ಮ ನಾಯಕರ ಪರ ಬ್ಯಾಟ್ ಬೀಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.