ಪರಿಷತ್ ಫೈಟ್; ಎಚ್ಡಿಕೆಗೆ ಚನ್ನಪಟ್ಟಣ ಕಾರ್ಯಕರ್ತರ ಬೇಡಿಕೆ ಏನು?
ರಾಮನಗರ, ಮೇ 24: ವಿಧಾನ ಪರಿಷತ್ ಚುನಾವಣೆಯ ಹತ್ತಿರವಾಗುತ್ತಿರುವ ಸಮಯದಲ್ಲಿ ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತುಗೆ ವಿಧಾನ ಪರಿಷತ್ ಟಿಕೆಟ್ ನೀಡುವಂತೆ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್. ಡಿ. ಕುಮಾರಸ್ವಾಮಿಯನ್ನು ಒತ್ತಾಯಿಸಿದ್ದಾರೆ.
ಜೆಡಿಎಸ್ನ ಮೇಲ್ಮನೆ ಸದಸ್ಯ ರಮೇಶ್ ಗೌಡರ ಅವಧಿ ಪೂರ್ಣಗೊಂಡು ತೆರವಾಗುವ ಸ್ಥಾನವನ್ನು ಜಯಮುತ್ತುಗೆ ನೀಡಬೇಕು. ಈ ಮೂಲಕ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಪಕ್ಷ ಗುರುತಿಸುತ್ತದೆ ಎಂಬ ಸಂದೇಶವನ್ನು ಪಕ್ಷದ ವರಿಷ್ಠರು ನಿರೂಪಿಸಬೇಕು ಎಂದು ಮನವಿ ಮಾಡಲಾಗಿದೆ.
ಸದ್ಯದಲ್ಲೇ ಜೆಡಿಎಸ್ ಪಕ್ಷದಿಂದ ಪರಿಷತ್ ಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡುವ ಹಿನ್ನಲೆಯಲ್ಲಿ ಕಾರ್ಯಕರ್ತರು ಪಕ್ಷದ ನಿಷ್ಠಾವಂತ ಮುಖಂಡ ಎಚ್. ಸಿ. ಜಯಮುತ್ತುಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಜೆಡಿಎಸ್ ವರಿಷ್ಠರ ಗಮನ ಸೆಳೆಯುತ್ತಿದ್ದಾರೆ.
ಪಕ್ಷಕ್ಕಾಗಿ ಹಗಲಿರುಳು ದುಡಿಮೆ
ಜೂ.3 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಚನ್ನಪಟ್ಟಣ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾಗಿ, ಪಕ್ಷನಿಷ್ಠವಾಗಿ, ಪ್ರಾಮಾಣಿಕವಾಗಿ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಜನನಾಯಕ ಜಯಮುತ್ತು ಆಯ್ಕೆ ಮಾಡಬೇಕು. ಪಕ್ಷ ಕಟ್ಟುವುದರಲ್ಲಿ ಇವರಿಗಿರುವ ನಾಯಕತ್ವ ಹಾಗೂ ನಿಷ್ಠೆಯನ್ನು ಗುರುತಿಸಿ ಜೆಡಿಎಸ್ ವರಿಷ್ಠರಾದ ಎಚ್. ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ತಾಲೂಕು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಈ ಪೋಸ್ಟ್ ಗಳು ಸಾಕಷ್ಟು ಶೇರ್ ಆಗುತ್ತಿದ್ದು, ಕೇವಲ ತಾಲೂಕಿಗಲ್ಲದೇ ಜಿಲ್ಲೆಯ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ.
ಎದುರಾಳಿಗಳ ನಿದ್ದೆಗೆಡಿಸುತ್ತಾರೆ
ಮುತ್ತಣ್ಣ ನೋಡೋದಕ್ಕೆ ಹೇಗಿದ್ದಾರೋ ಥೇಟ್ ಅವರ ರಾಜಕಾರಣನೂ ಹಾಗೇ ಇದೆ. ಬಾಯಿಗೆ ಬಂದಂತೆ ಸುಖಾಸುಮ್ಮನೆ ಮಾತನಾಡುವವರಲ್ಲ, ಫೀಲ್ಡ್ ನಲ್ಲಿಳಿದು ತಮ್ಮ ಹೋರಾಟದ ಗಮ್ಮತ್ತು ಎಂತಹದು ಎಂಬುದನ್ನು ಮಾಡಿ ತೋರಿಸುತ್ತಾರೆ. ಎದುರಾಳಿಗಳಿಗೆ ನಿದ್ದೆಯಲ್ಲೂ ಇವರದೇ ಧ್ಯಾನ ಮಾಡುವ ರೀತಿಯಲ್ಲಿ ಕಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ಕಾಲಘಟ್ಟದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ರಾಜಕೀಯ ಮಾಡೋದು ಅಷ್ಟು ಸುಲಭವಲ್ಲದ ಪರಿಸ್ಥಿತಿಯಲ್ಲಿ ಜನರ ಮನಸ್ಸಿನಲ್ಲಿ ಬೇರೂರಿರೋದು ಮುತ್ತಣ್ಣರಂತಹ ದೈತ್ಯಶಕ್ತಿಗಳಿಂದ ಮಾತ್ರ ಸಾಧ್ಯ ಎಂಬ ಬರಹಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಎಚ್. ಸಿ. ಜಯಮುತ್ತು ಪರ ಅಭಿಮಾನಿಗಳು ಪರಿಷತ್ ಟಿಕೆಟ್ಗೆ ಬೇಡಿಕೆಯಿಟ್ಟಿದ್ದಾರೆ.
