ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸಲು ನಾನು ಎಚ್ಡಿಕೆ ಅಲ್ಲ: ಯೋಗೀಶ್ವರ್
ರಾಮನಗರ, ಮಾರ್ಚ್ 29: ರಾಮನಗರ- ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೊಕೆ ನಾನೇನು ಹೆಚ್.ಡಿ ಕುಮಾರಸ್ವಾಮಿನಾ? ಗೆಲ್ಲುವ ವಿಶ್ವಾಸವಿಲ್ಲದವರು ಎರಡು ಕಡೆ ಸ್ಪರ್ಧಿಸುತ್ತಾರೆ ಶಾಸಕ ಸಿ.ಪಿ.ಯೋಗೀಶ್ವರ್ ಅವರು ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ರಾಮನಗರದ ಖಾಸಗಿ ಹೋಟೆಲ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಪಿ.ಯೋಗೀಶ್ವರ್, ಕುಮಾರಸ್ವಾಮಿ ಯವರು ಇಷ್ಟ ಬಂದಕಡೆ ಸ್ಪರ್ಧೆ ಮಾಡುತ್ತಾರೆ, ನನಗೆ ಚನ್ನಪಟ್ಟಣ ಕ್ಷೇತ್ರ ಇದೆ ಅಲ್ಲಿ 20 ವರ್ಷದಿಂದ ಜನರಿಗಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ನನಗೆ ಒಂದೇ ಕ್ಷೇತ್ರ ಸಾಕು ಎಂದರು.
ಹೆಚ್.ಡಿ.ಕೆ ಅವರದ್ದು ಸ್ವಂತ ಪಕ್ಷ ಅವರು ಎಲ್ಲಿ-ಯಾರಿಗೆ ಬೇಕಾದರು ಬಿ ಪಾರಂ ಕೊಡಬಹುದು ಬೇಕಾದರೆ ಕಿತ್ತು ಕೊಳ್ಳಬಹುದು ಅಲ್ಲದೇ 224 ಕ್ಷೇತ್ರಗಳಲ್ಲೂ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬಹುದು ಎಂದು ಲೇವಡಿ ಮಾಡಿದರು.
ನಮ್ಮದು ರಾಷ್ಟ್ರೀಯ ಪಕ್ಷ ನಮಗೆ ಸಿದ್ದಾಂತಗಳಿವೆ, ಎರಡೂ ಕ್ಷೇತ್ರಗಳಲ್ಲಿ ನನ್ನ ಸ್ಪರ್ಧೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಬಳಿ ಚರ್ಚೆ ನಡೆಸುತ್ತೇವೆ ನನಗೆ ಎರಡು ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಆಸೆಗಳಿಲ್ಲ ನನಗೆ ಒಂದೇ ಕ್ಷೇತ್ರ ಸಾಕು ಎಂದು ಸಿಪಿವೈ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಳೆಯಿಂದ ಎರಡು ದಿನಗಳ ಕಾಲ ಮೈಸೂರು ಭಾಗದಲ್ಲಿ ಭೇಟಿ ನೀಡುತ್ತಿದ್ದು ಮಾರ್ಚ್ 31 ರಂದು ಚನ್ನಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ ಎಂದು ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ತಿಳಿಸಿದರು.
ಶನಿವಾರ ಸಾಯಂಕಾಲದ 4 ಗಂಟೆ ಬಳಿಕ ಚನ್ನಪಟ್ಟಣಕ್ಕೆ ಭೇಟಿ ನೀಡಲಿರುವ ಅಮಿತ್ ಶಾ ಮೊದಲಿಗೆ ಸಾತನೂರು ರಸ್ತೆಯಲ್ಲಿನ ಮಹಾದೇಶ್ವರ ಬಡಾವಣೆಯ ಕೇಂದ್ರೀಯ ಕರಕುಶಲ ಪಾರ್ಕ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಕರಕುಶಲ ಕರ್ಮಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಬಳಿಕ ರೇಷ್ಮೆ ಬೆಳೆಗಾರರು, ರೀಲರ್ಸ್ಗಳು, ಮಾರುಕಟ್ಟೆ, ಬಿಚ್ಚಣಿಕೆದಾರರ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 4 ರಿಂದ 5 ಸಾವಿರ ರೇಷ್ಮೆಬೆಳೆಗಾರರು, ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕ ಸಿ.ಪಿ.ಯೋಗೀಶ್ವರ್ ತಿಳಿಸಿದರು.