ಅಂಬೇಡ್ಕರ್ ಭವನ ಉದ್ಘಾಟನೆ; ಮಾಜಿ ಸಿಎಂ V/S ಹಾಲಿ ಸಚಿವರ ಪ್ರತಿಷ್ಠೆ!
ರಾಮನಗರ, ಜನವರಿ 21: ಚನ್ನಪಟ್ಟಣದಲ್ಲಿ ಶುಕ್ರವಾರ ಡಾ. ಬಿ. ಆರ್. ಅಂಬೇಡ್ಕರ್ ಭವನ ಉದ್ಘಾಟನೆಗೆ ಸಿದ್ಧವಾಗಿದೆ. ಕಳೆದ 17 ವರ್ಷಗಳಿಂದ ಲೋಕಾರ್ಪಣೆಯಾಗದೇ ಪಾಳುಕೊಂಪೆಯಾಗಿದ್ದ ಕಟ್ಟಡಕ್ಕೆ ಈಗ ಮುಕ್ತಿ ಸಿಕ್ಕಿದೆ. ಚನ್ನಪಟ್ಟಣ ಶಾಸಕರಾದ ಎಚ್. ಡಿ. ಕುಮಾರಸ್ವಾಮಿ ಅವರಿಂದ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ.
ಸಂಭ್ರಮದಿಂದ ನಡೆಯಬೇಕಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭವನದ ಉದ್ಘಾಟನೆ ಕಾರ್ಯಕ್ರಮ ರಾಜಕೀಯ ಪ್ರತಿಷ್ಠೆಯ ಕಣವಾಗಿದೆ. ತರಾತುರಿಯಲ್ಲಿ ಉದ್ಘಾಟನೆ ಬೇಡ ಎಂದು ಸಚಿವ ಯೋಗೇಶ್ವರ್ ಬೆಂಬಲಿಗರು ಅಪಸ್ವರ ಎತ್ತಿದ್ದಾರೆ.
ಕುಮಾರಸ್ವಾಮಿ V/S ಯೋಗೇಶ್ವರ ಮಾತಿನ ಮಲ್ಲಯುದ್ಧ!
ಗೊಂದಲ ನಡುವೆಯು ಚನ್ನಪಟ್ಟಣದ ಸಾತನೂರು ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಅಂಬೇಡ್ಕರ್ ಭವನ ಶುಕ್ರವಾರ ಉದ್ಘಾಟನೆಯಾಗಲಿದೆ. ಕ್ಷೇತ್ರದ ಶಾಸಕ ಎಚ್. ಡಿ. ಕುಮಾರಸ್ವಾಮಿ ಇದನ್ನು ಅಧಿಕೃತವಾಗಿ ತಿಳಿಸಿದ್ದಾರೆ.
ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್ಡಿಕೆ
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಸ್ವಾಮಿ ವಹಿಸಲಿದ್ದಾರೆ. ಭವನದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾಡಲಿದ್ದಾರೆ. ಸಚಿವ ಯೋಗೇಶ್ವರ್ ಘನ ಉಪಸ್ಥಿತಿ ಇರಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
2ನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಲಿರುವ ಸಿಪಿ ಯೋಗೇಶ್ವರ್ ವ್ಯಕ್ತಿಚಿತ್ರಣ
4 ರಿಂದ 5 ಕೋಟಿ ಖರ್ಚು
