ಮೈಸೂರು ಸಂಸದ ಪ್ರತಾಪ್ ಸಿಂಹ ಅಭಿವೃದ್ಧಿ ಕ್ರೆಡಿಟ್ ಕ್ರೇಜಿಗೆ ಚನ್ನಪಟ್ಟಣ ಜನರ ಆಕ್ರೋಶ
ರಾಮನಗರ, ಮಾರ್ಚ್ 12: ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಎಲ್. ನಾಗೇಂದ್ರರವರು, ಶಾಸಕರು ಮಾಡಿದ ಅಭಿವೃದ್ಧಿ ಕಾಮಗಾರಿಗಳಲ್ಲೂ ಸಂಸದರು ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಾರೆ ಎಂದು ಆರೋಪಿಸಿದ ಬೆನ್ನಲ್ಲೇ ರಾಮನಗರ ಜಿಲ್ಲೆಯ ಬೊಂಬೆನಾಡು ಚನ್ನಪಟ್ಟಣ ಯುವಕರು ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ದ ಹರಿಹಾಯ್ದಿದ್ದಾರೆ.
ನೂತನವಾಗಿ ನಿರ್ಮಾಣವಾಗುತ್ತಿರುವ ಬೆಂಗಳೂರು- ಮೈಸೂರು ದಶಪಥ ರಸ್ತೆ ಕಾಮಗಾರಿಯಲ್ಲಿ ತನ್ನೆಲ್ಲ ಕೆಲಸ ಕಾರ್ಯಗಳ ಜೊತೆಗೆ ಮತ್ತೀಕೆರೆ- ಶೆಟ್ಟಿಹಳ್ಳಿ ಹಾಗೂ ನಿಡಘಟ್ಟ ಗ್ರಾಮಗಳ ಜನರಿಗೆ ಅನುಕೂಲ ಮಾಡಿಕೊಡಲು ಹೆಚ್ಚುವರಿ ಅಂಡರ್ಪಾಸ್ ಮಾಡಿಸಿದ್ದೇನೆ ಎಂದು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವುದನ್ನು ಯುವಕರು ಟೀಕಿಸಿದ್ದಾರೆ.
ಸಾಲವಿಲ್ಲದ ದೇಶ ಯಾವುದಿದೆ?, ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಪ್ರಶ್ನೆ!
ಪ್ರಚಾರ ಮಾಡುವುದು ನಿಜಕ್ಕೂ ಅಸಹ್ಯ ತರಿಸುವಂತದ್ದು
ಯಾರದೋ ಪರಿಶ್ರಮ ಹಾಗೂ ಹೋರಾಟದ ಜಯವನ್ನು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತನ್ನ ಸಾಧನೆಯೆಂದು ಬಿಂಬಿಸಿ ಜನಸಾಮಾನ್ಯರಿಗೆ ಮುಖ ಪುಸ್ತಕದಲ್ಲಿ ಪ್ರಚಾರ ಮಾಡುವುದು ನಿಜಕ್ಕೂ ಅಸಹ್ಯ ತರಿಸುವಂತದ್ದು. ಏಕೆಂದರೆ ಬರೀ ಸಂಸದರು, ಸಚಿವರು ಹೇಳಿದ್ದಕ್ಕೆ ಅಂಡರ್ಪಾಸ್ ನಿರ್ಮಾಣವಾಗಿಲ್ಲ. ಮತ್ತಿಕೆರೆ ಮತ್ತು ಶೆಟ್ಟಿಹಳ್ಳಿ ಗ್ರಾಮದ ಪ್ರಮುಖರು ಹೈಕೊರ್ಟ್ನಲ್ಲಿ ಪ್ರಕರಣ ದಾಖಲಿಸಿ ಜನರಿಗೆ ಆಗುತ್ತಿರುವ ತೊಂದರೆಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ ಕಾರಣಕ್ಕೆ ಹೆಚ್ಚುವರಿ ಅಂಡರ್ಪಾಸ್ ನಿರ್ಮಾಣವಾಗಿದೆ ಎಂದಿದ್ದಾರೆ.
ಚನ್ನಪಟ್ಟಣದ ಮತ್ತಿಕೆರೆ ಶೆಟ್ಟಿಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಅಂಡರ್ಪಾಸ್ ದೊಡ್ಡದಾದರೂ ಊರಿನ ಹೊರಗಡೆ ಇರುವುದರಿಂದ ಹಿರಿಯರಿಗೆ, ಮಹಿಳೆಯರಿಗೆ, ಅಲ್ಲದೇ ಮತ್ತೀಕೆರೆ- ಶೆಟ್ಟಿಹಳ್ಳಿಯಲ್ಲಿ ಗ್ರಾಮದಲ್ಲಿ ಒಂದರಿಂದ ಪಿಯುಸಿಯವರೆಗೆ ಶಾಲಾ ಕಾಲೇಜು ಇರುವ ಕಾರಣ ಮಕ್ಕಳು ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿತ್ತು.
