ನೀರಿನಲ್ಲಿ ತೇಲುತ್ತಿರುವ ಚನ್ನಪಟ್ಟಣ ಸರ್ಕಾರಿ ಶಾಲೆ: ತರಗತಿಗಳು ದೇವಸ್ಥಾನಕ್ಕೆ ಸ್ಥಳಾಂತರ
ಚನ್ನಪಟ್ಟಣ ಸೆಪ್ಟೆಂಬರ್ 19: ರಾಮನಗರ ಜಿಲ್ಲೆ ಧಾರಾಕಾರ ಮಳೆಗೆ ತತ್ತರಿಸಿ ಮೂರು ವಾರಗಳು ಕಳೆದಿದ್ದರೂ ಹಲವು ಪ್ರದೇಶಗಳು ಇನ್ನೂ ಜಲಾವೃತವಾಗಿವೆ. ಹೀಗಾಗಿ ಚನ್ನಪಟ್ಟಣ ಪಟ್ಟಣದ ತಟ್ಟೆಕೆರೆ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಅಡಿಯಷ್ಟು ಮಳೆ ನೀರು ನಿಂತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ಪ್ರವೇಶಿಸಲಾಗದೆ ತರಗತಿಗಳನ್ನು ಹತ್ತಿರದ ದೇವಸ್ಥಾನಕ್ಕೆ ಸ್ಥಳಾಂತರಿಸಿದ್ದಾರೆ.
ಶಾಲೆಯಿಂದ ನೀರು ತೆಗೆಯಲು ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಬೇರೆ ದಾರಿಯಿಲ್ಲದೆ ವಿದ್ಯಾರ್ಥಿಗಳು ಸಮೀಪದ ದೇವಸ್ಥಾನದಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ತಟ್ಟೆಕೆರೆ ಬೆಂಗಳೂರಿನಿಂದ 60 ಕಿಮೀ ಮತ್ತು ರಾಮನಗರದಿಂದ 11 ಕಿಮೀ ದೂರದಲ್ಲಿದೆ. ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಮಧ್ಯಾಹ್ನದ ಊಟ ತಯಾರಿಸಲು ಅಡುಗೆಯವರು ಸೇರಿದಂತೆ ಐವರು ಶಿಕ್ಷಕರು ಹಾಗೂ ಇಬ್ಬರು ಸಿಬ್ಬಂದಿಗಳು ಇದ್ದಾರೆ.
30 ವರ್ಷ ಹಳೆಯದಾದ ಶಾಲೆ ವಿಶಾಲವಾಗಿದ್ದು, ಕಾಂಪೌಂಡ್ ಗೋಡೆಗಳನ್ನು ಹೊಂದಿದೆ. ಗೌರಿ-ಗಣೇಶ ಹಬ್ಬಕ್ಕೆ ಒಂದು ವಾರ ಮುನ್ನ ಅಂದರೆ ಆಗಸ್ಟ್ 26ರಂದು ಧಾರಾಕಾರ ಮಳೆಯಿಂದಾಗಿ ಶಾಲೆ ಸಮೀಪದಲ್ಲೇ ಇದ್ದ ಸಣ್ಣದೊಂದು ಕೆರೆ ಕಟ್ಟೆ ಒಡೆದು ಶಾಲೆಗೆ ನೀರು ನುಗ್ಗಿತ್ತು. ಇದರಿಂದ ಶಾಲಾ ಆವರಣವೆಲ್ಲಾ ಜಲಾವೃತವಾಗಿದೆ. ಶಾಲಾ ಮಾತ್ರವಲ್ಲದೇ ಶಾಲೆಯಲ್ಲಿದ್ದ ದಾಖಲಾತಿ ಪುಸ್ತಕಗಳು, ಬಿಸಿಯೂಟದ ಧಾನ್ಯಗಳು ನೀರಿನಲ್ಲಿ ಹಾಳಾಗಿದೆ. ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಲಕ್ಷ್ಮಿ, ಮಧ್ಯಾಹ್ನದ ಊಟಕ್ಕೆ ಇಟ್ಟಿದ್ದ ಧಾನ್ಯಗಳೆಲ್ಲವೂ ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಜರಾತಿ ಪುಸ್ತಕ ಹಾಗೂ ಇತರೆ ದಾಖಲೆಗಳು ಹಾಳಾಗಿವೆ. "ನಾವು ಶಾಲೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ. ಏಕೆಂದರೆ ಸುಮಾರು ನಾಲ್ಕು ಅಡಿ ನೀರು ಇದೆ" ಎಂದು ಲಕ್ಷ್ಮಿ ಅವರು ವಿವರಿಸಿದರು. ''ಶಾಲೆಯು ತಗ್ಗು ಪ್ರದೇಶದಲ್ಲಿದ್ದು, ಆವರಣಕ್ಕೆ ನೀರು ನುಗ್ಗಲು ಅನುಕೂಲವಾಗಿದೆ. ನೀರನ್ನು ತೆಗೆದರೂ, ಅದು ಹತ್ತಿರದ ಕೆರೆಯಿಂದ ಪ್ರವೇಶಿಸುತ್ತಲೇ ಇರುತ್ತದೆ"ಎಂದು ಅವರು ಹೇಳಿದರು. ಕುಡಿಯುವ ಮತ್ತು ಅಡುಗೆ ಉದ್ದೇಶಗಳಿಗಾಗಿ, ಸ್ಥಳೀಯ ನಿವಾಸಿಗಳಿಂದ ನೀರನ್ನು ಪಡೆಯಲಾಗುತ್ತದೆ ಎಂದು ಅವರು ಹೇಳಿದರು.