"ಕಳೆದ 17 ವರ್ಷಗಳಿಂದ ಈ ಭವನ ಉದ್ಘಾಟನೆಯಾಗದೇ ಇದ್ದದ್ದು ಬೇಸರದ ವಿಚಾರ. ನಾನು ಕ್ಷೇತ್ರದ ಜನರಿಗೆ ಮಾತುಕೊಟ್ಟಿದ್ದೆ, ಹಾಗಾಗಿ 22 ನೇ ತಾರೀಕು ಭವನವನ್ನು ಉದ್ಘಾಟನೆ ಮಾಡಲಾಗುತ್ತೆ, ಈಗಾಗಲೇ 4 ರಿಂದ 5 ಕೋಟಿ ಹಣ ಖರ್ಚಾಗಿದೆ. ಜೊತೆಗೆ ಇನ್ನು 1 ರಿಂದ 2 ಕೋಟಿ ಹಣ ಬೇಕಾಗುತ್ತೆ ಎಂದು ಅಧಿಕಾರಿಗಳು ಹೇಳಿದ್ದಾರೆ" ಎಂದು ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪರ -ವಿರೋಧ ಚರ್ಚೆಗಳು
ಶಾಸಕ ಎಚ್. ಡಿ. ಕುಮಾರಸ್ವಾಮಿ ತರಾತುರಿಯಲ್ಲಿ ಭವನವನ್ನು ಉದ್ಘಾಟನೆ ಮಾಡಲು ಹೊರಟ್ಟಿದ್ದಾರೆ. ಭವನದ ಕಾಮಗಾರಿ ಇನ್ನು ಪೂರ್ಣವಾಗಿಲ್ಲ. ಇಷ್ಟು ಆತುರವಾಗಿ ಉದ್ಘಾಟನೆ ಮಾಡಲು ಹೊರಟಿರುವುದು ಯಾಕೆ?. ಏಪ್ರಿಲ್ 14ಕ್ಕೆ ಭವನವನ್ನು ಉದ್ಘಾಟನೆ ಮಾಡಲಿ. ಶುಕ್ರವಾರ ಉದ್ಘಾಟನೆ ಮಾಡಿದರೆ ನಾವು ಉಗ್ರ ಹೋರಾಟ ಮಾಡುತ್ತೇವೆ. ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಸಚಿವ ಸಿ. ಪಿ. ಯೋಗೇಶ್ವರ್ ಬೆಂಬಲಿಗರು ಎಚ್ಚರಿಕೆ ಕೊಟ್ಟಿದ್ದಾರೆ.
ಜೆಡಿಎಸ್ ನಾಯಕರು ಹೇಳುವುದೇನು?
ಇದೇ ವಿಚಾರವಾಗಿ ಜೆಡಿಎಸ್ ಮುಖಂಡರು ಮಾತನಾಡಿದ್ದಾರೆ. ಭವನದ ಕಾಮಗಾರಿ ಶೇ 90ರಷ್ಟು ಮುಗಿದಿದೆ. ಭವನಕ್ಕೆ ಬೇಕಾಗಿರುವ ಪೀಠೋಪಕರಣಗಳು ಮಾತ್ರ ಬಾಕಿಯಿದೆ. ಈ ಬಗ್ಗೆ ಸ್ವತ: ಕುಮಾರಸ್ವಾಮಿಯವರು ಸಂಬಂಧಪಟ್ಟ ಇಲಾಖೆಯ ಸಚಿವರಾದ ಶ್ರೀರಾಮುಲು ಜೊತೆಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.
ಉದ್ಘಾಟನೆ ನಡೆಯಲಿದೆ
ಮುಂದಿನ ಒಂದು ವಾರದಲ್ಲಿ ಪೀಠೋಪಕರಣಗಳು ಭವನಕ್ಕೆ ಬರಬೇಕು. ಸಾರ್ವಜನಿಕರ ಸೇವೆಗೆ ಭವನವನ್ನು ನೀಡಬೇಕಾಗಿದೆ ಎಂದು ಶ್ರೀರಾಮುಲು ಅವರಿಗೆ ಕುಮಾರಸ್ವಾಮಿ ತಿಳಿಸಿದ್ದಾರೆ. ಆದರೆ, ಕೆಲವರು ಕಾರ್ಯಕ್ರಮವನ್ನು ಹಾಳು ಮಾಡುವ ದೃಷ್ಟಿಯಿಂದ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಶುಕ್ರವಾರ ಭವನ ಉದ್ಘಾಟನೆಯಾಗಲಿದೆ ಎಂದು ಕುಮಾರಸ್ವಾಮಿ ಬೆಂಬಲಿಗರು ಹೇಳಿದ್ದಾರೆ.