ಎಚ್ಡಿಕೆ ಮಾಡಿದ ಅಭಿವೃದ್ಧಿ ಕಂಡು ಯೋಗೇಶ್ವರ್ಗೆ ಮತಿಭ್ರಮಣೆ; ಜೆಡಿಎಸ್ ತಿರುಗೇಟು
ರಾಮನಗರ, ಮಾರ್ಚ್ 15: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ 14 ತಿಂಗಳು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ರಾಸಲೀಲೆಯಲ್ಲಿ ತಲ್ಲೀನರಾಗಿದ್ದರು ಎಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಚನ್ನಪಟ್ಟದ ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಚನ್ನಪಟ್ಟಣದ ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದಿಂದ ಕಾಣೆಯಾಗಿದ್ದ ಯೋಗೇಶ್ವರ್, ಇದೀಗ ಮುಂದಿನ ಚುನಾವಣೆಯ ದೃಷ್ಟಿಯಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟು ತಮ್ಮ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ," ಎಂದು ಜೆಡಿಎಸ್ ಮುಖಂಡರು ಆರೋಪಿಸಿದರು.
ಎಚ್ಡಿಕೆ ಸಿಎಂ ಆಗಿದ್ದ ವೇಳೆ ಹೋಟೆಲ್ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ; ಸಿ.ಪಿ. ಯೋಗೇಶ್ವರ್ ಆರೋಪ
"ಕ್ಷೇತ್ರದಲ್ಲಿ 20 ವರ್ಷ ಅಧಿಕಾರದಲ್ಲಿದ್ದ ಸಿ.ಪಿ. ಯೋಗೇಶ್ವರ್ ಮಾಡದ ಅಭಿವೃದ್ಧಿಯನ್ನು, ಎಚ್.ಡಿ. ಕುಮಾರಸ್ವಾಮಿಯವರು ಕೇವಲ ನಾಲ್ಕು ವರ್ಷಗಳಲ್ಲಿ ಮಾಡಿದ್ದಾರೆ. ಹಾಗಾಗಿ ಚುನಾವಣೆ ದೃಷ್ಟಿಯಿಂದ ಕ್ಷೇತ್ರಕ್ಕೆ ಬಂದಿರುವ ಸಿ.ಪಿ. ಯೋಗೇಶ್ವರ್ ಅವರಿಗೆ ಕ್ಷೇತ್ರದ ಮತದಾರರು ಸೊಪ್ಪು ಹಾಕುತ್ತಿಲ್ಲ, ಇದರಿಂದಾಗಿ ಸಿಪಿವೈಗೆ ಮತಿಭ್ರಮಣೆಯಾಗಿದೆ," ಎಂದು ಕಿಡಿಕಾರಿದರು.
"ಎಚ್.ಡಿ. ಕುಮಾರಸ್ವಾಮಿ ಮಾಡಿದ ಅಭಿವೃದ್ದಿ ಕಂಡು ಹತಾಶಗೊಂಡ ಸಿ.ಪಿ. ಯೋಗೇಶ್ವರ್ ಲೂಸ್ ಟಾಕ್ ಆಡುತ್ತಿದ್ದಾರೆ. ಆದರೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಇನ್ನೊಮ್ಮೆ ನಮ್ಮ ನಾಯಕ ಕುಮಾರಣ್ಣನವರ ವಿಚಾರದಲ್ಲಿ ಲಘುವಾಗಿ, ಏಕವಚನದಲ್ಲಿ ಮಾತಾಡಿದರೆ ಪರಿಣಾಮ ನೆಟ್ಟಗಿರಲ್ಲವೆಂದು," ಜೆಡಿಎಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಮುಖಂಡರಾದ ಸಿಂ.ಲಿಂ. ನಾಗರಾಜ್, ಹಾಪ್ಕಾಮ್ಸ್ ದೇವರಾಜು, ಗೋವಿಂದಹಳ್ಳಿ ನಾಗರಾಜು, ಕುಕ್ಕೂರು ಜಯರಾಮು, ರೇಖಾ ಉಮಾಶಂಕರ್, ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರು ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ನಾಲಿಗೆ ಹರಿಬಿಟ್ಟ ಕಾರಣದಿಂದಲೇ ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದೀರಿ. ಮತ್ತೆ ಕುಮಾರಣ್ಣನ ವಿರುದ್ಧ ನಿಮ್ಮ ನಾಲಿಗೆ ಹರಿಬಿಟ್ಟಿದ್ದಿರಿ ಅದರ ಪರಿಣಾಮ 2023ರ ಚುನಾವಣೆಯಲ್ಲಿ ಜನರು ಉತ್ತರಿಸುತ್ತಾರೆ ಎಂದು ಎಚ್ಚರಿಸಿದರು.
