ರಾಮನಗರದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ ಚಿರತೆಗಳ ಅಟ್ಟಹಾಸ
ರಾಮನಗರ, ಮೇ. 27 : ರಾಮನಗರ ಜಿಲ್ಲೆಯೊಂದರಲ್ಲೇ ಕೆಲ ತಿಂಗಳಲ್ಲಿ ಸುಮಾರು 16 ಚಿರತೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನ್ ಗಳಲ್ಲಿ ಸೆರೆಯಾಗಿವೆ.
ಶನಿವಾರ ಕೂಡ ಚಿರತೆ ಕಾಡಿನಿಂದ ನಾಡಿಗೆ ಬಂದು ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದೆ. ಬೇಲಿಕೊತ್ತನೂರು ಗ್ರಾಮದ ಜಗದೀಶ್ ಎಂಬುವರ ರೇಷ್ಮೆ ಹುಳು ಸಾಕುವ ಮನೆಯಲ್ಲಿ ಮಲಗಿದ್ದ ತಮ್ಮಯ್ಯಣ್ಣ ಎಂಬ ಕಾರ್ಮಿಕನ ಮೇಲೆ ದಾಳಿ ಮಾಡಿ, ಗಾಯಗೊಳಿಸಿದೆ. ಇದರಿಂದ ತಮ್ಮಯ್ಯಣ್ಣ ತೀವ್ರವಾಗಿ ಗಾಯಗೊಂಡಿದ್ದಾರೆ.
ತಾವರೆಕೆರೆಯಲ್ಲಿ ಬೋನಿಗೆ ಬಿದ್ದ ಚಿರತೆ: ಸ್ಥಳೀಯರು ಕೊಂಚ ನಿರಾಳ
ತಮ್ಮಯ್ಯಣ್ಣ ಚಿರತೆ ದಾಳಿಗೆ ಸಿಲುಕಿ, ಕಿರುಚಿದಾಗ ಮನೆ ಯಜಮಾನ ಜಗದೀಶ್ ತಮ್ಮಯ್ಯಣ್ಣನನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ್ ಮೇಲೂ ಚಿರತೆ ದಾಳಿಗೆ ಮುಂದಾದ ಸಂದರ್ಭದಲ್ಲಿ ಅವರು ಬಚಾವ್ ಆಗಿ, ರೇಷ್ಮೆ ಮನೆಯ ಬಾಗಿಲು ಹಾಕಿಕೊಂಡಿದ್ದಾರೆ.
ನಂತರ ಸ್ಥಳಕ್ಕೆ ಬಂದು ಚಿರತೆ ನೋಡಲು ಮುಂದಾದ ಪ್ರೇಮ್ ಸಾಗರ್ ಎಂಬ ಯುವಕನ ಕಿವಿ ಕಚ್ಚಿದ ಚಿರತೆ, ಅಪ್ಪಾಜಿ, ಸಿದ್ದಲಿಂಗಮ್ಮ ಅವರ ಮೇಲೂ ಎರಗಿದೆ.
ಗಾಯಗೊಂಡವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇಲ್ಲಿ ಚಿರತೆ ಹಾವಳಿ ಮೇಲಿಂದ ಮೇಲೆ ನಡೆಯುತ್ತಲೇ ಇದ್ದು, ಅರಣ್ಯ ಇಲಾಖೆಗೆ ಇದನ್ನು ತಡೆಯಲು ಸಾಧ್ಯವಾಗಿಲ್ಲ ಅನ್ನೋದು ಸ್ಥಳೀಯರ ಆರೋಪ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತೆಂಗಿನಕಲ್ಲು ವಲಯ ಅರಣ್ಯ ವ್ಯಾಪ್ತಿಯ ಅಧಿಕಾರಿಗಳು, ಬನ್ನೇರುಘಟ್ಟದ ವನ್ಯಜೀವಿ ಅರಣ್ಯದ ಅರೆವಳಿಕೆ ತಜ್ಞ ಡಾ. ಉಮಾಶಂಕರ್ ಅವರನ್ನು ಕರೆಸಿ, ಚಿರತೆಯನ್ನ ಸೆರೆ ಹಿಡಿದಿದ್ದಾರೆ.
ಸದ್ಯ ಚಿರತೆಯನ್ನು ಚನ್ನಪಟ್ಟದ ಕೆಂಗಲ್ ಬಳಿಯ ಥೀಂ ಪಾರ್ಕ್ ನಲ್ಲಿ ಚಿಕಿತ್ಸೆಗೆ ಒಳಪಡಿಸಿದ ನಂತರ ಬನ್ನೇರುಘಟ್ಟ ಅಥವಾ ಬಿಳಿಗಿರಿ ರಂಗನ ಬೆಟ್ಟ ಅರಣ್ಯ ಪ್ರದೇಶಕ್ಕೆ ಬಿಡಲು ತೀರ್ಮಾನಿಸಲಾಗಿದೆ.
ಅಲ್ಲಿಗೆ ಮಾನವ ಹಾಗೂ ವನ್ಯ ಪ್ರಾಣಿಗಳ ಸಂಘರ್ಷ ಮುಂದುವರೆದಂತಾಗಿದೆ.
ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ವನ್ಯ ಜೀವಿಗಳ ಉಪಟಳ ಮನುಷ್ಯರ ಮೇಲೆ ಮೇಲೆ ಆಗುತ್ತಲೇ ಇದೆ. ಒಂದು ಕಡೆ ಗಜ ಪಡೆಗಳು, ಕಾಡಂಚಿನ ಗ್ರಾಮಗಳಲ್ಲದೇ ಪಟ್ಟಣ ಪ್ರದೇಶದವರೆಗೂ ದಾಂಗುಡಿ ಇಟ್ಟು, ರೈತ ಬೆಳೆದ ಬೆಳೆ ನಾಶ ಪಡಿಸಿದ್ರೆ, ಇನ್ನೊಂದೆಡೆ ಚಿರತೆಗಳು ಜನ-ಜಾನುವಾರುಗಳ ಮೇಲೆ ದಾಳಿ ಮಾಡಿ, ಅವರ ಪ್ರಾಣಗಳಿಗೆ ಕುತ್ತು ತರ್ತಿವೆ.
ಇದರಿಂದ ಅರಣ್ಯದಂಚಿನ ಗ್ರಾಮಗಳ ಜನರು ಪ್ರಾಣ ಭೀತಿಯಿಂದ ಬದುಕುವಂತಾಗಿದೆ.
ರಾಮನಗರ ಜಿಲ್ಲೆಯಲ್ಲಿ 16 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆಗಳ ಸಂತತಿ ಹೆಚ್ಚಾಗಿದ್ದು, ಇದರಿಂದ ಅವುಗಳು ನಾಡಿಗೆ ಬರುತ್ತಿವೆ. ಅವುಗಳ ಸಂತಾನ ಕಡಿಮೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈಗ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆ, ರಾಮನಗರ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳಕ್ಕೆ ಕಾಡಂಚಿನ ಗ್ರಾಮಗಳ ಜನತೆ ಸಾಕಷ್ಟು ಭೀತಿಗೊಳಗಾಗಿದ್ದು, ಅರಣ್ಯ ಇಲಾಖೆ ಚಿರತೆ ಹಾವಳಿಗೆ ಕಡಿವಾಣ ಹಾಕಬೇಕಿದೆ.