ದಾಖಲೆ ಸೃಷ್ಟಿಸಿದ ಚನ್ನಪಟ್ಟಣ ಯುವಕನ "ಪ್ಲಾಸ್ಟಿಕ್" ಬಾಟಲಿ ಬರಹ
ರಾಮನಗರ, ಸೆಪ್ಟೆಂಬರ್ 25: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಮೇಲೆ ಸರ್ಕಾರ ನಿಷೇಧ ಮಾಡಿದ್ದರು, ಯಾರೂ ಸರ್ಕಾರದ ಆದೇಶ ಪಾಲಿಸುವ ಮನಸ್ಸು ಮಾಡುತ್ತಿಲ್ಲ. ಆದರೆ ಜನರಿಗೆ ಪ್ಲಾಸ್ಟಿಕ್ ದುಷ್ಪರಿಣಾಮ ಹಾಗೂ ಅದರ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲೇಬೇಕು ಎಂದು ಹೊರಟಿದ್ದಾರೆ ಚನ್ನಪಟ್ಟಣದ ಈ ಯುವಕ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಈ ಯುವಕ ಪ್ಲಾಸ್ಟಿಕ್ ಕುರಿತ ಜಾಗೃತಿಗೆ ಆಯ್ದುಕೊಂಡಿದ್ದು ವಿಭಿನ್ನ ದಾರಿ. ಆ ಭಿನ್ನ ಆಲೋಚನೆಗೀಗ ಪ್ರಶಸ್ತಿಯೂ ಒಲಿದುಬಂದಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯನ್ನೂ ಸೃಷ್ಟಿಸಿದೆ. ಏನದು ದಾಖಲೆ? ಅದರಿಂದ ಪ್ಲಾಸ್ಟಿಕ್ ಜಾಗೃತಿ ಹೇಗೆ? ಇಲ್ಲಿದೆ ಈ ಕುರಿತ ಹೆಚ್ಚಿನ ಮಾಹಿತಿ...
ಒಂದೇ ಸಮಯ ಎರಡೂ ಕೈಗಳಿಂದ ಬರೆದು ಮಂಗಳೂರಿನ ಬಾಲಕಿ ದಾಖಲೆ
ಚನ್ನಪಟ್ಟಣ ಯುವಕನ ಜಾಗೃತಿ
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದ ಯುವಕ ಶಿವಕುಮಾರ್ ಪ್ಲಾಸ್ಟಿಕ್ ಕುರಿತ ಜಾಗೃತಿಗೆ ಬಳಸಿಕೊಂಡಿದ್ದು ಪ್ಲಾಸ್ಟಿಕ್ ಬಾಟಲಿಯನ್ನು. ಒಂದು ಲೀಟರಿನ ಪ್ಲಾಸ್ಟಿಕ್ ಬಾಟಲಿಯ ಮೇಲೆ ಇಂಗ್ಲಿಷ್ ಅಕ್ಷರಗಳಲ್ಲಿ "ಡೋಂಟ್ ಯೂಸ್ ಪ್ಲಾಸ್ಟಿಕ್" ಎಂಬ ವಾಕ್ಯವನ್ನು ಬರೆದಿದ್ದಾರೆ. ಅದೂ, 1,829 ಬಾರಿ.
ಬಾಟಲಿ ಮೇಲೆ 1,829 ಬಾರಿ ಬರಹ
ಒಂದು ಲೀಟರಿನ ಬಾಟಲಿ ಮೇಲೆ ಬರೋಬ್ಬರಿ 1,829 ಬಾರಿ DONT USE PLASTIC ಎಂಬ ವಾಕ್ಯವನ್ನು ಬರೆದಿದ್ದಾರೆ. ಬಾಟಲಿ ಮೇಲೆ ಒಟ್ಟು 30,041 ಅಕ್ಷರಗಳಿವೆ. 1,829 ಬಾರಿ DONT USE PLASTIC ಎಂದು, 595 ಬಾರಿ INDIA, 292 ಬಾರಿ WORLD ಎಂದು ಬರೆದಿದ್ದಾರೆ. ಈ ರೀತಿ ಇಷ್ಟೊಂದು ಅಕ್ಷರವನ್ನು ಬಾಟಲಿ ಮೇಲೆ ಬರೆದಿದ್ದು, ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಸೃಷ್ಟಿಸಿದೆ.
ಗೂಗಲ್ ಟಿಟಿಎಸ್ ನಲ್ಲಿ ಕನ್ನಡ ಧ್ವನಿ; ಬೆಳಗಾವಿ ಅಂಧನ ಸಾಧನೆ
ಪ್ಲಾಸ್ಟಿಕ್ ಬಾಟಲಿ ಮೇಲೆ ಸಂದೇಶ
ಪ್ಲಾಸ್ಟಿಕ್ ಮುಕ್ತ ಭಾರತ ಮಾಡಬೇಕು ಎಂಬುದು ಶಿವಕುಮಾರ್ ಆಶಯ. ವೃತ್ತಿಯಲ್ಲಿ ವ್ಯಕ್ತಿ ಮತ್ತು ವಿಕಸನ ತರಬೇತುದಾರರಾಗಿರುವ ಜೊತೆಗೆ ಇವರು ಅಂತರರಾಷ್ಟ್ರೀಯ ಯೋಗಾಪಟು ಕೂಡ ಹೌದು. "ನಮ್ಮ ಪರಿಸರದ ಉಳಿವಿಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು, ಇದರ ಬಳಕೆಯಿಂದಾಗಿ ನಮ್ಮ ಆರೋಗ್ಯ ಹಾಳಾಗಲಿದೆ. ಹಾಗಾಗಿ ಜನರೇ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದು ಮನವಿಯನ್ನೂ ಮಾಡುತ್ತಾರೆ.
Recommended Video
ದಾಖಲೆಯ ಬಗ್ಗೆ ಶಿವಕುಮಾರ್ ಮಾತು
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಸೃಷ್ಟಿಸಿರುವ ಬಗ್ಗೆ ಮಾತನಾಡಿದ ಶಿವಕುಮಾರ್, "ನಾನು ಪ್ರಶಸ್ತಿ ಪಡೆಯುವ ಉದ್ದೇಶದಿಂದ ಈ ಆಯ್ಕೆ ಮಾಡಿಲ್ಲ. ಎಷ್ಟೇ ಜಾಗೃತಿ ಮೂಡಿಸಿದರೂ ಪ್ಲಾಸ್ಟಿಕ್ ಬಳಕೆ ನಿಲ್ಲುತ್ತಿಲ್ಲ. ಈ ರೀತಿ ಬರೆದು ಗಮನ ಸೆಳೆಯುವ ಮೂಲಕ ಜನಜಾಗೃತಿ ಮೂಡಿಸಲು ಮುಂದಾಗಿದ್ದೇನೆ" ಎನ್ನುತ್ತಾರೆ. ಶಿವಕುಮಾರ್ ಕಾರ್ಯಕ್ಕೆ ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.