ಮರಿತಿಬ್ಬೇಗೌಡ ಗಂಭೀರ ಆರೋಪ
ಜೆಡಿಎಸ್ ನಲ್ಲಿ ಎಂಎಲ್ಸಿ ಸ್ಥಾನಕ್ಕಾಗಿ ವರಿಷ್ಠರಿಗೆ ಹಣ ನೀಡಬೇಕು ಎಂದು ಇತ್ತೀಚೆಗೆ ಜೆಡಿಎಸ್ನ ಮೇಲ್ಮನೆ ಸದಸ್ಯ ಮರಿತಿಬ್ಬೇಗೌಡ ಗಂಭೀರವಾಗಿ ಆರೋಪಿಸಿದ್ದರು. ಇದು ಜೆಡಿಎಸ್ ಪಕ್ಷದ ಮುಜುಗರಕ್ಕೂ ಕಾರಣವಾಗಿತ್ತು. ಈ ನಡುವೆ, ಮಾಜಿ ಸಿಎಂ ಸ್ವಕ್ಷೇತ್ರದಲ್ಲಿಯೇ ಪಕ್ಷದ ನಿಷ್ಠಾವಂತ ನಾಯಕನಿಗೆ ಪರಿಷತ್ ಸ್ಥಾನ ನೀಡಬೇಕು ಎಂಬ ದೊಡ್ಡ ಆಗ್ರಹ ಕೇಳಿಬರುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಒಮ್ಮೆ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದನಿಷ್ಠಾವಂತ ಕಾರ್ಯಕರ್ತ ಸಿಂ. ಲಿಂ. ನಾಗರಾಜುಗೆ ವಿಧಾನಸಭಾ ಚುನಾವಾಣೆಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಸಾಮಾನ್ಯ ಕಾರ್ಯಕರ್ತರ ಪಕ್ಷ ಎಂದು ಸಾಬೀತು ಮಾಡಿದ್ದರು. ಇದೀಗ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಮೂಲಕ ಎಚ್. ಸಿ. ಜಯಮುತ್ತುಗೆ ಪರಿಷತ್ ಟಿಕೆಟ್ ನೀಡುವ ಮೂಲಕ ಮತ್ತೊಮ್ಮ ಸಾಬೀತು ಮಾಡುತ್ತಾರೆಯೇ ಅಥವ ಕಾರ್ಯಕರ್ತರ ಮನವಿ ಕಡೆಗಣಿಸುವವರೋ ಕಾದು ನೋಡಬೇಕಿದೆ.
ವೀರೇಂದ್ರಗೆ ಟಿಕೆಟ್ ಸಾಧ್ಯತೆ
ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಒಂದು ಸ್ಥಾನ ಪಡೆಯಲಿರುವ ಜೆಡಿಎಸ್ ಮಂಗಳವಾರ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ನಾಮಪತ್ರ ಸಲ್ಲಿಸಲು ಈ ದಿನವೇ ಅಂತಿಮವಾಗಿದೆ. ಪ್ರಸ್ತುತ ಮೂಲಗಳ ಪ್ರಕಾರ ಚಿತ್ರನಟ ದೊಡ್ಡಣ್ಣ ಅಳಿಯ ಹಾಗೂ ಪಕ್ಷದ ಮುಖಂಡ ಕೆ. ಸಿ. ವೀರೇಂದ್ರ (ಪಪ್ಪಿ) ಮತ್ತು ಪಕ್ಷದ ವಕ್ತಾರ ಟಿ.ಎ.ಶರವಣ ನಡುವೆ ಪೈಪೋಟಿ ಏರ್ಪಟ್ಟಿದ್ದು, ವೀರೇಂದ್ರ ಹೆಸರೇ ಅಂತಿಮವಾಗಲಿದೆ. ವೀರೇಂದ್ರ ಪಪ್ಪಿ 2018ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಉದ್ಯಮಿಯಾಗಿರುವ ಅವರು ಗೋವಾದಲ್ಲಿನ ಕ್ಯಾಸಿನೋ ಮಾಲೀಕರಾಗಿದ್ದಾರೆ.