ಕಾಂಗ್ರೆಸ್ ತೊರೆದು ಸಿ.ಪಿ ಯೋಗೇಶ್ವರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದ ದಲಿತ ಮುಖಂಡರು
ರಾಮನಗರ, ಮೇ.14: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲಪಡಿಸಲು ಟೊಂಕ ಕಟ್ಟಿ ನಿಂತಿರುವ ಡಿಕೆ ಬ್ರದರ್ಸ್ ಗೆ ಮಾಜಿ ಸಚಿವ ಸಿಪಿ ಯೋಗೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಅದು ಅಲ್ಲದೇ ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಲವು ಮುಖಂಡರನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆ ಮಾಡಿಕೊಂಡು ತಾಲ್ಲೂಕಿನಲ್ಲಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟಿ ಸದೃಢ ಮಾಡುವ ಘೋಷಣೆ ಮಾಡಿದ ಬೆನ್ನಲ್ಲೇ ತಾಲ್ಲೂಕು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡು ಹಲವು ನಾಯಕರು ಬಿಜೆಪಿ ಸೇರಿದ್ದಾರೆ.
ರಾಮನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಶೇಖರ್ ಸೇರಿದಂತೆ ಹಲವು ಮುಖಂಡರು ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಾವು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವ ನಿರ್ಧಾರವನ್ನು ಪ್ರಕಟಿಸಿದರು. ಕ್ಷೇತ್ರದ ದಲಿತ ಮುಖಂಡರನ್ನು ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ರವರು ಕಡೆಗಣಿಸಿದ್ದಾರೆ.
ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ನಲ್ಲಿ ದಲಿತರಿಗೆ ಇದುವರೆಗೂ ಯಾವುದೇ ಸ್ಥಾನಮಾನ ನೀಡಿಲ್ಲ. ಪಕ್ಷದಲ್ಲಿ ಹೆಚ್ಚಾಗಿರುವ ಗುಂಪುಗಾರಿಕೆಯಿಂದ ಮನನೊಂದು ನಾವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ರಾಮನಗರ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಎಸ್ ಸಿ ಶೇಖರ್ ಹೇಳಿದರು.
ಚನ್ನಪಟ್ಟಣ ತಾಲ್ಲೂಕು ಕಾಂಗ್ರೆಸ್ ನಲ್ಲಿ ನಾಲ್ಕೈದು ಗುಂಪುಗಳಿವೆ. ಈ ಗುಂಪುಗಾರಿಕೆಯಲ್ಲಿ ಹೊಂದಾಣಿಕೆ ಇಲ್ಲದ ಕಾರಣ ತಾಲ್ಲೂಕಿನ ದಲಿತರಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿರುವ ದಲಿತರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ನೆಪಮಾತ್ರಕ್ಕೆ ಹುದ್ದೆ ನೀಡುತ್ತಾರೆಯೇ ವಿನಃ ಅಧಿಕಾರ ಮಾತ್ರ ಶೂನ್ಯ. ಇದು ವೇದಿಕೆ ಹಂಚಿಕೊಳ್ಳುವ ಸಂದರ್ಭದಲ್ಲಿಯೂ ಮುಂದುವರೆದು ಅಲ್ಲಿಯೂ ಕಡೆಗಣಿಸುತ್ತಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ತಬ್ಬಲಿಗಳಾಗಿದ್ದಾರೆ:
ಕಳೆದ ವಿಧಾನಸಭಾ ಚನಾವಣೆಯಲ್ಲಿ ಹೆಚ್.ಎಂ.ರೇವಣ್ಣ ಸ್ಪರ್ಧೆ ಮಾಡಿದ ನಂತರ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರು ತಬ್ಬಲಿಗಳಾಗಿದ್ದಾರೆ. ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂದರೆ ಆಗುವುದಿಲ್ಲ. ಕ್ಷೇತ್ರಕ್ಕೆ ಸಮರ್ಥವಾಗಿರುವ ಒಬ್ಬ ನಾಯಕನನ್ನು ಗುರುತಿಸಿ ಆತನಿಗೆ ಪಟ್ಟಕಟ್ಟಿ ಎಂದು ಹಲವು ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಬಳಿ ಮನವಿ ಮಾಡಿದರೂ ಗಮನ ಹರಿಸದಿರುವುದು ನಮ್ಮ ನಮಗೆ ನೋವಾಗಿದೆ.
ಪ್ರತಿ ಚುನಾವಣೆಯಲ್ಲೂ ಹೊಸ ಹೊಸ ಅಭ್ಯರ್ಥಿಗಳನ್ನು ಕರೆತಂದು ಚುನಾವಣೆಗೆ ನಿಲ್ಲಿಸಿ, ಅವರನ್ನು ಬಲಿಪಶುಗಳಾಗಿಸಿ ಸೋಲಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ನಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ದಲಿತರ ನಡೆ ಯೋಗೇಶ್ವರ್ ಕಡೆ ಎಂಬ ಧ್ಯೇಯೋದ್ದೇಶದೊಂದಿಗೆ ಬಿಜೆಪಿ ಪಕ್ಷ ಸೇರುತ್ತಿದ್ದೇವೆ.
ಇದೇ ಸಂದರ್ಭದಲ್ಲಿ ಡಾ.ಲೋಕಾನಂದ ಮಾತನಾಡಿ, "ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಾವೆಲ್ಲರೂ ಸಿ.ಪಿ. ಯೋಗೇಶ್ವರ್ ಜೊತೆಯಲ್ಲೇ ಇದ್ದು ಹಲವಾರು ಕಾರಣಗಳಿಂದ ತಾಲ್ಲೂಕಿನ ಎಲ್ಲಾ ದಲಿತ ಮುಖಂಡರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರೆಲ್ಲರನ್ನೂ ಒಗ್ಗೂಡಿಸಿ ಮುಂದಿನ ಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ ರವರ ಕೈ ಬಲಪಡಿಸಲು ಅನ್ಯ ಪಕ್ಷಗಳಲ್ಲಿರುವ ಎಲ್ಲಾ ದಲಿತರು ಒಗ್ಗಟ್ಟಾಗುತ್ತಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು," ತಿಳಿಸಿದರು.
ಡಿ.ಕೆ ಸುರೇಶ್ ದುರಹಂಕಾರದಿಂದ ವರ್ತಿಸಿದರು
ಮಾಜಿ ನಗರಸಭಾ ಸದಸ್ಯ ನಾರಾಯಣಮೂರ್ತಿ ಮಾತನಾಡಿ, "ರಾಜ್ಯ ಮಟ್ಟದ ನಾಯಕರು ತಾಲ್ಲೂಕಿನ ದಲಿತ ಮುಖಂಡರ ಬಗ್ಗೆ ಕಿಂಚಿತ್ತೂ ವಿಶ್ವಾಸ ಗಳಿಸಲು ಪ್ರಯತ್ನಿಸಲಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡಲೂ ಸಹ ರಾಜ್ಯದಲ್ಲಿ ಅಡ್ಡಗಾಲು ಹಾಕಿ ನಿಂತವರೇ ಹೆಚ್ಚು. ಸಮಸ್ಯೆಗೆ ಸಂಬಂಧಿಸಿದಂತೆ ಪತ್ರ ನೀಡಿದಾಗಲೂ ಸಹ ಸಂಸದ ಡಿ.ಕೆ ಸುರೇಶ್ ರವರು ದುರಹಂಕಾರದಿಂದ ಪತ್ರವನ್ನು ಹರಿದುಹಾಕುವ ಮೂಲಕ ದಲಿತರಿಗೆ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇವೆ," ಎಂದರು.
Recommended Video