ಹಳ್ಳಿ ಹಳ್ಳಿಗಳಿಗೆ ತೆರಳಿ ಮಕ್ಕಳಿಗೆ ಪಾಠ; ಮಾದರಿಯಾದ ಚನ್ನಪಟ್ಟಣ ಬಿಇಒ
ರಾಮನಗರ, ಸೆಪ್ಟೆಂಬರ್ 1: ಕೊರೊನಾ ಭೀತಿಯಿಂದಾಗಿ ಇನ್ನೂ ಶಾಲೆಗಳು ಪ್ರಾರಂಭವಾಗಿಲ್ಲ. ಖಾಸಗಿ ಶಾಲೆಗಳು ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದರೂ ಗ್ರಾಮೀಣ ಭಾಗದ ಮಕ್ಕಳು ಹಾಗೂ ಸರ್ಕಾರಿ ಶಾಲೆಯ ಮಕ್ಕಳು ಆನ್ಲೈನ್ ಕ್ಲಾಸ್ ನಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆ ಪ್ರಾರಂಭಿಸಿದೆ.
Recommended Video
ಸರ್ಕಾರದ ವಿದ್ಯಾಗಮ ಯೋಜನೆಯ ಯಶಸ್ಸಿಗೆ ಟೊಂಕ ಕಟ್ಟಿರುವ ಚನ್ನಪಟ್ಟಣ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಸ್ವತಃ ಪುಸ್ತಕ ಹಿಡಿದು ಪಡಸಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ವಿದ್ಯಾಗಮ ಯಶಸ್ಸಿಗೆ ತಾಲ್ಲೂಕಿನ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸ್ವತಃ ಬಿಇಓ ಪುಸ್ತಕ ಹಿಡಿದು ದೇವಾಲಯದ ಆವರಣ, ಪಡಸಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.
ದೇವಾಲಯ, ಅರಳಿಕಟ್ಟೆ ಅಂಗಳದಲ್ಲಿ ಕಲಿಕೆ
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ನಿರಂತರ ಕಲಿಕೆ ನೀಡುವ ಸಲುವಾಗಿ ಸಮರ್ಪಕವಾದ ಕ್ರಿಯಾ ಯೋಜನೆ ರೂಪಿಸಿ, ವಿದ್ಯಾಗಮ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತಂದಿದ್ದಾರೆ ನಾಗರಾಜ್. ತಾಲ್ಲೂಕಿನ ಶಿಕ್ಷಕ ವರ್ಗದವರಿಗೆ ಅಗತ್ಯ ತರಬೇತಿ, ಮಾರ್ಗದರ್ಶನವನ್ನು ನೀಡಿ ಶಾಲೆಯ ಬದಲಾಗಿ ಹಳ್ಳಿಗಳಲ್ಲಿನ ದೇವಾಲಯ, ಸಮುದಾಯ ಭವನ, ಅರಳಿಕಟ್ಟೆ, ದೊಡ್ಡ ಮನೆಗಳ ಪಡಸಾಲೆಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಮಾಸ್ಕ್, ಸ್ಯಾನಿಟೈಸರ್ ಸೌಲಭ್ಯದೊಂದಿಗೆ ಬೋಧನಾ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ.
ಖಾಸಗಿ ಶಾಲೆಯ ಆನ್ಲೈನ್ ಕ್ಲಾಸ್ ಗೆ ಸೆಡ್ಡು ಹೊಡೆದ ಸರ್ಕಾರದ ವಿದ್ಯಾಗಮ
ಹಳ್ಳಿಹಳ್ಳಿಗಳಿಗೆ ತೆರಳಿ ಪಾಠ
ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳು ಗುಣಾತ್ಮಕ ಕಲಿಕೆಯಲ್ಲಿ ತೊಡಗುವಂತೆ ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಪ್ರತಿನಿತ್ಯವೂ ಕಚೇರಿಯ ಕಾರ್ಯಭಾರದ ಒತ್ತಡದ ನಡುವೆಯೂ ಹಳ್ಳಿ ಹಳ್ಳಿಗಳಿಗೆ ತೆರಳಿ ಸ್ವತಃ ಪಾಠ ಪ್ರವಚನಗಳಲ್ಲಿ ತೊಡಗಿ ಮಕ್ಕಳಿಗೆ ಗಣಿತ, ಕನ್ನಡ ವ್ಯಾಕರಣ ಮತ್ತು ಸಮಾಜ ವಿಜ್ಞಾನ ಪಠ್ಯದ ಬೋಧನೆ ಮಾಡುವ ಮೂಲಕ ಶಿಕ್ಷಕರಿಗೆ ಹುರಿದುಂಬಿಸುತ್ತಿದ್ದಾರೆ .
ಶೈಕ್ಷಣಿಕ ವಲಯದಲ್ಲಿ ಬದಲಾವಣೆ ತಂದ ಅಧಿಕಾರಿ
ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿ ತಾಲ್ಲೂಕಿನ ಶೈಕ್ಷಣಿಕ ವಲಯದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿರುವ ನಾಗರಾಜುರವರು ಕಚೇರಿಯ ಆಡಳಿತಾತ್ಮಕ ಕಾರ್ಯಗಳಿಗೆ ಮಿಂಚಿನ ವೇಗ ನೀಡಿ, ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಮೂಲಕ ಶಿಕ್ಷಕ ಸ್ನೇಹಿ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಮರ್ಪಕ ಕಾರ್ಯ ಯೋಜನೆಯನ್ನು ರೂಪಿಸಿ ಶಿಕ್ಷಕರಿಗೆ ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಿದ್ದರು.
ಕೋವಿಡ್ ಕರ್ತವ್ಯದಿಂದ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿನಾಯಿತಿ
ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಶ್ರಮ
ಕೊರೊನಾ ಲಾಕ್ಡೌನ್ ರಜಾ ಅವಧಿಯಲ್ಲಿಯೂ ವಿದ್ಯಾರ್ಥಿಗಳಿಗೆ ಆನ್ಲೈನ್ ಬೋಧನೆ ಮತ್ತು ಪರೀಕ್ಷೆ ನಡೆಸುವ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚನ್ನಪಟ್ಟಣ ತಾಲ್ಲೂಕು ರಾಮನಗರ ಜಿಲ್ಲೆಗೆ ಪ್ರಥಮ ಸ್ಥಾನ ಮತ್ತು ರಾಜ್ಯದಲ್ಲಿ ಹತ್ತನೇ ಸ್ಥಾನ ಪಡೆಯುವಲ್ಲಿ ಶ್ರಮಿಸಿದ್ದಾರೆ. ಈ ರೀತಿ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ಅವರ ಕಾರ್ಯವೈಖರಿಗೆ ತಾಲ್ಲೂಕಿನ ಶಿಕ್ಷಕವೃಂದ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .