ಚನ್ನಪಟ್ಟಣ ಬೊಂಬೆ ಉದ್ಯಮ ಉಳಿವಿಗಾಗಿ ಎರಡು ದಿನಗಳ ಪಾದಯಾತ್ರೆ
ರಾಮನಗರ, ಸೆಪ್ಟೆಂಬರ್ 24: ಅಳಿವಿನತ್ತ ಸಾಗುತ್ತಿರುವ ವಿಶ್ವವಿಖ್ಯಾತ ಚನ್ನಪಟ್ಟಣ ಬೊಂಬೆ ಉದ್ಯಮದ ಉಳಿವಿಗಾಗಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೇತೃತ್ವದಲ್ಲಿ ಬೊಂಬೆ ತಯಾರಕರು ಜಿಲ್ಲಾ ಕೇಂದ್ರ ಚಲೋ ಎಂಬ ವಿಶಿಷ್ಟ ಪಾದಯಾತ್ರೆಯನ್ನು ಚನ್ನಪಟ್ಟಣದಿಂದ ಇಂದು ಪ್ರಾರಂಭಿಸಿದರು.
ಬೊಂಬೆ ತಯಾರಕರು ಮತ್ತು ವೇದಿಕೆಯ ಕಾರ್ಯಕರ್ತರು ಪಾದಯಾತ್ರೆಯ ಮೊದಲ ದಿನದ ಇಂದು ಕೈಯಲ್ಲಿ ಮರದ ಆಟಿಕೆಗಳನ್ನು ಹಿಡಿದು ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. ನಾಳೆ ಎರಡನೇ ದಿನ ಪಾದಯಾತ್ರೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಬಳಿ ಸಭೆ ನಡೆಸಿ ಬೊಂಬೆ ಉದ್ಯಮ ಪುನಶ್ಚೇತನ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.
ಚನ್ನಪಟ್ಟಣದ ಮರದ ಬೊಂಬೆಗಳು ಮತ್ತು ಆಟಿಕೆಗಳು ವಿಶ್ವವಿಖ್ಯಾತಿಯನ್ನು ಪಡೆದಿವೆ. ದೆಹಲಿಯ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಬೊಂಬೆ ಉದ್ಯಮದ ಟ್ಯಾಬ್ಲೂ ಭಾಗವಹಿಸಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ವೈಟ್ ಹೌಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.
Recommended Video
ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ "ಮನ್ ಕೀ ಬಾತ್' ನಲ್ಲಿ ಬೊಂಬೆ ಉದ್ಯಮದ ಬಗ್ಗೆ ಪ್ರಸ್ತಾಪಿಸಿದ್ದು, ಬೊಂಬೆ ನಾಡಿನ ಹೆಗ್ಗಳಿಕೆ. ಆದರೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತ್ರ ಬೃಹತ್ ಬೊಂಬೆ ಉತ್ಪಾದನಾ ಘಟಕವನ್ನು ಕೊಪ್ಪಳದಲ್ಲಿ ಸ್ಥಾಪಿಸಲು ಮುಂದಾಗರುವುದನ್ನು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಖಂಡಿಸಿದರು.