ಚಿರು ಸರ್ಜಾ ನೆಚ್ಚಿನ "ಬೃಂದಾವನ"ದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ
ಬೆಂಗಳೂರು, ಜೂನ್ 08: ಹೃದಯಾಘಾತದಿಂದ ನಿನ್ನೆ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆಯನ್ನು ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಸಮೀಪದ ಫಾರ್ಮ್ ಹೌಸ್ ನಲ್ಲಿ ಇಂದು ನಡೆಸಲು ತೀರ್ಮಾನಿಸಲಾಗಿದ್ದು, ಅಂತ್ಯಕ್ರಿಯೆಗೆ ಸಕಲ ಸಿದ್ಧತೆಯನ್ನು ನಡೆಸಲಾಗುತ್ತಿದೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಫಾರ್ಮ್ ಹೌಸ್ ಗೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. 4 ಎಕರೆಯಲ್ಲಿರುವ ಈ ಫಾರ್ಮ್ ಹೌಸ್ ಗೆ ಬೃಂದಾವನ ಎಂದು ಹೆಸರಿಡಲಾಗಿದೆ. ಈ ಬೃಂದಾವನದಲ್ಲೇ ಚಿರು ಸರ್ಜಾ ಅಂತಿಮ ಸಂಸ್ಕಾರ ನೆರವೇರಿಸಲು ಕುಟುಂಬವು ತೀರ್ಮಾನಿಸಿದೆ. ಈ ಮೊದಲು ಚಿರು ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು, ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ನೆರವೇರಿಸುವುದಾಗಿ ತಿಳಿದುಬಂದಿತ್ತು. ಇದೀಗ ಕನಕಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.
ಚಿರು ಉಜ್ವಲ ಭವಿಷ್ಯ ಹೊಂದಿದ್ದ ಕಲಾವಿದ: ಬಿಎಸ್ವೈ ಸಂತಾಪ
ಬೃಂದಾವನಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಚಿರು
ಚಿರು ಸರ್ಜಾ ಅವರ ಅಂತ್ಯಕ್ರಿಯೆಯನ್ನು ಬೃಂದಾವನದಲ್ಲಿ ನೆರವೇರಿಸಲಾಗುತ್ತಿದ್ದು, ಈ ಸ್ಥಳದಲ್ಲಿ ಸಿಬ್ಬಂದಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ನಟ, ಚಿರು ಸರ್ಜಾ ಸಹೋದರ ಧ್ರುವ ಸರ್ಜಾ ಈ ಫಾರ್ಮ್ ಹೌಸ್ ಅನ್ನು ಖರೀದಿಸಿದ್ದರು. ಚಿರು ಸರ್ಜಾ ಆಗಾಗ್ಗೆ ಈ ಫಾರ್ಮ್ ಹೌಸ್ ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.
ಚಿರು ನೆಚ್ಚಿನ ಜಾಗದಲ್ಲೇ ಅಂತ್ಯಸಂಸ್ಕಾರ
ಈ ಬೃಂದಾವನ ಫಾರ್ಮ್ ಹೌಸ್ ಚಿರಂಜೀವ ಸರ್ಜಾಗೆ ನೆಚ್ಚಿನ ಸ್ಥಳವಾಗಿತ್ತು. ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದರು ಚಿರು, ಧ್ರುವ ಸರ್ಜಾ ಸಹೋದರರು. ಇಂದು ಅವರ ನೆಚ್ಚಿನ ಈ ಸ್ಥಳದಲ್ಲೇ ಅವರ ಅಂತ್ಯಕ್ರಿಯೆನಡೆಯುತ್ತಿದೆ.
ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ
ಇಂದು ಮಧ್ಯಾಹ್ನ 1 ಗಂಟೆಗೆ ಚಿರು ಸರ್ಜಾ ಪಾರ್ಥಿವ ಶರೀರವನ್ನು ಫಾರ್ಮ್ ಹೌಸ್ ಗೆ ತರಲಾಗುವುದು. ಸಂಜೆ 4 ಗಂಟೆ ಸುಮಾರಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಗೌಡ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಈಗಾಗಲೇ ಫಾರ್ಮ್ ಹೌಸ್ ಮುಂಭಾಗ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಹೃದಯಾಘಾತದಿಂದ ಸಾವನ್ನಪ್ಪಿದ್ದ ಚಿರು
ನಿನ್ನೆ ಮಧ್ಯಾಹ್ನದ ವೇಳೆಗೆ ನಟ ಚಿರಂಜೀವಿ ಸರ್ಜಾ ಅವರು ತೀವ್ರ ಹೃದಯಾಘಾತದಿಂದ ಜಯನಗರದ ಅಪೊಲೊ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದರು. ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ದರು. ಬಸವನಗುಡಿಯ ಅವರ ನಿವಾಸದಲ್ಲಿ ಚಿರು ಸರ್ಜಾ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.