ಮಾಜಿ ಸಿಎಂ ಕುಮಾರಣ್ಣ ಹಾಗೂ ಬಿಜೆಪಿ ಪಕ್ಷದ ನಡುವಿನ ಸಂಬಂಧ ಚನ್ನಾಗಿರುವುದನ್ನೂ ನೋಡಿ ಸಿಪಿವೈಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಬಿಜೆಪಿ ಪಕ್ಷದಲ್ಲಿ ಇರಬೇಕಾ ಅಥವಾ ಹೊರ ಹೋಗಬೇಕಾ ಎಂಬ ಗೊಂದಲದಲ್ಲಿ ಯೋಗೇಶ್ವರ್ ಇದ್ದಾರೆ. ಈಗಾಗಲೇ ಪಕ್ಷದಿಂದ ಪಕ್ಷಕ್ಕೆ ಹಾರುವ ಪಕ್ಷಾಂತರಿ ಸಿ.ಪಿ. ಯೋಗೇಶ್ವರ್ ಬದ್ಧತೆ ಇಲ್ಲದ ರಾಜಕಾರಣಿ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಹತಾಶೆಯಿಂದ ಮತಿ ಭ್ರಮಣೆಗೊಂಡಿರುವ ಸಿಪಿವೈ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಸಲಹೆ ನೀಡಿದರು.
ಇನ್ನು ಜೆಡಿಎಸ್ ಮುಖಂಡ ಸಿಂ.ಲಿಂ. ನಾಗರಾಜ್ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯ ಕೇವಲ ಮೂರೂವರೆ ವರ್ಷಗಳಲ್ಲಿ ಚನ್ನಪಟ್ಟಣ ತಾಲೂಕಿನಲ್ಲಿ ಆಗಿರುವುದನ್ನು ಕಂಡು ಸಿ.ಪಿ. ಯೋಗೇಶ್ವರ್ಗೆ ರಾಜಕೀಯದ ಅಸ್ಥಿರತೆ ಭಯ ಕಾಡುತ್ತಿದೆ. ಅಲ್ಲದೇ 30-40 ಕೆರೆ ತುಂಬಿಸಿ ಆಧುನಿಕ ಭಗೀರಥನೆಂದು ಸ್ವಯಂ ಬಿರುದು ಪಡೆದ ಸಿಪಿವೈಗೆ ಮಾಜಿ ಸಿಎಂ ಎಚ್ಡಿಕೆ 120 ಕೆರೆಗಳನ್ನು ತುಂಬಿಸಿರುವುದನ್ನು ನೋಡಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಹೀಗಾಗಿ ನಮ್ಮ ನಾಯಕರ ವಿರುದ್ಧ ಲಘುವಾಗಿ ಹಾಗೂ ಅವಹೇಳನವಾಗಿ ಮಾತನಾಡಿ ತಾವು ದೊಡ್ಡವರಾಗುತ್ತೇವೆಂದು ಅಂದುಕೊಂಡಿದ್ದಾರೆ ಅದು ಭ್ರಮೆ. ನಮ್ಮ ನಾಯಕರ ಬಗ್ಗೆ ನೀವು ಬಳಸಿರುವ ಪದಗಳು ನಿಮ್ಮ ಯೋಗ್ಯತೆಯನ್ನು ಎತ್ತಿ ತೋರಿಸಿದೆ. ನಿಮ್ಮ ರಾಜಕೀಯ ಹಾಗೂ ವೈಯುಕ್ತಿಕ ಇತಿಹಾಸ ಇಡೀ ರಾಜ್ಯಕ್ಕೆ ತಿಳಿದಿದೆ. ನಿಮ್ಮ ರಾಜಕೀಯ ಹಾಗೂ ವೈಯುಕ್ತಿಕ ಜೀವನ ಆಯೋಮಯವಾಗಿದ್ದು, ಮಾತನಾಡುವಾಗ ಕನಿಷ್ಠ ಗೌರವ, ಆತ್ಮಾಭಿಮಾನ ಉಳಿಸಿಕೊಳ್ಳಿ. ಇಲ್ಲದಿದ್ದರೆ ಜೆಡಿಎಸ್ನ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಸಿಂ.ಲಿಂ. ನಾಗರಾಜು ಎಚ್ಚರಿಕೆ ನೀಡಿದರು.