ಕರ್ನಾಟಕ ಹೈಕೊರ್ಟ್ನಲ್ಲಿ ಪಿಐಎಲ್ ದಾಖಲು
ಹಾಗೆಯೇ ಗಂಡು-ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯಗಳು, ಗ್ರಾಮ ಪಂಚಾಯಿತಿ ಕಟ್ಟಡ, ಹಾಲು ಉತ್ಪಾದಕರ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿರುವುದರಿಂದ ಈಗಿರುವ ಅಂಡರ್ಪಾಸ್ ವೈಜ್ಞಾನಿಕವಾಗಿಲ್ಲವೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದರು, ಹೆದ್ದಾರಿ ತಡೆದು ಪೋಲಿಸರ ಸಮ್ಮುಖದಲ್ಲಿ ಪ್ರತಿಭಟಿಸಿದರೂ ಸಮಸ್ಯೆ ಬಗೆಹರಿದಿರಲ್ಲಿಲ್ಲ.
ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಸಿಗದಿದ್ದ ಹಿನ್ನಲೆಯಲ್ಲಿ ಗ್ರಾಮದ ಪ್ರಮುಖರಾದ ಎಂ.ಸಿ.ಎಚ್. ಮೆಹರೀಶ್, ದಿ. ಎಂ.ವಿ. ಧರ್ಮನಂದನ, ಎಸ್.ಇ. ವಿಜೇಂದ್ರ, ಮಂಜೇಶ್ ಬಾಬು ಹಾಗೂ ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮದ ಪ್ರಮುಖರು ಹಾಗೆ ಇನ್ನು ಹಲವಾರು ಜನ ಸೇರಿ ಕರ್ನಾಟಕ ಹೈಕೊರ್ಟ್ನಲ್ಲಿ ಪಿಐಎಲ್ ದಾಖಲಿಸಿದ್ದರು.
ನಿವೃತ್ತ ಶಿಕ್ಷಕರಾದ ಸಿ. ಹೊನ್ನೆಗೌಡರ ಮಗನಾದ ಅಡ್ವೊಕೇಟ್ ಎಂ.ಎಚ್. ಪ್ರಕಾಶ್ರವರು ಸ್ವಗ್ರಾಮದ ಹಿತಾಸಕ್ತಿಗಾಗಿ ನಯಾಪೈಸೆ ಹಣ ಪಡೆಯದೆ ಹೈಕೋರ್ಟ್ನಲ್ಲಿ ಪ್ರಕರಣದ ಪರವಾಗಿ ನ್ಯಾಯಾಧೀಶರಿಗೆ ಅಂಡರ್ಪಾಸ್ ಮಾಡದೆ ಇದ್ದಲ್ಲಿ ಆಗುವ ಅನಾನುಕೂಲಗಳ ಬಗ್ಗೆ ವಾದ ಮಂಡಿಸಿದರು.
ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿ ಸಮಸ್ಯೆ ಮನವರಿಕೆ
ಇನ್ನು ಹೆಚ್ಚುವರಿ ಅಂಡರ್ಪಾಸ್ನಿಂದಾಗುವ ಅನುಕೂಲಗಳನ್ನು ಗ್ರಾಮಸ್ಥರ ನೆರವಿನಿಂದ ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿ ಸಮಸ್ಯೆಯನ್ನು ವಿವರವಾಗಿ ನ್ಯಾಯಧೀಶರಿಗೆ ಮನವರಿಕೆ ಮಾಡಿದ್ದರಿಂದಲೇ ಕೋರ್ಟ್ ಹೆಚ್ಚುವರಿ ಅಂಡರ್ಪಾಸ್ ಮಾಡಲು ಸ್ಥಳ ನಿಗದಿ ಪಡಿಸಿ ಪ್ರಮಾಣ ಪತ್ರ ಸಲ್ಲಿಸಲು ಮೂರು ತಿಂಗಳ ಗಡುವು ನೀಡಿರುತ್ತದೆ.
ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತೀಕೆರೆ- ಶೆಟ್ಟಿಹಳ್ಳಿ ಗ್ರಾಮದ ನಡುವೆ ಕೋರ್ಟ್ ನೀಡಿರುವ ರಿಟ್ ಅರ್ಜಿ ಸಂಖ್ಯೆ 10386/2020 (GM-RES-PIL)ರ ಆದೇಶದಂತೆ ಕೆಲಸ ಪ್ರಾರಂಭಿಸಿರುತ್ತಾರೆ. ಹಾಗೆಯೇ ಪ್ರಥಮ ಅರ್ಜಿದಾರರಾದ ಎಂ.ಸಿ.ಹೆಚ್. ಮೆಹರೀಷ್ ಹಾಗೂ ಅರ್ಜಿದಾರರಾದ ಇತರರು ತೋರಿದ ಸ್ಥಳದಲ್ಲಿಯೇ ಹೆಚ್ಚುವರಿ ಅಂಡರ್ಪಾಸ್ ಮಾಡಬೇಕೆಂದು ಮಾನ್ಯ ಹೈಕೋರ್ಟ್ ಆದೇಶ ನೀಡಿರುತ್ತದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಿಡಘಟ್ಟ ಗ್ರಾಮದ ಹೆಚ್ಚುವರಿ ಅಂಡರ್ಪಾಸ್ ಕೂಡ ಸಾರ್ವಜನಿಕ ಹಿತಾಸಕ್ತಿಯ ಅಡಿಯಲ್ಲಿ (ಡಬ್ಲ್ಯೂ.ಪಿ. ರಿಟ್ ಅರ್ಜಿ ಸಂಖ್ಯೆ 7206/2021)ಅಲ್ಲಿನ ಸ್ಥಳೀಯರ ಸಹಕಾರದಿಂದಲೇ ಆದದ್ದೆ ಹೊರತು ಮೈಸೂರು ಸಂಸದ ಪ್ರತಾಪ್ ಸಿಂಹ ಮಾಡಿಸಿದ ಅಂಡರ್ ಪಾಸ್ಗಳಲ್ಲ.
ಮಾಜಿ ಪ್ರಧಾನಿ ಎಚ್ಡಿಡಿ ಕ್ರೆಡಿಟ್ ಪಡೆಯಲು ಮುಂದಾಗಿಲ್ಲ
ಬೆಂಗಳೂರು
ಮೈಸೂರು
ರಾಷ್ಟ್ರೀಯ
ಹೆದ್ದಾರಿಯ
ಚನ್ನಪಟ್ಟಣದ
ಮತ್ತಿಕೆರೆ-
ಶೆಟ್ಟಿಹಳ್ಳಿ
ಹಾಗೂ
ಮದ್ದೂರಿನ
ನಿಡಘಟ್ಟದ
ಬಳಿ
ನಿರ್ಮಾಣವಾಗಿರುವ
ಹೆಚ್ಚುವರಿ
ಅಂಡರ್ಪಾಸ್ಗಳು
ಹೈಕೋರ್ಟ್
ಆದೇಶ
ಹಾಗೂ
ಗ್ರಾಮಸ್ಥರ
ಇಚ್ಛಾಶಕ್ತಿಯೇ
ಪ್ರಮುಖ
ಕಾರಣ
ಇದರಲ್ಲಿ
ಸಂಸದರ
ಪಾತ್ರವಿಲ್ಲ
ಎಂದು
ಸಾಮಾಜಿಕ
ಜಾಲತಾಣದಲ್ಲಿ
ಪೋಸ್ಟ್
ಹಾಕಲಾಗಿದೆ.
ಹಾಗೆಯೇ
ಅವೈಜ್ಞಾನಿಕ
ಅಂಡರ್ಪಾಸ್
ನಿರ್ಮಾಣದಿಂದ
ಜನರಿಗೆ
ತೊಂದರೆಯಾಗುತ್ತಿರುವುದನ್ನು
ಮನಗಂಡ
ಮಾಜಿ
ಪ್ರಧಾನಮಂತ್ರಿ
ಎಚ್.ಡಿ.
ದೇವೇಗೌಡರು
ರಾಷ್ಟ್ರೀಯ
ಹೆದ್ದಾರಿ
ಪ್ರಾಧಿಕಾರಕ್ಕೆ
ಪತ್ರ
ಬರೆದು
ಅಧಿಕಾರಿಗಳ
ಗಮನ
ಸೆಳೆದು,
ಸಮಸ್ಯೆ
ಪರಿಹಾರ
ಮಾಡುವಂತೆ
ಆಗ್ರಹಿಸಿದ್ದರು.
ಮಾಜಿ ಪ್ರಧಾನಿಗಳು ಸಮಸ್ಯೆ ಪರಿಹಾರಕ್ಕೆ ಸ್ವತಃ ಪತ್ರ ಬರದಿದ್ದರೂ, ನಿಮ್ಮ ಹಾಗೆ ತನ್ನಿಂದಲೇ ಆದದ್ದು ಎಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ ಎಂಬುದನ್ನೂ ನೀವು ಅರ್ಥ ಮಾಡಿಕೊಳ್ಳಿ ಎಂದು ಮತ್ತಿಕೆರೆ- ಶೆಟ್ಟಿಹಳ್ಳಿ ಗ್ರಾಮಸ್ಥರು ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.